ಚಿನ್ನಸ್ವಾಮಿ ಕ್ರೀಡಾಂಗಣ
From Wikipedia
ಎಮ್. ಚಿನ್ನಸ್ವಾಮಿ ಕ್ರೀಡಾಂಗಣ ಅಥವಾ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ (ಕೆ. ಎಸ್ ಸಿ. ಏ) ಕ್ರೀಡಾಂಗಣ ಬೆಂಗಳೂರು ಮತ್ತು ಕರ್ನಾಟಕ ರಾಜ್ಯದಲ್ಲಿರುವ ಅಂತರಾಷ್ಟ್ರೀಯ ಮಟ್ಟದ ಏಕೈಕ ಕ್ರಿಕೆಟ್ ಕ್ರೀಡಾಂಗಣ. ಮೂಲತಃ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಕ್ರೀಡಾಂಗಣ ಎಂದು ಕರೆಯಲಾಗುತಿದ್ದ ಈ ಕ್ರೀಡಾಂಗಣ, ತದನಂತರ ನಾಲ್ಕು ದಶಕಗಳ ಕಾಲ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸೇವೆ ಮಾಡಿದ ಹಾಗು ೧೯೭೭ರಿಂದ ೧೯೮೦ರವರೆಗೆ ಭಾರತಿಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿದ್ದ ಎಮ್. ಚಿನ್ನಸ್ವಾಮಿಯವರ ಹೆಸರನ್ನು ಪಡೆಯಿತು. ಸುಮಾರು ೫೫,೦೦೦ ಆಸನ ಕ್ಷಮತೆ ಹೊಂದಿರುವ ಈ ಕ್ರೀಡಾಂಗಣ ಬೆಂಗಳೂರು ನಗರದ ಮಧ್ಯದಲ್ಲಿ ಕಬ್ಬನ್ ಪಾರ್ಕ್ ಹಾಗು ಮಹಾತ್ಮಗಾಂಧಿ ರಸ್ತೆಗೆ ಹೊಂದಿಕೊಂಡಿದೆ.
ಪರಿವಿಡಿ |
[ಬದಲಾಯಿಸಿ] ವಿವರ
ಕರ್ನಾಟಕ ರಾಜ್ಯ ಸರ್ಕಾರದಿಂದ ನಿವೇಶನ ಪಡೆದ ನಂತರ ಈ ಕ್ರೀಡಾಂಗಣದ ಅಡಿಗಲ್ಲು ಮೇ ೧೯೬೯ರಲ್ಲಿ ಹಾಕಲಾಯಿತು ಮತ್ತು, ನಿರ್ಮಾಣ ಕಾರ್ಯ ೧೯೭೦ರಲ್ಲಿ ಪ್ರಾರಂಭಿಸಲಾಯಿತು. ೧೯೭೨-೭೩ರಲ್ಲಿ ಕ್ರಿಕೆಟ್ ಋತುವಿನಲ್ಲಿ ಮೊದಲ ದರ್ಜೆಯ ಕ್ರಿಕೆಟ್ ಪಂದ್ಯ ಈ ಕ್ರೀಡಾಂಗಣದಲ್ಲಿ ಆಡಲ್ಪಟ್ಟಿತು. ಈ ಕ್ರೀಡಾಂಗಣ ೧೯೭೪-೭೫ರಲ್ಲಿ ಭಾರತ ಹಾಗು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಕಾಲದಲ್ಲಿ ಟೆಸ್ಟ್ ಕೇಂದ್ರದ ಅರ್ಹತೆ ಪಡೆಯಿತು. ೧೯೭೪ರ ನವೆಂಬರ್ ೨೨-೨೭ರ ನಡುವೆ ನಡೆದ ಈ ಟೆಸ್ಟಿನಲ್ಲಿ ಆಕಾಲಿಕ ಮಳೆಯಿಂದ ಮೊದಲೆರಡು ದಿನ ಆಟ ತಡವಾಗಿ ಪ್ರಾರಂಭವಾದರೂ, ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ಟೈಗರ್ ಪಟೌಡಿ ನೇತೃತ್ವದ ಭಾರತವನ್ನು ೨೬೭ ರನ್ನುಗಳಿಂದ ಮಣಿಸಿತು. ಇದೆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ನ ಹೆಸರಾಂತ ದಾಂಡಿಗರಾದ ವಿವಿಯನ್ ರಿಚರ್ಡ್ಸ್ ಹಾಗು ಗೊರ್ಡನ್ ಗ್ರೀನಿಡ್ಜ್ ಟೆಸ್ಟ್ ರಂಗಕ್ಕೆ ಪದಾರ್ಪಣೆ ಮಾಡಿದರು. ಈ ಕ್ರೀಡಾಂಗಣದಲ್ಲಿ ಭಾರತಕ್ಕೆ ಪ್ರಥಮ ವಿಜಯ ೧೯೭೬-೭೭ರಲ್ಲಿ ಟೋನಿ ಗ್ರೆಗ್ ನೇತೃತ್ವದ ಇಂಗ್ಲೆಂಡ್ ತಂಡದ ವಿರುದ್ಧ ದೊರಕಿತು. ಈ ಕ್ರೀಡಾಂಗಣದಲ್ಲಿ ೧೯೮೨ರ ಸೆಪ್ಟಂಬರ್ ೨೬ರೊಂದು ಪ್ರಥಮ ಬಾರಿಗೆ ಎಕದಿನದ ಅಂತರಾಷ್ಟ್ರೀಯ ಪಂದ್ಯ. ಭಾರತ ಹಾಗು ಶ್ರೀಲಂಕಾ ನಡುವೆ ನೆಡೆಯಿತು. ಭಾರತ ಈ ಪಂದ್ಯದಲ್ಲಿ ೬ ವಿಕೆಟ್ ಜಯ ಸಾಧಿಸಿತು.
೧೯೯೬ ವಿಶ್ವ ಕಪ್ ಪಂದ್ಯಾವಳಿಯ ಸಮಯದಲ್ಲಿ ನೆಡೆದ ನವೀಕರಣದೊಂದಿಗೆ ಈ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಹೊನಲು ಬೆಳಕಿನ ವ್ಯವಸ್ಥೆ ಮಾಡಲಾಯಿತು. ಈ ಕ್ರೀಡಾಂಗಣದಲ್ಲಿ ಪ್ರಥಮ ಬಾರಿಗೆ ಹಗಲು-ರಾತ್ರಿ ಎಕದಿನದ ಅಂತರಾಷ್ಟ್ರೀಯ ಪಂದ್ಯ ೧೯೯೬ರ ಮಾರ್ಚ್ ೯ರೊಂದು ಭಾರತ ಹಾಗು ಪಾಕಿಸ್ತಾನದ ನಡುವೆ ನೆಡೆಯಿತು. ಈ ವಿಶ್ವ ಕಪ್ ಕ್ವಾಟರ್ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು ೩೯ ರನ್ನುಗಳಿಂದ ಪರಾಭವಗೊಳಿಸಿತು. ಈ ಕ್ರೀಡಾಂಗಣದ ಎರಡು ಬೌಲಿಂಗ್ ತುದಿಗಳು ಪೆವಿಲಿಯನ್ ತುದಿ ಹಾಗು ಬೆಮೆಲ್(ಬಿ.ಇ.ಎಮ್.ಎಲ್) ತುದಿ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ೨೦೦೦ ಇಸವಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿತು ಇದರಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಭಾರತದ ಮುಂದಿನ ಪೀಳಿಗೆಯ ಕ್ರಿಕೆಟ್ ಪಟುಗಳನ್ನು ತಯಾರಿಸುವ ತಾಣವಾಗಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಸದ್ಯದಲ್ಲಿಯೆ ಕ್ರೀಡಾಂಗಣದ ಆಸನ ಕ್ಷಮತೆಯನ್ನು ೭೦,೦೦೦ಕ್ಕೆ ಹೆಚ್ಚಿಸಲಿದೆ. ಭಾರತದ ಶ್ರೇಷ್ಟ ಕ್ರಿಕೆಟ್ ಕ್ರೀಡಾಂಗಣಗಳಲ್ಲೊಂದು ಎಂದು ಪರಿಗಣಿಸಲಾಗುವ ಈ ಕ್ರೀಡಾಂಗಣದಲ್ಲಿ ಹಲವಾರು ರೋಮಾಂಚಕಾರಿ ಪಂದ್ಯಗಳ ನೆಡೆದಿವೆ ಹಾಗು ಹಲವಾರು ದಾಖಲೆಗಳು ಮಾಡಲ್ಪಟ್ಟಿದೆ.
[ಬದಲಾಯಿಸಿ] ಕ್ರೀಡಾಂಗಣದ ಅಂಕಿಅಂಶಗಳು
ಸ್ಥಾಪನೆ: | ೧೯೬೯ |
ಮೊದಲ ಟೆಸ್ಟ್: | ೨೨-೨೭ ನವೆಂಬರ್ ೧೯೭೪ |
ಮೊದಲ ಎಕದಿನದ ಅಂತರಾಷ್ಟ್ರೀಯ ಪಂದ್ಯ: | ೨೬ ಸೆಪ್ಟಂಬರ್ ೧೯೮೨ |
ಮೊದಲ ಹಗಲು-ರಾತ್ರಿ ಎಕದಿನದ ಅಂತರಾಷ್ಟ್ರೀಯ ಪಂದ್ಯ: | ೯ ಮಾರ್ಚ್ ೧೯೯೬ |
ತುದಿಗಳು: | ಪೆವಿಲಿಯನ್ ತುದಿ ಬೆಮೆಲ್(ಬಿ.ಇ.ಎಮ್.ಎಲ್) ತುದಿ |
ಆಸನ ಕ್ಷಮತೆ: | ೫೫,೦೦೦ |
ಹೊನಲು ಬೆಳಕಿನ ವ್ಯವಸ್ಥೆ: | ಇದೆ |
[ಬದಲಾಯಿಸಿ] ದಾಖಲೆಗಳು
[ಬದಲಾಯಿಸಿ] ಟೆಸ್ಟ್ ಪಂದ್ಯ ದಾಖಲೆಗಳು
- ಇನಿಂಗ್ಸೊಂದರಲ್ಲಿ ಅತಿ ಹೆಚ್ಚಿನ ಮೊತ್ತ : ಭಾರತದ ವಿರುದ್ದ ಪಾಕಿಸ್ತಾನ, ೫೭೦ ಆಲ್ ಔಟ್, ೨೪-೨೮ ಮಾರ್ಚ್ ೨೦೦೫
- ಇನಿಂಗ್ಸೊಂದರಲ್ಲಿ ಅತಿ ಹೆಚ್ಚಿನ ವೈಯಕ್ತಿಕ ಮೊತ್ತ: ಭಾರತದ ವಿರುದ್ದ ಪಾಕಿಸ್ತಾನದ ಯುನಿಸ್ ಖಾನ್, ೨೬೭, ೨೪-೨೮ ಮಾರ್ಚ್ ೨೦೦೫
- ಇನಿಂಗ್ಸೊಂದರಲ್ಲಿ ಶ್ರೇಷ್ಟ ಬೌಲಿಂಗ್ ಪ್ರದರ್ಶನ: ಪಾಕಿಸ್ತಾನದ ವಿರುದ್ದ ಭಾರತದ ಮಣೀಂದರ್ ಸಿಂಗ್, ೧೮.೨-೮-೨೭-೭, ೧೩-೧೭ ಮಾರ್ಚ್ ೧೯೮೭
- ಅತಿ ಹೆಚ್ಚಿನ ರನ್ನುಗಳು: ಭಾರತದ ಸುನಿಲ್ ಗವಾಸ್ಕರ್, ೬೦೦ ರನ್ನುಗಳು, ೮ ಪಂದ್ಯಗಳು (೧೨ ಇನಿಂಗ್ಸ್), ಸರಾಸರಿ: ೫೪.೫೪, ಅತಿ ಹೆಚ್ಚಿನ ವೈಯಕ್ತಿಕ ಮೊತ್ತ: ೧೭೨
- ಅತಿ ಹೆಚ್ಚಿನ ವಿಕೆಟುಗಳು: ಭಾರತದ ಅನಿಲ್ ಕುಂಬ್ಳೆ, ೩೫ ವಿಕೆಟುಗಳು ೭ ಪಂದ್ಯಗಳು (೨೧೯೪ ಎಸತಗಳು), ಕೊಟ್ಟ ರನ್ನುಗಳು: ೧೦೮೦, ಸರಾಸರಿ: ೩೦.೮೫ ಶ್ರೇಷ್ಟ ಬೌಲಿಂಗ್ ಪ್ರದರ್ಶನ: ೬/೯೮
[ಬದಲಾಯಿಸಿ] ಎಕ ದಿನ ಅಂತರಾಷ್ಟ್ರೀಯ ಪಂದ್ಯಗಳ ದಾಖಲೆಗಳು
- ಪಂದ್ಯವೊಂದರಲ್ಲಿ ಅತಿ ಹೆಚ್ಚಿನ ಮೊತ್ತ: ೩೪೭-೨ ಭಾರತದ ವಿರುದ್ದ ಆಸ್ಟ್ರೇಲಿಯಾ, ೧೨ ನವೆಂಬರ್ ೨೦೦೩
- ಪಂದ್ಯವೊಂದರಲ್ಲಿ ಅತಿ ಹೆಚ್ಚಿನ ವೈಯಕ್ತಿಕ ಮೊತ್ತ: ಭಾರತದ ವಿರುದ್ದ ಶ್ರೀಲಂಕಾದ ರಾಯ್ ಡಯಾಸ್, ೧೨೧, ೨೬ ಸೆಪ್ಟೆಂಬರ್ ೧೯೮೨
- ಪಂದ್ಯವೊಂದರಲ್ಲಿ ಶ್ರೇಷ್ಟ ಬೌಲಿಂಗ್ ಪ್ರದರ್ಶನ: ಭಾರತದ ವಿರುದ್ದ ಇಂಗ್ಲ್ಯಾಂಡಿನ ಪೌಲ್ ಜಾರ್ವಿಸ್, ೮.೪-೧-೩೫-೫, ೨೬ ಫೆಬ್ರುವರಿ ೧೯೯೩
- ಅತಿ ಹೆಚ್ಚಿನ ರನ್ನುಗಳು: ಭಾರತದ ಸಚಿನ್ ತೆಂಡುಲ್ಕರ್, ೩೬೫ ರನ್ನುಗಳು, ೭ ಪಂದ್ಯಗಳು, ಸರಾಸರಿ: ೫೨.೧೪, ಅತಿ ಹೆಚ್ಚಿನ ವೈಯಕ್ತಿಕ ಮೊತ್ತ:೧೧೭
- ಅತಿ ಹೆಚ್ಚಿನ ವಿಕೆಟುಗಳು: ಭಾರತದ ಜಾವಗಲ್ ಶ್ರೀನಾಥ್, ೧೦ ವಿಕೆಟುಗಳು, ೫ ಪಂದ್ಯಗಳು(೨೭೩ ಎಸತಗಳು), ಕೊಟ್ಟ ರನ್ನುಗಳು: ೨೫೧, ಸರಾಸರಿ: ೨೫.೧೦ ಶ್ರೇಷ್ಟ ಬೌಲಿಂಗ್ ಪ್ರದರ್ಶನ: ೫/೪೧
[ಬದಲಾಯಿಸಿ] ವೈಯಕ್ತಿಕ ದಾಖಲೆಗಳು
- ರಿಚರ್ಡ್ ಹ್ಯಾಡ್ಲಿ ಇಯಾನ್ ಬೊಥಮ್ರವರ ಅತಿ ಹೆಚ್ಚು ವಿಕೆಟ್ಗಳ ದಾಖಲೆ(೩೭೪) ಮೀರಿಸಿದರು (೧೨ ನವೆಂಬರ್ ೧೯೮೮)
- ಕಪಿಲ್ ದೇವ್ ರಿಚರ್ಡ್ ಹ್ಯಾಡ್ಲಿಯವರ ಅತಿ ಹೆಚ್ಚು ವಿಕೆಟ್ಗಳ ದಾಖಲೆ(೪೩೧) ಸರಿಗಟ್ಟಿದರು (೨೭ ಜನವರಿ ೧೯೯೪)
- ಅನಿಲ್ ಕುಂಬ್ಳೆ ತಮ್ಮ ಟೆಸ್ಟ್ ಜೀವನದ ೧೦೦(೧೯೯೫/೯೬), ೩೦೦(೨೦೦೧/೦೨) ಹಾಗು ೪೦೦ನೆ(೬ ಅಕ್ಟೊಬರ್ ೨೦೦೪) ವಿಕೆಟ್ ಈ ಕ್ರೀಡಾಂಗಣದಲ್ಲಿ ಪಡೆದರು.
- ಮೊಹಮ್ಮದ್ ಅಜರುದ್ದೀನ್ ತಮ್ಮ ಟೆಸ್ಟ್ ಜೀವನದ ೧೦೦ನೆ ಕ್ಯಾಚ್ ಈ ಕ್ರೀಡಾಂಗಣದಲ್ಲಿ ಹಿಡಿದರು.
- ವಿವಿಯನ್ ರಿಚರ್ಡ್ಸ್ ಹಾಗು ಗೊರ್ಡನ್ ಗ್ರೀನಿಡ್ಜ್ ಈ ಕ್ರೀಡಾಂಗಣದಲ್ಲಿ ಟೆಸ್ಟರಂಗಕ್ಕೆ ಪದಾರ್ಪಣೆ ಮಾಡಿದರು (೨೨-೨೭ ನವೆಂಬರ್ ೧೯೭೪)