ಚಿ.ಸದಾಶಿವಯ್ಯ
From Wikipedia
ಚಿ.ಸದಾಶಿವಯ್ಯ -(೧೯೦೮,ಫೆಬ್ರುವರಿ ೨೩) ಕನ್ನಡ ಚಿತ್ರರಂಗದ ಪ್ರಮುಖ ಚಿತ್ರಸಾಹಿತಿಗಳಲ್ಲಿ ಒಬ್ಬರು. ಕನ್ನಡದ ಮತ್ತೊಬ್ಬ ಚಿತ್ರಸಾಹಿತಿ ಚಿ.ಉದಯಶಂಕರ್, ಮತ್ತು ಚಿತ್ರ ನಿರ್ದೇಶಕ ಚಿ.ದತ್ತುರಾಜ್ ಸದಾಶಿವಯ್ಯನವರ ಮಕ್ಕಳು.
ಸದಾಶಿವಯ್ಯ ಬಾಲ್ಯದಿಂದಲೇ ಸಾಹಿತ್ಯ ಮತ್ತು ರಂಗಭೂಮಿಯತ್ತ ಆಸಕ್ತಿ ಹೊಂದಿದ್ದರು . ೪೦ರ ದಶಕದಲ್ಲಿ ಇವರು ರಚಿಸಿದ ಮಾಂಗಲ್ಯ ನಾಟಕ ರಾಜ್ಯದ ಅನೇಕ ಕಡೆ ಯಶಸ್ವಿ ಪ್ರದರ್ಶನ ಕಂಡಿತು. ಬಿ.ಎ.. ಅಯ್ಯಂಗಾರರ ಅಮೆಚೂರ್ ಡ್ರಮಾಟಿಕ್ ಅಸೋಸಿಯೇಷನ್ ಸಂಸ್ಥೆಯ ಒಡನಾಟ ಹೊಂದಿದ್ದರು. ಸದಾಶಿವಯ್ಯ ತೆನಾಲಿ ರಾಮಕೃಷ್ಣ ನಾಟಕದಲ್ಲಿ ಕೃಷ್ಣದೇವರಾಯನ ಪಾತ್ರಕ್ಕೆ ಪ್ರಸಿದ್ಧರಾಗಿದ್ದರು. ಕಲಾ ಕುಸುಮ ಸ್ವಂತ ನಾಟಕ ಸಂಸ್ಥೆ ಸ್ಥಾಪಿಸಿಕೊಂಡಿದ್ದರು. ಜೀವನ ನಿರ್ವಹಣೆಗಾಗಿ ಬೆಂಗಳೂರಿನ ದೇಶೀಯ ವಿದ್ಯಾಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಗಣಿತ ಮತ್ತು ಕನ್ನಡ ಅಧ್ಯಾಪನದಲ್ಲಿ ಹೆಸರು ಮಾಡಿದ್ದರು. ಶಾಲೆಯಲ್ಲಿಯೂ ಕನ್ನಡ ರಂಗಭೂಮಿಯ ವಾತಾವರಣ ನಿರ್ಮಿಸಿದರು. ಕನ್ನಡ ರಂಗಮಂದಿರ ಎಂಬ ಹವ್ಯಾಸಿ ತಂಡ ಕಟ್ಟಿದರು. ಮಕ್ಕಳೇ ದೇವರು, ಶಿವಾಜಿಯ ಬಾಲ್ಯ, ಶಿವಮಂಗಳ ಮೊದಲಾದ ಅವರ ನಾಟಕಗಳು ಪ್ರಸಿದ್ಧವಾದವು.
ಕೆ.ಸದಾಶಿವಯ್ಯನವರಿಗೆ ಬಿ.ಎಸ್. ಗರುಡಾಚಾರ್ ಮತ್ತು ಬಿ.ಆರ್.ಪಂತುಲು ಆತ್ಮೀಯರಾಗಿದ್ದರು. ಪಂತುಲು ತಮ್ಮ ಮೊದಲ ತೇದಿ ಚಿತ್ರದಲ್ಲಿ ಸದಾಶಿವಯ್ಯನವರಿಗೆ ಚಿತ್ರಸಾಹಿತಿಯಾಗುವ ಅವಕಾಶ ಕಲ್ಪಿಸಿದರು. ಆರು ತಿಂಗಳು ಶಾಲೆಯ ಕೆಲಸಕ್ಕೆ ರಜೆ ಹಾಕಿ, ಚಿತ್ರದ ಸಾಹಿತ್ಯ ರಚನೆ ಮತ್ತು ಸಹ-ನಿರ್ದೇಶನದ ಹೊಣೆಯನ್ನು ನಿರ್ವಹಿಸಿದರು. ಚಿತ್ರಗಳಲ್ಲಿ ಹೆಚ್ಚಿನ ಅವಕಾಶ ದೊರಕಿದರೂ, ಕುಟುಂಬದ ಜವಾಬ್ದಾರಿಗಾಗಿ ಶಿಕ್ಷಕ ವೃತ್ತಿಗೆ ಹಿಂತಿರುಗಿದರು.
ಗರುಡಾಚಾರ್ಯರ ತಮ್ಮ ಬಿ.ಎಸ್.ರಂಗಾ ತಮ್ಮ ಭಕ್ತ ಮಾರ್ಕಾಂಡೇಯ ಚಿತ್ರದಲ್ಲಿ ಸದಾಶಿವಯ್ಯನವರಿಗೆ ಅವಕಾಶ ಕೊಟ್ಟರು. ಈ ಬಾರಿ ಜೀವನಕ್ಕೆ ಅಗತ್ಯವಾದ ಕೆಲಸವನ್ನು ಚಿತ್ರರಂಗದಿಂದಲೇ ತಾವು ಒದಗಿಸುವುದಾಗಿ ಹೇಳಿ ಬಲವಂತದಿಂದ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಡಿಸಿದರು. ಬಿ.ಎಸ್.ರಂಗಾ ನಿರ್ಮಿಸಿದ ಅಮರಶಿಲ್ಪಿ ಜಕಣಾಚಾರಿಪ್ರಸಿದ್ಧಿ ತಂದು ಕೊಟ್ಟ ಚಿತ್ರ. ಈ ಚಿತ್ರದ ಗೀತೆಗಳೆಲ್ಲ ಜನಪ್ರಿಯವಾದವು.
[ಬದಲಾಯಿಸಿ] ಚಿ.ಸದಾಶಿವಯ್ಯ ಸಾಹಿತ್ಯ ನೀಡಿದ ಕೆಲವು ಚಿತ್ರಗಳು
- ಶಿವರಾತ್ರಿ ಮಹಾತ್ಮೆ
- ಸಂತ ತುಕಾರಾಂ
- ಮಹಾಸತಿ ಅನುಸೂಯ
- ಮಹಾಸತಿ ಅನುಸೂಯ
- ಮಾಯಾ ಬಜಾರ್
- ಅಮರಶಿಲ್ಪಿ ಜಕಣಾಚಾರಿ
[ಬದಲಾಯಿಸಿ] ಇತರ ವಿಷಯಗಳು
- ಡಾ.ರಾಜ್ ಕುಮಾರ್ ಅಭಿನಯದ ದಾರಿ ತಪ್ಪಿದ ಮಗ ಚಿತ್ರದಲ್ಲಿ ಚಿ.ಸದಾಶಿವಯ್ಯ ಚಿಕ್ಕ ಪಾತ್ರವೊಂದನ್ನು ನಿರ್ವಹಿಸಿದ್ದರು.
- ಕನ್ನಡದ ಪತ್ರಿಕೆಗಳಾದ ವಿಜಯಚಿತ್ರ, ವನಿತಾ ಮಾಸಪತ್ರಿಕೆಗಳನ್ನು ಪ್ರಭಾವಶಾಲಿಯಾಗಿ ರೂಪಿಸುವಲ್ಲಿ ಶ್ರಮಿಸಿದವರು.
[ಬದಲಾಯಿಸಿ] ಆಕರಗಳು
ವರ್ಗಗಳು: ಚಿತ್ರಸಾಹಿತಿಗಳು | ಕನ್ನಡ ಸಿನೆಮಾ | ಸಂಭಾಷಣೆಕಾರ | ೧೯೦೮ ಜನನ | ನಿಧನ