ಜನ್ನ
From Wikipedia
ಕವಿಚಕ್ರವರ್ತಿ ಬಿರುದಾಂಕಿತನಾದ ಮಹಾಕವಿ ಜನ್ನನು ಕರ್ನಾಟಕದಲ್ಲಿದ್ದ, ಹಳಗನ್ನಡ ಕವಿ.(ಕಾಲ :ಕ್ರಿ.ಶ.೧೧೮೦-೧೨೬೦) ಈತನು ಹೊಯ್ಸಳ ವೀರಬಲ್ಲಾಳನ ಮಹಾಮಂತ್ರಿಯೂ,ಸೈನ್ಯಾಧಿಪತಿಯೂ,ಆಸ್ಥಾನಕವಿಯೂ ಆಗಿದ್ದನು.ವೀರಬಲ್ಲಾಳನ ನಂತರ ಪಟ್ಟಕ್ಕೆ ಬಂದ ೨ನೆಯ ನರಸಿಂಹನ ಕಾಲದಲ್ಲೂ ಜನ್ನನು ಆಸ್ಥಾನಕವಿಯಾಗಿ ಮುಂದುವರಿದನು. ಈತನ ತಂದೆ ಶಂಕರ(ಕವಿ ಸುಮನೋಬಾಣ)ನು ಹೊಯ್ಸಳ ನಾರಸಿಂಹನಲ್ಲಿ ದಂಡಾಧೀಶನಾಗಿದ್ದನು ; ತಾಯಿ ಗಂಗಾದೇವಿ. ಕನ್ನಡದ ಬಹುಮುಖ್ಯ ಕಾವ್ಯಸಂಕಲನ ಗ್ರಂಥವಾದ ಸೂಕ್ತಿಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನನಿಗೆ(ಕ್ರಿ.ಶ.೧೨೪೫) ಜನ್ನನ ತಂಗಿಯನ್ನು ಕೊಟ್ಟು ಮದುವೆಯಾಗಿತ್ತು.ಶಬ್ದಮಣಿದರ್ಪಣವನ್ನು ರಚಿಸಿದ ವಯ್ಯಾಕರಣಿ ಕೇಶಿರಾಜನು ಜನ್ನನ ಸೋದರಳಿಯ(ಮಲ್ಲಿಕಾರ್ಜುನನ ಮಗ).
ಜನ್ನನು ಹಳೆಯಬೀಡಿನಲ್ಲಿರುವ ವಿಜಯ ಪಾರ್ಶ್ವನಾಥ ದೇವಾಲಯದ ಮುಖಭಾಗದಲ್ಲಿ ಸೊಗಸಾದ ಮುಖಮಂಟಪವನ್ನು ಕಟ್ಟಿಸಿ ,ಅಲ್ಲಿ ತನ್ನ ಕಾವ್ಯ ಅನಂತನಾಥಪುರಾಣದ ೧೦೦೦ ಪ್ರತಿಗಳನ್ನು ಬರೆಸಿ,ಉದಾರ ಸಂಭಾವನೆಯೊಂದಿಗೆ ವಿದ್ವಾಂಸರಿಗೆ ಕೊಟ್ಟು ಗೌರವಿಸಿದನೆಂದು ತಿಳಿದುಬರುತ್ತದೆ.ಬಾಲಕರಗಣದ ಮೇಘನಂದಿ ಸಿದ್ಧಾಂತಿದೇವರು ಜನ್ನನ ಆಧ್ಯಾತ್ಮಿಕ ಗುರುಗಳಾಗಿದ್ದರು.
ಜನ್ನನು ಕ್ರಿ.ಶ.೧೨೦೯ರಲ್ಲಿ ಯಶೋಧರ ಚರಿತ್ರೆಯನ್ನು ರಚಿಸಿದನು. ಜನ್ನನ ಎರಡನೆಯ ರಚನೆ ಅನಂತನಾಥಪುರಾಣ ಜೈನರ ೧೪ನೆಯ ತೀರ್ಥಂಕರನಾದ ಅನಂತನಾಥಸ್ವಾಮಿಯ ಜೀವನಚರಿತ್ರೆಯನ್ನು ಕುರಿತದ್ದು.
ಜನ್ನನ ಪ್ರತಿಭೆಯನ್ನು ಶಾಸನಗಳ ರಚನೆಗೂ ಬಳಸಿಕೊಳ್ಳಲಾಗಿತ್ತು.ಶ್ರೇಷ್ಠಕವಿಯಾದ ಜನ್ನನ ಶಾಸನಗಳು ಒಂದು ಸಂಕಲನ ಗ್ರಂಥವಾಗಿ ಪ್ರಕಟವಾಗಿವೆ.
ವರ್ಗಗಳು: ಚುಟುಕು | ಹಳಗನ್ನಡ ಕವಿಗಳು | ಕವಿಗಳು | ಸಾಹಿತಿಗಳು