ಪಾ. ವೆಂ. ಆಚಾರ್ಯ (ಲಾಂಗೂಲಾಚಾರ್ಯ)
From Wikipedia
ಲಾಂಗೂಲಾಚಾರ್ಯರೆಂದು ಖ್ಯಾತರಾದ ಪಾಡಿಗಾರು ವೆಂಕಟರಮಣ ಆಚಾರ್ಯರು ಕನ್ನಡದ ಸಾಹಿತಿಗಳಲ್ಲೊಬ್ಬರು.
ಪರಿವಿಡಿ |
[ಬದಲಾಯಿಸಿ] ಜೀವನ
೧೯೧೫ ಫೆಬ್ರುವರಿ ೬ ರಂದು ಉಡುಪಿಯಲ್ಲಿ ಜನಿಸಿದರು. ಉಡುಪಿಯಲ್ಲಿ ಎಸ್.ಎಸ್.ಸಿ ವರೆಗೆ ಶಿಕ್ಷಣ ಪಡೆದರು. ಆದರೆ ಹಣದ ಅಭಾವದಿಂದಾಗಿ ಶಿಕ್ಷಣ ಮುಂದುವರೆಸಲಾಗಲಿಲ್ಲ. ಉಡುಪಿಯಲ್ಲಿಯೆ ಶಾಲಾ ಮಾಸ್ತರಿಕೆ, ಮುದ್ರಣ ಕೆಲಸ, ಅಂಗಡಿಯಲ್ಲಿ ಲೆಕ್ಕ ಇಡುವದು ಮೊದಲಾದ ಕೆಲಸಗಳನ್ನು ಮಾಡಿದರು. ಆಗಿನ ಪ್ರಸಿದ್ಧ ಪತ್ರಿಕೆ ಅಂತರಂಗದ ಸಹಸಂಪಾದಕರಾಗಿ ಕೆಲಕಾಲ ದುಡಿದರು. ಉಡುಪಿಯಿಂದ ಮದ್ರಾಸಿಗೆ ( ಈಗಿನ ಚೆನ್ನೈಗೆ ) ತೆರಳಿದ ಆಚಾರ್ಯರು ೧೯೪೨ ರಲ್ಲಿ ಹುಬ್ಬಳ್ಳಿಗೆ ಬಂದು 'ಸಂಯುಕ್ತ ಕರ್ನಾಟಕ'ದಲ್ಲಿ ಮುದ್ರಣ ಕಾರ್ಯದ ಮೇಲ್ವಿಚಾರಕರಾಗಿ ನೌಕರಿ ಪ್ರಾರಂಭಿಸಿದರು. ಅದರೊಂದಿಗೆ 'ಕರ್ಮವೀರ'ದಲ್ಲಿ ಲೇಖನಗಳನ್ನು ಬರೆಯಲಾರಂಭಿಸಿದರು. ಆ ಬಳಿಕ ಸಂಪಾದಕ ಸಹಾಯಕರಾಗಿ 'ಸಂಯುಕ್ತ ಕರ್ನಾಟಕ' ಹಾಗು 'ಕರ್ಮವೀರ'ದಲ್ಲಿ ಪುಸ್ತಕ ವಿಮರ್ಶೆ, ರಾಜಕೀಯ ಟೀಕೆ ಟಿಪ್ಪಣಿಗಳನ್ನು ಬರೆದರು. ಈ ಸಮಯದಲ್ಲಿಯೆ ಸುಪ್ರಸಿದ್ಧ ಹರಟೆಗಾರ ಲಾಂಗೂಲಾಚಾರ್ಯ ರ ಜನನವಾಯಿತು.
೧೯೫೯ ರಲ್ಲಿ 'ಕಸ್ತೂರಿ' ಡೈಜೆಸ್ಟ ಪ್ರಾರಂಭವಾದಾಗ ಆಚಾರ್ಯರು ಅದರ ಸಂಪಾದಕತ್ವವನ್ನು ವಹಿಸಿಕೊಂಡರು. ಅಖಂಡ ೧೮ ವರ್ಷ 'ಕಸ್ತೂರಿ'ಗಾಗಿ ದುಡಿದ ಆಚಾರ್ಯರು ಈ ಮಾಸಿಕವನ್ನು ಸರ್ವಾಂಗೀಣ ಡೈಜೆಸ್ಟ ಮಾಡುವ ಉದ್ದೇಶದಿಂದ ಸ್ವತಃ ತಾವೂ (ಬೇರೆ ಬೇರೆ ಲೇಖನ ನಾಮಗಳಲ್ಲಿ) ಸುಮಾರಾಗಿ ೬೦೦ಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ಈ ಲೇಖನಗಳಲ್ಲಿ ವ್ಯಕ್ತಿ ಪರಿಚಯ, ಘಟನಾವಳಿಗಳ ವಿಶ್ಲೇಷಣೆ ಅಲ್ಲದೆ ವೈಜ್ಞಾನಿಕ ವಿಷಯಗಳು ಬಂದಿವೆ. ವೈಜ್ಞಾನಿಕ ವಿಷಯಗಳಲ್ಲಿ ಮನೋವಿಜ್ಞಾನ, ಖಗೋಳಶಾಸ್ತ್ರ, ಭೌತಶಾಸ್ತ್ರ, ಸಸ್ಯ-ಪ್ರಾಣಿ ಪ್ರಪಂಚ ಎಲ್ಲವು ಸೇರಿಕೊಂಡಿವೆ. ಈ ಎಲ್ಲ ವಿಷಯಗಳ ಅಪ್ ಟು ಡೇಟ್ ಮಾಹಿತಿಯನ್ನು ಕಲೆ ಹಾಕಿ, ಅವಶ್ಯವಿದ್ದಲ್ಲಿ ಹೊಸ ಪಾರಿಭಾಷಿಕ ಪದವಿಗಳನ್ನು ಸೃಷ್ಟಿಸಿ, ಆಚಾರ್ಯರು ಬರೆದಿದ್ದಾರೆ. ಕಸ್ತೂರಿಯನ್ನು ಕನ್ನಡದಲ್ಲಿ ಪ್ರಥಮ ದರ್ಜೆಯ ಡೈಜೆಸ್ಟ ಆಗಿ ಮಾಡಲು ಆಚಾರ್ಯರು ಮಾಡಿದ್ದು 'ಜ್ಞಾನ ಭಗೀರಥ'ನ ಕೆಲಸವೆನ್ನಬಹುದು.
[ಬದಲಾಯಿಸಿ] ಕೃತಿರಚನೆ
ಪಾವೆಂ ಅವರ ಒಟ್ಟು ಬರವಣಿಗೆ ಹತ್ತು ಸಾವಿರ ಪುಟಗಳನ್ನು ಮೀರುವುದಾದರೂ,ಪುಸ್ತಕ ರೂಪದಲ್ಲಿ ಬಂದಿದ್ದು ತೀರಾ ಕಡಿಮೆ. ಪಾವೆಂ ಅವರ ಮೊದಲ ಕವನ ಉದ್ಗಾರ ೧೯೩೩ ರಲ್ಲಿ ಜಯಕರ್ನಾಟಕಪತ್ರಿಕೆಯಲ್ಲಿ ಪ್ರಕಟವಾಯಿತು. ಅವರ ಮೊದಲ ಸಣ್ಣ ಕತೆ ೧೯೩೫ ರಲ್ಲಿ ಮಧುವನ ಎಂಬ ಕಥಾಸಂಗ್ರಹದಲ್ಲಿ ಪ್ರಕಟವಾಗಿದೆ. ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ, ತುಷಾರ, ತರಂಗ, ಸುಗುಣಮಾಲಾ ಮೊದಲಾದ ಪತ್ರಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ.
[ಬದಲಾಯಿಸಿ] ಪೆಂಗೋಪದೇಶ
ಮಂಕುತಿಮ್ಮನ ಕಗ್ಗ ಮಾದರಿಯಲ್ಲಿ ಪೆಂಗೋಪದೇಶ ಪದ್ಯಗಳನ್ನು ರಚಿಸಿದ್ದಾರೆ. ಅದರ ಒಂದು ಮಾದರಿ -
ಬದುಕು ಖಟರಾ -ಬಸ್ಸು; ವಿಧಿಯದರ ಡ್ರೈವರನು
ಕುಡಿದು ಹೊಡೆಯುತ್ತಾನೆ ಎರಡು ಕಾಣುತ್ತ
ಗಟರವೋ ಮರವೊ ಸಂಕವೊ ಟ್ರಕ್ಕೊ ಗೋಡೆಯೊ
ಮಡಿದವನಿಗಾವುದೇನೊ ಎಲವೊ ಪೆಂಗೇ
[ಬದಲಾಯಿಸಿ] ಪಾವೆಂ ಕೃತಿಗಳು
- ಬಯ್ಯ ಮಲ್ಲಿಗೆ - ತುಳು ಭಾಷೆಯ ಅವರ ಕವನಸಂಗ್ರಹ
- ರಶಿಯಾದ ರಾಜ್ಯಕ್ರಾಂತಿ - ರಾಜಕೀಯ ವಿಶ್ಲೇಷಣೆ
- ಸ್ವತಂತ್ರ ಭಾರತ - ರಾಜಕೀಯ ವಿಶ್ಲೇಷಣೆ
- ಸುಭಾಷಿತ ಚಮತ್ಕಾರ
- ಪದಾರ್ಥ ಚಿಂತಾಮಣಿ
- ನಾಲ್ಕು ಹರಟೆಗಳ ಸಂಗ್ರಹಗಳು
- ೨ ಕವನಸಂಗ್ರಹಗಳು
[ಬದಲಾಯಿಸಿ] ಪುರಸ್ಕಾರಗಳು
- ೧೯೭೭ರಲ್ಲಿ ಪತ್ರಿಕೋದ್ಯಮದಲ್ಲಿಯ ಸಾಧನೆಗಾಗಿ 'ಪಿ.ಆರ್.ರಾಮಯ್ಯ ಪ್ರಶಸ್ತಿ'.
- ೧೯೭೭ರಲ್ಲಿ ಮೈಸೂರಿನಲ್ಲಿ ಸಂಭಾವನಾ ಗ್ರಂಥ ( ಪಾವೆಂ-ಕಸ್ತೂರಿ ) ಸಮರ್ಪಣೆ
- ೧೯೯೨ರಲ್ಲಿ ಪತ್ರಿಕೋದ್ಯಮದಲ್ಲಿ ಅಖಿಲ ಭಾರತ ಮಟ್ಟದ 'ಗೋಯೆಂಕಾ ಪ್ರಶಸ್ತಿ'
- ಪಾವೆಂ ಅವರ ಮೊದಲ ಕವನ ಸಂಕಲನ ನವನೀರದ ಕ್ಕೆ ಮುಂಬಯಿ ಸರಕಾರದಿಂದ ಪಾರಿತೋಷಕ ದೊರಕಿತ್ತು.