ಮೊದಲನೇ ಅಮೋಘವರ್ಷ
From Wikipedia
ಮೊದಲನೆಯ ಅಮೋಘವರ್ಷ ಅಥವ ಅಮೋಘವರ್ಷ ನೃಪತುಂಗನು ಕ್ರಿ.ಶ. ೮೧೪ರಲ್ಲಿ ಮುಮ್ಮಡಿ ಗೋವಿಂದನ ನಂತರ ರಾಷ್ಟ್ರಕೂಟರ ರಾಜನಾಗಿ ಸಿಂಹಾಸನವೇರಿದನು. ಇವನು "ನೃಪತುಂಗ" ಎಂಬ ಹೆಸರಿನಿಂದ ಹೆಚ್ಚು ಪ್ರಖ್ಯಾತನಾಗಿದ್ದಾನೆ. ರಾಜನಾದಾಗ ಇವನಿಗೆ ಕೇವಲ ೧೬ ವರ್ಷ. ಸ್ವಭಾವತಃ ಶಾಂತಿಪ್ರಿಯನಾಗಿದ್ದರೂ, ಹಲವು ದೀರ್ಘಕಾಲದ ಯುದ್ಧಗಳಲ್ಲಿ ತೊಡಗಿಕೊಂಳ್ಳಬೇಕಾಯಿತು.
[ಬದಲಾಯಿಸಿ] ಸಾಹಿತ್ಯಕ್ಕೆ ಕೊಡುಗೆ
ಸ್ವತಃ ಕವಿಯೂ ಆಗಿದ್ದ ನೃಪತುಂಗನು ವಿವಿಧ ಮತಗಳ ಕವಿಗಳು, ಪಂಡಿತರಿಗೆ ಆಶ್ರಯದಾತನೂ ಆಗಿದ್ದನು. ಇವನ ಆಶ್ರಯದಲ್ಲಿ ಕನ್ನಡ ಹಾಗೂ ಸಂಸ್ಕೃತ ಸಾಹಿತ್ಯಗಳು ಪ್ರವರ್ಧಮಾನವಾದವು. ಕನ್ನಡದಲ್ಲಿ ಲಭ್ಯವಿರುವ ಪ್ರಾಚೀನ ಗ್ರಂಥ ಕವಿರಾಜಮಾರ್ಗದ ಕರ್ತೃ ನೃಪತುಂಗ ಅಥವಾ ಅವನ ಆಸ್ಥಾನದ ಕವಿಯಾಗಿದ್ದ ಶ್ರೀವಿಜಯ.
ನೃಪತುಂಗನ ರಚನೆಯು ಶಾಸ್ತ್ರಗ್ರಂಥವಾಗಿರುವದು. ಕಾವ್ಯದೋಷಗಳು, ಅಲಂಕಾರಗಳು ಈ ಗ್ರಂಥದಲ್ಲಿ ವರ್ಣಿತವಾಗಿವೆ. ಕನ್ನಡನಾಡಿನ ಜನರು ‘’ಓದದೆಯೇ ಕಾವ್ಯ ಪ್ರಯೋಗದಲ್ಲಿ ನಿಪುಣರು’’ ಎಂದು ನೃಪತುಂಗನು ಹೊಗಳಿದ್ದಾನೆ.
[ಬದಲಾಯಿಸಿ] ಆಳ್ವಿಕೆ
ಮಾನ್ಯಖೇತ (ಇಂದಿನ ಮಳಖೇಡ) ಪಟ್ಟಣವನ್ನು ಕಟ್ಟಿ, ಅದನ್ನು ರಾಷ್ಟ್ರಕೂಟರ ಪ್ರಮುಖ ಪಟ್ಟಣವಾಗುವಂತೆ ಮಾಡಿದನು. ಅರಬ್ ಗ್ರಂಥಕರ್ತೃ ಸುಲೇಮಾನ್ ಅಮೋಘವರ್ಷನನ್ನು ಚೀನಾ, ಬಾಗ್ದಾದ್, ಕಾನ್ಸ್ಟಾಂಟಿನೋಪಲ್ ರಾಜರುಗಳಿಗೆ ಹೋಲಿಸಿ ಬರೆದಿದ್ದಾನೆ. ಇವನು ಹಿಂದು ಮತ್ತು ಜೈನ ಧರ್ಮಗಳೆರಡನ್ನೂ ಸಮಾನವಾಗಿ ಪುರಸ್ಕರಿಸಿದನು.
ಅಮೋಘವರ್ಷನು ಸುಮಾರು ಕ್ರಿ.ಶ.೮೭೮ರಲ್ಲಿ ಕಾಲವಾದನು.