ರಂ.ಶ್ರೀ.ಮುಗಳಿ
From Wikipedia
ರಂ.ಶ್ರೀ.ಮುಗಳಿ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಇವರ "ಕನ್ನಡ ಸಾಹಿತ್ಯ ಚರಿತ್ರೆ" ಎಂಬ ಕೃತಿಗೆ ೧೯೫೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ರಂ.ಶ್ರೀ. ಮುಗಳಿಯವರು ೧೯೦೬ ಜುಲೈ ೧೫ ರಂದು ರೋಣ ತಾಲೂಕಿನ ಹೊಳೆಆಲೂರಿನಲ್ಲಿ ಜನಿಸಿದರು. ೧೯೩೩ರಲ್ಲಿ ಸಾಂಗಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡು ೧೯೬೧ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ೧೯೬೬ರಲ್ಲಿ ನಿವೃತ್ತರಾದರು. ೧೯೬೭ರಿಂದ ೧೯೭೦ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯನ ವಿಭಾಗದ ಮುಖ್ಯಸ್ಥರಾಗಿದ್ದರು.ರಸಿಕ ರಂಗ ಇದು ಮುಗಳಿಯವರ ಕಾವ್ಯನಾಮ.
ಇವರ ಕವನ ಸಂಕಲನಗಳು: ಬಾಸಿಗ, ಅಪಾರ ಕರುಣೆ, ಓಂ ಅಶಾಂತಿ:, ನವಮಾನವ;
ಕಾದಂಬರಿಗಳು: ಅನ್ನ, ಬಾಳುರಿ, ಕಾರಣಪುರುಷ
ಸಣ್ಣ ಕತೆಗಳ ಸಂಕಲನ: ಕನಸಿನ ಕೆಳದಿ
ನಾಟಕಗಳು: ಎತ್ತಿದ ಕೈ, ಸೇನಾಪ್ರದೀಪ, ನಾಮಧಾರಿ, ಮನೋರಾಜ್ಯ, ಧನಂಜಯ
ವಿಮರ್ಶಾ ಕೃತಿಗಳು: ವಿಮರ್ಶೆಯ ವ್ರತ, ಸಾಹಿತ್ಯೋಪಾಸನೆ, ರನ್ನನ ಕೃತಿರತ್ನ, ತವನಿಧಿ, ಸಾಹಿತ್ಯವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು,ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ
ಪ್ರಬಂಧ ಕೃತಿಗಳು: ಮಾತೆಂಬುದು ಜ್ಯೋತಿರ್ಲಿಂಗ, ಕನ್ನಡದ ಕರೆ
೧೯೬೩ರಲ್ಲಿ ತುಮಕೂರು ಜಿಲ್ಲೆಯ ಸಿದ್ಧಗಂಗಾದಲ್ಲಿ ಜರುಗಿದ ೪೪ನೆಯ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು. ೧೯೬೪ರಲ್ಲಿ ಇಂಕ್ಲಾ ಸಂಸ್ಥೆಯ ಪರವಾಗಿ ಫ್ರಿಬುವಿನಲ್ಲಿ ನಡೆದ ಜಾಗತಿಕ ಸಾಹಿತ್ಯಸಮ್ಮೇಳನದಲ್ಲಿಕನ್ನಡದ ಪ್ರತಿನಿಧಿಯಾಗಿದ್ದರು. ಪಿಇ ಎನ್ ಹಾಗು ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ೧೯೯೩ ಫೆಬ್ರುವರಿ ೨೦ರಂದು ಬೆಂಗಳೂರಿನಲ್ಲಿ ನಿಧನರಾದರು.
--೧೬:೦೧, ೫ May ೨೦೦೬ (UTC)ಸುನಾಥ