ಸಂಧಿ
From Wikipedia
ಸಂಧಿ/ಕೂಡಿಕೆ ಸಂಧಿಯೆಂದರೆ ಸಂಸ್ಕೃತದಲ್ಲಿ ಕೂಡಿಕೆ/ಕಲೆತ ಎಂದು ಅರ್ಥ. ವ್ಯಾಕರಣದಲ್ಲಿ ಎರಡು ಒರೆ(ಪದ)ಗಳನ್ನು ಕೂಡಿಸಿ/ಸೇರಿಸಿ/ಕಲೆಸಿ ಒಂದು ಒರೆ(ಪದ)ವನ್ನಾಗಿ ಮಾಡಿದರೆ ಅದು ಸಂಧಿ/ಕೂಡಿಕೆ ಯಾಗುವುದು. ಕನ್ನಡದಲ್ಲಿ ಅದನ್ನು "ಒರೆಗೂಡಿಕೆ" ಎಂದು ಕರೆಯಬಹುದು.
ಒರೆಗೂಡಿಕೆಯಾಗುವಾಗ ಒಂದು ಸದ್ದಗೆ(ಅಕ್ಕರ) ಬಿಟ್ಟು ಹೋಗಬಹುದು, ಇಲ್ಲವೆ ಸೇರಬಹುದು, ಇಲ್ಲವೆ ಆ ಸದ್ದಗೆಯ ಜಾಗದಲ್ಲಿ ಬೇರೆ ಸದ್ದಗೆ ಬರಬಹುದು.
ಒರೆಗೂಡಿಕೆಯನ್ನು ತೋರಿಸಲು ಬರೆಯಲು ಸಮಾನಾರ್ಥಕ /ಒಟ್ಟು(=) ಮತ್ತು ಸಂಕಲನ/ಕೂಡು (+) ಗುರುತುಗಳನ್ನು ಬಳಸುತ್ತಾರೆ. '=' ಮತ್ತು '+' ಗುರುತುಗಳನ್ನು ಬಳಸಿ, ಮೇಲಿನ ಉದಾಹರಣೆಗಳನ್ನು ಹೀಗೆ ಬರೆಯಲಾಗುವುದು.
ಮನದ + ಆಳ = ಮನದಾಳ
ಮರದ + ಎಲೆ = ಮರದೆಲೆ
ಮನೆ + ಕೆಲಸ = ಮನೆಗೆಲಸ
ಹೆರ್ + ದಾರಿ = ಹೆದ್ದಾರಿ
ಕನ್ನಡ ನುಡಿಯಲ್ಲಿ ಬಹಳಷ್ಟು ಸಂಸ್ಕೃತದ ಪದಗಳು ಬರೆತಿಯುವರಿಂದ ಕನ್ನಡ ವ್ಯಾಕರಣದಲ್ಲಿ ಸಂಸ್ಕೃತದ ಸಂಧಿಗಳನ್ನು ಸೇರಿಸಲಾಗಿದೆ. ಆದುದರಿಂದ ಸಂಧಿಗಳಲ್ಲಿ ಪ್ರಮುಖವಾಗಿ ಎರಡು ವಿಧಗಳು. ಕನ್ನಡ ಸಂಧಿಗಳು ಮತ್ತು ಸಂಸ್ಕೃತ ಸಂಧಿಗಳು
ಗಮನಿಸಿರಿ:
ಒಂದು ಕನ್ನಡದ ಒರೆ, ಒಂದು ಸಂಸ್ಕೃತಪದವನ್ನು ಸೇರದರೆ ಅಲ್ಲಿ ಯಾವಾಗಲು ಕನ್ನಡಸಂಧಿಯ ನಿಯಮಗಳನ್ನು ಪಾಲಿಸುತ್ತಾರೆ.
ಉದಾ:
ಹಿಂ + ಪಾಲಕ = ಹಿಂಬಾಲಕ ; ಆದೇಶ ಕನ್ನಡಸಂಧಿ
ಇರ್ + ಭಾಗ = ಇಬ್ಬಾಗ; ಆದೇಶ ಕನ್ನಡಸಂಧಿ
ಪರಿವಿಡಿ |
[ಬದಲಾಯಿಸಿ] ಕನ್ನಡ ಸಂಧಿಗಳು
ಎರಡು ಕನ್ನಡದ ಒರೆಗಳ ಕೂಡಿಕೆ/ಸೇರಿಕೆ/ಕಲೆತ.
ಮೂರು ಕನ್ನಡದ ಒರೆಗೂಡಿಕೆಗಳು.
[ಬದಲಾಯಿಸಿ] ಲೋಪ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದು.
ಉದಾ:- ಮತ್ತು(ಉ)+ಒಬ್ಬ=ಮತ್ತೊಬ್ಬ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಉ' ಕಾರ ಲೋಪವಾಗಿದೆ.
ಉದಾ:- ಅಲ್ಲಿ(ಇ)+ಅಲ್ಲಿ=ಅಲ್ಲಲ್ಲಿ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಇ'ಕಾರ ಲೋಪವಾಗಿದೆ.
ಗಮನಿಸಿರಿ:
ಇಲ್ಲಿ "ಅರ್ಥವು ಕೆಡದಿದ್ದ ಪಕ್ಷದಲ್ಲಿ" ಎಂದು ಕೇಳುವಾಗ, ಸಂಧಿ ಮಾಡುವವರು ಅರ್ಥ ಕೆಡುವುದೇ ಇಲ್ಲವೇ ಎಂದು ಹೇಳಲು ಹಲವು ಸರತಿ ಆಗುವುದಿಲ್ಲ.
ಮಾದರಿ: ಬಾಳನ್ನು = ಬಾಳೆ + ಅನ್ನು ? ಇಲ್ಲವೆ ಬಾಳು + ಅನ್ನು ?
ಒಂದು ವೇಳೆ ಬಾಳೆ + ಅನ್ನು = ಬಾಳನ್ನು ಅಂದರೆ ಇಲ್ಲಿ ಅರ್ಥ ಹೇಗೆ ಕಟ್ಟಿದೆ, ಹೇಳುಲು ಸಾಧ್ಯವಿಲ್ಲ.
ಆದುದರಿಂದ ಇಂತಹ ಹಲವು ಸನ್ನಿವೇಶಗಳಲ್ಲಿ ರೂಢಿಯಲ್ಲಿ ಇರುವ ಅರ್ಥವೇ ಸರಿಯೆಂದು ತಿಳಿವು.
ಹಾಗೆ
ಬಾಲೆ + ಅನ್ನು = ಬಾಲನ್ನು ತಪ್ಪು ಎಂದು ತಿಳಿವು
"ಬಾಲನ್ನು = ಬಾಲು + ಅನ್ನು" ಎಂದೇ ರೂಢಿ.
[ಬದಲಾಯಿಸಿ] ಆಗಮ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ,ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ.ಇದರಲ್ಲಿ ಎರಡು ವಿಧ.'ಯಕಾರಾಗಮ ಸಂಧಿ' ಹಾಗೂ 'ವಕಾರಾಗಮ ಸಂಧಿ'.
ಉದಾ:- ಮನೆ(ಎ)+ಅನ್ನು=ಮನೆಯನ್ನು.ಇಲ್ಲಿ ಉತ್ತರಪದದ ಆದಿಯಲ್ಲಿ 'ಯ್ ಕಾರ' 'ಆಗಮ'ವಾಗಿದೆ.
ಉದಾ:- ಮಗು(ಉ)+ಇಗೆ=ಮಗುವಿಗೆ.ಇಲ್ಲಿ ಉತ್ತರಪದದ ಆದಿಯಲ್ಲಿ 'ವ್ ಕಾರ' 'ಆಗಮ'ವಾಗಿದೆ.
ಗಮನಿಸಿರಿ:
ಕನ್ನಡದ ಹಲವಾರು ವ್ಯಾಕರಣದ ಹೊತ್ತಗೆಗಳು ಮೇಲಂತೆ ಹೇಳಿದರೂ, ಹೀಗೆ ಹೇಳುವದು ಹಲವು ವಿವಾದಗಳಿಗೆ ಮತ್ತು ತಪ್ಪುತಿಳಿವಿಗೆ ಅನುವು ಮಾಡುವುದು.
ಈ ಸಂಧಿಯ ವಿವರಣೆಯಲ್ಲಿ ಇರುವಂತೆ "ಸಾಮಾನ್ಯವಾಗಿ ಹೊಸದಾಗಿ ಒಂದು ವ್ಯಂಜನವು ಉತ್ತರಪದದ ಆದಿಯಲ್ಲಿರುವ ಸ್ವರಕ್ಕೆ ಬಂದು ಸೇರುತ್ತದೆ" ಎಂದಾಗ ಆ ಸಮಾನ್ಯವಲ್ಲದ( ಅಸಮಾನ್ಯ ) ಸನ್ನಿವೇಶಗಳು ಯಾವುವು ಎಂದು ಯಾವ ಹೊತ್ತಗೆಗಳು ಹೇಳುವುದಿಲ್ಲ.
ಮನೆ + ಅನ್ನು = ಮನೆಗಳನ್ನು ಏಕೆ ಆಗಬಾರದು? "ಗಳ್" ಯಾಕೆ ಆಗಮವಾಗಬಾರದು? ಹಾಗೆ...
ಮಗು + ಅನ್ನು = ಮಗುವನ್ನು ಆದರೆ ನೀರು + ಅನ್ನು = ನೀರುವನ್ನು ಏಕೆ ತಪ್ಪು?
ಮನೆ + ಅನ್ನು = ಮನೆಯನ್ನು ಆದರೆ ಆದರೆ + ಇಲ್ಲಿ = ಆದರೆಯಿಲ್ಲ ಏಕೆ ಆಗದೇ, ಆದರಿಲ್ಲಿ ಆಗುವುದು?
ಹೀಗೆ ಇನ್ನು ಹಲವು ವಿಚಾರಗಳಿಗೆ ಕಾರಣವನ್ನು ಕೊಡಲು ಆಗದು.
ಅದಕ್ಕೆ ಕೆಲವರು ಕನ್ನಡದಲ್ಲಿ "ಆಗಮಸಂಧಿ" ಎನ್ನವ ಸಂಧಿಯಿಲ್ಲ. ಕನ್ನಡದಲ್ಲಿ "ಲೋಪ ಸಂಧಿ" ಯೊಂದೆ ಸ್ವರ ಸಂಧಿ ಎನ್ನುವರು. ಜತೆಗೆ ಅವರು "ಆಗಮಸಂಧಿ"ಗೆ ಉದಾಹರಣೆಯಾಗಿ ಹೇಳಿರುವ ಪದಗಳನ್ನು ಬಿಡಿಸಲು ಬೇರೆ ಬಗೆಯನ್ನು ಕೂಡ ಸೂಚಿಸಿರುವರು.
ಮೆನಯು + ಅನ್ನು = ಮೆನೆಯನ್ನು; ಉ ಕಾರ ಲೋಪ. "ಮನೆಯು => ಒಂದು ಮನೆ" ಮನೆಗಳು + ಅನ್ನು = ಮನೆಗಳನ್ನು :ಉ ಕಾರ ಲೋಪ; "ಮನೆಗಳು => ಹಲವು ಮನೆಗಳು"
ಮಗುವು + ಅನ್ನು = ಮಗುವನ್ನು; ಉ ಕಾರ ಲೋಪ
[ಬದಲಾಯಿಸಿ] ಆದೇಶ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ಕ,ತ,ಪ ಗಳು ಬಂದಾಗ ,ಅದೇ ವರ್ಗದ ಮೂರನೇ ವ್ಯಂಜನಗಳು ಅಂದರೆ ಗ,ದ,ಬ ಗಳು ಆದೇಶವಾಗಿ ಬರುತ್ತವೆ.
ಉದಾ:- ಮಳೆ+ಕಾಲ=ಮಳೆಗಾಲ., ಬೆಟ್ಟ+ತಾವರೆ=ಬೆಟ್ಟದಾವರೆ., ಅಡಿ+ಪವಳ=ಅಡಿಬವಳ.
ಗಮನಿಸಿರಿ: ಈ ನಿಯಮವು ಕನ್ನಡದಲ್ಲಿ ಬರುವ ಹಲವು ವ್ಯಂಜನದ ಆದೇಶಗಳನ್ನು ವಿವರಿಸುವುದಿಲ್ಲ. ಅವನ್ನು ವಿವರಿಸಲು ಯಾವ ಸಂಧಿನಿಯಮವನ್ನು ಹಲವು ವ್ಯಾಕರಣದ ಹೊತ್ತಗೆಗಳು ಹೇಳುವುದಿಲ್ಲ.
ಮಾದರಿ:
ಹೆರ್ + ದಾರಿ = ಹೆದ್ದಾರಿ
ಬೆಲೆ + ಪೆಣ್ಣು(ಹೆಣ್ಣು) = ಬೆಲೆವೆಣ್ಣು
ಮುಂದು + ಪರಿ( ಹರಿ ) = ಮುಂದುವರಿ
ಮುಂದು + ಪರೆ( ಹರೆ ) = ಮುಂದುವರೆ
ತಣ್ + ನೀರು = ತಣ್ಣೀರು
ಕಣ್ + ನೀರು = ಕಣ್ಣೀರು
ಭೂ + ತಾಯಿ = ಭೂದಾಯಿ ಅಲ್ಲ ಏಕೆ?
ಒರ್ + ಕೊರಲು = ಒಕ್ಕೊರಲು
ಒರ್ + ಕೂಟ = ಒಕ್ಕೂಟ
ಒರ್ + ಕೂಡು = ಒಗ್ಗೂಡು
ಹೆರ್ + ಪಾವು(ಹಾವು) = ಹೆಬ್ಬಾವು
ಕಿಸು + ಪೊೞಲು(ಹೊಳಲು) = ಕಿಸುವೊಳಲು
ಮೂರ್ + ಕಣ್ಣ = ಮುಕ್ಕಣ
ತಣ್ + ಗಾಳಿ = ತಂಗಾಳಿ; ಇಲ್ಲಿ 'ಣ್' ಕಾರಕ್ಕೆ 'ಞ್' ಕಾರ ಆದೇಶ
ಗಮನಿಸಿರಿ: ಕನ್ನಡದಲ್ಲಿ ಹೆಚ್ಚ ಸರತಿ ಬರಿ ರೂಢಿಯಿಂದ ಸಂಧಿ/ಒರೆಗೂಡಿಕೆಗಳನ್ನು ಅರಿಯಲು ಆರುವುದು. ಈ ಮೇಲಿನ ನಿಯಮಗಳಂತೆ ಎಲ್ಲ ಕನ್ನಡ ಸಂಧಿಪದಗಳನ್ನು ಬಿಡಿಸಲು ಆರದು.
[ಬದಲಾಯಿಸಿ] ಸಂಸ್ಕೃತ ಸಂಧಿಗಳು
ಯಾವ ಕನ್ನಡದ ಪಲುಕು(ಪದ) ಈ ಕೆಳಗಿನ ಸಂಧಿಗಳಲ್ಲಿ ಬರುವುದಿಲ್ಲ. ಬರೀ ಸಂಸ್ಕೃತದ ಪಲುಕುಗಳಿಗೆ ಸೀಮಿತವಾದ ಸಂಧಿಗಳಿವು. ಆದರೆ ಹಳೆಗನ್ನಡದಿಂದಲೂ ಕನ್ನಡದಲ್ಲಿ ಹೇರಳವಾಗಿ ಬೆರೆತಿರುವ ಸಾವಿರಾರು ಸಂಸ್ಕೃತದ ಸಂಧಿಪದಗಳನ್ನು ತಿಳಿಯಲು ಈ ಸಂಧಿಗಳ ಅರಿವು ಬೇಕು.
ಈ ಸಂಧಿಗಳ ವಿವರಣೆಯನ್ನು ಸಂಸ್ಕೃತದ ವ್ಯಾಕರಣದ ಹೊತ್ತಗೆಗಳಿಂದ ಪಡೆಯಬಹುದು. ಈ ಎಲ್ಲ ಸಂಧಿಗಳೂ ೧೦೦% ಸಂಸ್ಕೃತದ ವ್ಯಾಕರಣದ ಸಂಧಿನಿಯಮಗಳನ್ನೇ ಪಾಲಿಸುವುವು.
ಎರಡು ಸಂಸ್ಕೃತದ ಪದಗಳ ಸೇರಿಕೆ.
- ಸವರ್ಣದೀರ್ಘ ಸಂಧಿ
- ಗುಣ ಸಂಧಿ
- ವೃದ್ಧಿ ಸಂಧಿ
- ಯಣ್ ಸಂಧಿ
- ಜಸ್ತ್ವ ಸಂಧಿ
- ಶ್ಚುತ್ವ ಸಂಧಿ
- ಷ್ಟುತ್ವ ಸಂಧಿ
- ಅನುನಾಸಿಕ ಸಂಧಿ
- ವಿಸರ್ಗ ಸಂಧಿ