Web Analytics


https://www.amazon.it/dp/B0CT9YL557

We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಡಾ.ರಾಜ್‍ಕುಮಾರ್ - Wikipedia

ಡಾ.ರಾಜ್‍ಕುಮಾರ್

Wikipedia ಇಂದ

ಡಾ. ರಾಜ್‌ಕುಮಾರ್
ಡಾ. ರಾಜ್‌ಕುಮಾರ್

ನಟಸಾರ್ವಭೌಮ ಡಾ. ರಾಜ್‍ಕುಮಾರ್ (ಜನನ: ಏಪ್ರಿಲ್ ೨೪, ೧೯೨೯ - ಮರಣ: ಏಪ್ರಿಲ್ ೧೨, ೨೦೦೬) ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಗಾಯಕ. ಸುಮಾರು ಐದು ದಶಕಗಳಲ್ಲಿನ ಚಿತ್ರರಂಗದ ಬದುಕಿನಲ್ಲಿ, ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡಾ. ರಾಜ್ ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ನಟಸಾರ್ವಭೌಮ ಬಿರುದು ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ. ಕರ್ನಾಟಕ ಸರ್ಕಾರದಿಂದ ಕರ್ನಾಟಕ ರತ್ನ ಎಂದು ಪುರಸ್ಕೃತರಾದವರು.

೨೦೦೦ನೇ ವರ್ಷದಲ್ಲಿ ಕುಖ್ಯಾತ ದಂತಚೋರ ವೀರಪ್ಪನ್‍ನಿಂದ ಅಪಹರಣವಾಗಿದ್ದ ರಾಜ್‍ಕುಮಾರ್ ೧೦೮ ದಿನಗಳ ನಂತರ ಬಿಡುಗಡೆಯಾಗಿದ್ದರು. ೨೦೦೬ ಏಪ್ರಿಲ್ ೧೨ರಂದು ಬೆಂಗಳೂರಿನಲ್ಲಿ, ಹೃದಯಾಘಾತದಿಂದ ಮರಣ ಹೊಂದಿದರು.

ಪರಿವಿಡಿ

[ಬದಲಾಯಿಸಿ] ಡಾ.ರಾಜ್ ಕುಟುಂಬ

ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡಗಾಜನೂರಿನಲ್ಲಿ ೧೯೨೯ಏಪ್ರಿಲ್ ೨೪ರಂದು ರಾಜ್‍ಕುಮಾರ್ ಹುಟ್ಟಿದರು. ನಾಮಕರಣಗೊಂಡ ಹೆಸರು ಮುತ್ತುರಾಜು(ಮುತ್ತಣ್ಣ).
ಡಾ.ರಾಜ್ ಅವರಿಗೆ ವರದರಾಜ್ ಎಂಬ ಸಹೋದರರೂ, ಶಾರದಮ್ಮ ಎಂಬ ತಂಗಿಯೂ ಇದ್ದರು.
೧೯೫೩ ಜೂನ್ ೨೫ರಂದು ಪಾರ್ವತಿಯವರೊಡನೆ ಲಗ್ನವಾಯಿತು. ಪಾರ್ವತಿಯವರು ಮುಂದೆ ಪಾರ್ವತಮ್ಮ ರಾಜ್‍ಕುಮಾರ್ ಎಂದೇ ಕನ್ನಡದ ಜನತೆಗೆ ಪರಿಚಿತರಾಗಿ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ಮಾಪಕರೊಲ್ಲಬ್ಬರಾದರು. ವಜ್ರೇಶ್ವರಿ ಸಂಸ್ಥೆಯಡಿಯಲ್ಲಿ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.

ಡಾ.ರಾಜ್ ದಂಪತಿಗಳಿಗೆ ೫ ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು.
ಗಂಡು ಮಕ್ಕಳಾದ ಶಿವರಾಜ್‍ಕುಮಾರ್, ರಾಘವೇಂದ್ರ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಕನ್ನಡ ಚಿತ್ರರಂಗದ ನಾಯಕ ನಟರು. ಹೆಣ್ಣು ಮಕ್ಕಳು ಪೂರ್ಣಿಮಾ ಹಾಗು ಲಕ್ಷ್ಮಿ. ಹಿರಿಯ ಅಳಿಯ ಪಾರ್ವತಮ್ಮನವರ ತಮ್ಮನಾದ ಗೋವಿಂದರಾಜು ಹಾಗು ಕಿರಿಯ ಅಳಿಯ ಚಿತ್ರನಟ ರಾಮ್‍ಕುಮಾರ್.
ಒಟ್ಟು ಹನ್ನೆರಡು ಮೊಮ್ಮಕ್ಕಳಿದ್ದು, ಶಿವರಾಜ್‍ಕುಮಾರ್ ಪುತ್ರಿಯಾದ ನಿವೇದಿತಾ, ಅಂಡಮಾನ್ ಮುಂತಾದ ಕೆಲವು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾಳೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಡಾ.ರಾಜ್ ಅವರ ಬೀಗರು. ಬಂಗಾರಪ್ಪನವರ ಪುತ್ರಿಯಾದ ಗೀತಾ, ಶಿವರಾಜ್‍ಕುಮಾರ್ ಅವರ ಪತ್ನಿ.

[ಬದಲಾಯಿಸಿ] ರಂಗಭೂಮಿ ಮತ್ತು ತಂದೆಯ ಪ್ರಭಾವ

ಬೇಡರ ಕಣ್ಣಪ್ಪ ಚಿತ್ರದಲ್ಲಿ ನಾಯಕನಾಗಿ ನಟಿಸುವ ಮುನ್ನ ಡಾ.ರಾಜ್ ಅವರ ಹೆಸರು ಮುತ್ತುರಾಜ ಎಂದಿತ್ತು. ಮುತ್ತುರಾಜನ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಎಂದರೆ ೧೯೩೦-೧೯೫೦ ಕಾಲದಲ್ಲಿ ಕನ್ನಡ ರಂಗಭೂಮಿಯ ದೊಡ್ಡ ಹೆಸರು. ರೌದ್ರಪಾತ್ರಗಳಿಗೆ ಹೆಸರಾಗಿದ್ದ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿಯಲ್ಲಿ ಕಲಾವಿದರಾಗಿದ್ದರು. ಬಡತನದಿಂದಾಗಿ ಮುತ್ತುರಾಜ್ ವಿದ್ಯಾಭ್ಯಾಸ ನಾಲ್ಕನೆ ತರಗತಿಗೆ ನಿಂತಿತು. ಗುಬ್ಬಿ ಕಂಪನಿಯೇ ವಿಶ್ವವಿದ್ಯಾನಿಲಯವಾಯಿತು. ತಂದೆಯನ್ನು ನೆರಳಿನಂತೆ ಹಿಂಬಾಲಿಸಿದ ಮುತ್ತುರಾಜ್‌ಗೆ ಅವರಿಂದಲೇ ತರಬೇತಿಯಾಯಿತು. ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರ ವಹಿಸುತ್ತಿದ್ದರು.

ಡಾ.ರಾಜ್‍ಕುಮಾರ್ ಜೀವನದಲ್ಲಿ ತಂದೆ ಬೀರಿರುವ ಪ್ರಭಾವ ಅಪಾರ. ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ಅವರು ಮೊದಲು ನೆನಪಿಸಿಕೊಂಡದ್ದು ತಂದೆ ಹೇಳಿದ ಮಾತುಗಳನ್ನೇ : "ಇಂತಹ ಸಾಧನೆ ನಿನ್ನಿಂದ ಸಾಧ್ಯ" ಎಂದು ಪುಟ್ಟಸ್ವಾಮಯ್ಯನವರು ಮಗನ ಭವಿಷ್ಯವನ್ನು ಅಂದೇ ನುಡಿದಿದ್ದರು. ಅದು ನಿಜವಾಯಿತು. "ನನ್ನ ತಂದೆ ರಂಗದ ಮೇಲೆ ಹುರಿಮೀಸೆ ತಿರುಗಿಸುತ್ತಾ, ಆರ್ಭಟಿಸುತ್ತಾ ರಂಗ ಪ್ರವೇಶಿಸಿದರೆಂದರೆ ಎಂತಹವರಿಗೂ ಒಂದು ಬಾರಿ ನಡುಕ ಬರುತ್ತಿತ್ತು" ಎಂದು ತಂದೆಯವರ ಅಭಿನಯವನ್ನು ಬಣ್ಣಿಸುವ ರಾಜ್‌ಕುಮಾರ್ ಅವರಿಗೆ ತಂದೆಯ ಅಭಿನಯ ಬಲು ಪ್ರಿಯ. "ನಾನೂ ಅದೇ ರೀತಿ ಮಾಡಬೇಕೆಂದು ಭಕ್ತ ಪ್ರಹ್ಲಾದ ಚಿತ್ರದಲ್ಲಿ ಹಿರಣ್ಯಕಶಿಪು ಪಾತ್ರದಲ್ಲಿ ಅವರಂತೆ ಅಭಿನಯಿಸಲು ಸಾಧ್ಯವೇ ಎಂದು ಪ್ರಯತ್ನಿಸಿದೆ; ಆದರೆ ಬರಲಿಲ್ಲ" ಎಂದು ಹೇಳಿದ್ದಾರೆ.

ಗುಬ್ಬಿ ಕಂಪನಿಯಲ್ಲಿ ಪುಟ್ಟಸ್ವಾಮಯ್ಯನವರು ಅಭಿನಯಿಸುತ್ತಿದ್ದಾಗ ಮುತ್ತುರಾಜುವಿಗೆ "ಕೃಷ್ಣಲೀಲಾ" ಎಂಬ ನಾಟಕದಲ್ಲಿ ಸಣ್ಣ ಪಾತ್ರ ದೊರಕಿತು. ಕೆಲ ದಿನಗಳ ನಂತರ ಪುಟ್ಟಸ್ವಾಮಯ್ಯನವರು ಗುಬ್ಬಿ ಕಂಪನಿ ತೊರೆದು ಎಂ.ವಿ.ಸುಬ್ಬಯ್ಯ ನಾಯ್ಡು ಅವರ ಶ್ರೀ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಗೆ ಸೇರಿದಾಗ ಅಕಸ್ಮಾತ್ತಾಗಿ ಮುತ್ತುರಾಜ್‌ಗೆ "ಅಂಬರೀಷ" ನಾಟಕದಲ್ಲಿ ಅಂಬರೀಷನ ತಮ್ಮ ರಮಾಕಾಂತನ ಪಾತ್ರ ದೊರಕಿತು. ಅನಂತರ "ಕುರುಕ್ಷೇತ್ರ" ನಾಟಕದಲ್ಲಿ ತಂದೆ ಭೀಮನ ಪಾತ್ರವಾದರೆ ಮಗ ಅರ್ಜುನನ ಪಾತ್ರ. ರಾಜ್‌ಕುಮಾರ್‌ಗೆ ಇದು ರಂಗತಾಲೀಮು.

೧೯೫೧ರಲ್ಲಿ ತಂದೆ ಪುಟ್ಟಸ್ವಾಮಯ್ಯನವರ ನಿಧನ. ಬಂದೆರಗಿದ ಅಘಾತದಿಂದ ತತ್ತರಿಸಿದ ಮುತ್ತುರಾಜ್, ಮತ್ತೆ ಗುಬ್ಬಿ ಕಂಪನಿ ಸೇರಿ "ಭೂ ಕೈಲಾಸ" ನಾಟಕದಲ್ಲಿ ಅಭಿನಯಿಸಿದರು. ಗುಬ್ಬಿ ಕಂಪನಿ ಅಲ್ಲದೆ, ಶ್ರೀ ಸಾಹಿತ್ಯ ಮಂಡಲಿ, ಶೇಷಾಚಾರ್ಯರ ಶೇಷಕಮಲ ನಾಟಕ ಮಂಡಳಿಯಲ್ಲಿಯೂ ರಾಜ್‌ಕುಮಾರ್ ಒಂದು ವರ್ಷ ಸೇವೆ ಸಲ್ಲಿಸಿದ್ದಾರೆ.

[ಬದಲಾಯಿಸಿ] ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ

೧೯೪೨ರಲ್ಲಿ ಬಿಡುಗಡೆಯಾದ ಭಕ್ತ ಪ್ರಹ್ಲಾದ ಚಿತ್ರದಲ್ಲಿ ಬಾಲನಟನಾಗಿಯೂ, ೧೯೫೨ರಲ್ಲಿ ಬಿಡುಗಡೆಯಾದ ಶಂಕರ್‍ಸಿಂಗ್ ನಿರ್ದೇಶನದ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಸಪ್ತರ್ಷಿಗಳಲ್ಲಿ ಒಬ್ಬರಾಗಿ ಅಭಿನಯಿಸಿದ್ದ ಮುತ್ತುರಾಜ್, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.

೧೯೫೩ರಲ್ಲಿ ಆಗಷ್ಟೆ ಮದುವೆಯಾಗಿದ್ದ ಮುತ್ತುರಾಜ್ ದಂಪತಿಗಳು ನಂಜನಗೂಡಿನಿಂದ ಮೈಸೂರಿಗೆ ಹೊರಡಲು ರೈಲ್ವೆ ನಿಲ್ದಾಣದಲ್ಲಿದ್ದರು. ಅದೇ ಸಮಯಕ್ಕೆ ಹೆಚ್.ಎಲ್.ಎನ್.ಸಿಂಹ ಕೂಡ ಮೈಸೂರಿಗೆ ಹೋಗಲು ಅಲ್ಲಿಗೆ ಬಂದಿದ್ದರು. ಅವರು ಮುತ್ತುರಾಜ್‍ರವರನ್ನು ಚಿಕ್ಕಂದಿನಿಂದ ನೋಡಿದ್ದರು. ಅಂದು ರೈಲ್ವೆ ನಿಲ್ದಾಣದಲ್ಲಿ ಆ ದಂಪತಿಗಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ, ಯೋಗಕ್ಷೇಮ ವಿಚಾರಿಸಿದರು. ಸಿಂಹ ಕಣ್ಣಪ್ಪನ ಪಾತ್ರಕ್ಕೆ ಹೊಸನಟನನ್ನು ಹುಡುಕುತ್ತಿದ್ದ ಸಮಯ. ಅಂದು ಕಟ್ಟುಮಸ್ತಾದ ಆಳು ಮುತ್ತರಾಜ್‍ರವರನ್ನು ಕಂಡ ತಕ್ಷಣ "ಇವನನ್ನೇ ಕಣ್ಣಪ್ಪನಾಗಿ ಏಕೆ ಮಾಡಬಾರದು" ಎಂಬ ಭಾವನೆ ಮೂಡಿತ್ತು. ಮುತ್ತುರಾಜ್ ಬಳಿ ವಿಳಾಸವನ್ನು ಪಡೆದು, ದಂಪತಿಗಳಿಗೆ ಶುಭಕೋರಿ ಸಿಂಹ ಬೀಳ್ಕೊಟ್ಟಿದ್ದರು.

ಮೇಲಿನ ಘಟನೆ ನಡೆದ ಕೆಲದಿನಗಳಲ್ಲಿ ಮೈಸೂರಿನ ಟೌನ್‍ಹಾಲಿನಲ್ಲಿ ಬೇಡರ ಕಣ್ಣಪ್ಪ ನಾಟಕ ಪ್ರದರ್ಶನವಿತ್ತು. ಅದರಲ್ಲಿ ಮುತ್ತುರಾಜ್ ಕಣ್ಣಪ್ಪನ ಪಾತ್ರ ವಹಿಸುತ್ತಾರೆ ಎಂದು ಸಿಂಹರವರಿಗೆ ತಿಳಿಯಿತು. ಆ ದಿನ, ಅರ್ಧಗಂಟೆ ನಾಟಕ ನೋಡಿ, ಮುತ್ತುರಾಜ್‍ರವರ ತನ್ಮಯತೆಯ ಅಭಿನಯ ಕಂಡು ಸಿಂಹ ಸಂತೋಷಪಟ್ಟರು. ಗುಬ್ಬಿ ಕರ್ನಾಟಕ ಫಿಲಂಸ್ ನಿರ್ಮಿಸುತ್ತಿದ್ದ ಬೇಡರ ಕಣ್ಣಪ್ಪ ಚಿತ್ರದಲ್ಲಿನ ಕಣ್ಣಪ್ಪನ ಪಾತ್ರಕ್ಕೆ ಈತನೇ ಸರಿಯಾದ ವ್ಯಕ್ತಿ ಎಂದುಕೊಂಡು ನಿರ್ಮಾಪಕ ಎ.ವಿ.ಎಂ.ಚೆಟ್ಟಿಯಾರ್ ಅವರನ್ನು ಸಂಪರ್ಕಿಸಿ, ಆ ಚಿತ್ರದ ಸಹನಿರ್ಮಾಪಕರಾಗಿದ್ದ ಗುಬ್ಬಿ ವೀರಣ್ಣನವರಿಗೆ ಈ ವಿಷಯ ತಿಳಿಸಿ ಅವರನ್ನು ಒಪ್ಪಿಸಿದರು. ನಂತರ ಮುತ್ತುರಾಜ್, ಜಿ.ವಿ.ಅಯ್ಯರ್ ಹಾಗು ನರಸಿಂಹರಾಜು ಇವರುಗಳನ್ನು ಸ್ಕ್ರೀನ್ ಟೆಸ್ಟ್‍ಗಾಗಿ ಮದರಾಸಿಗೆ ಬರಲು ಆಹ್ವಾನಿಸಿದರು.

ನಿರ್ದೇಶಕ ಎಚ್.ಎಲ್.ಎನ್.ಸಿಂಹ ಅವರಿಂದ ಮುತ್ತುರಾಜ್‌ಗೆ ರಾಜ‌ಕುಮಾರ್ ಎಂಬ ಹೊಸ ಹೆಸರಿನ ನಾಮಕರಣವಾಯಿತು. ರಾಜಕುಮಾರ್ ಬೇಡರ ಕಣ್ಣಪ್ಪ ಚಿತ್ರದ ನಾಯಕನಾಗಿ ಅಭಿನಯಿಸಿದರು. ಚಿತ್ರವು ೧೯೫೪ಮೇ ತಿಂಗಳಲ್ಲಿ ಆಗಿನ ಮೈಸೂರು ರಾಜ್ಯದಲ್ಲಿ ಎಲ್ಲೆಡೆ ಬಿಡುಗಡೆಗೊಂಡಿತು. ಬೇಡರ ಕಣ್ಣಪ್ಪ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದ ಪ್ರಥಮ ಚಿತ್ರವಾಗಿ ಕನ್ನಡ ಚಿತ್ರರಂಗದಲ್ಲಿಯೇ ಒಂದು ಮೈಲಿಗಲ್ಲಾಯಿತು.

[ಬದಲಾಯಿಸಿ] ಚಿತ್ರರಂಗದ ಬದುಕು

ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ(ಭಕ್ತ ಪುರಂದರದಾಸ) ಮುಂತಾದ ಭಕ್ತಿಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು.

೧೯೬೦ರ ದಶಕದಲ್ಲಿ, ಕಣ್ತೆರೆದು ನೋಡು, ಗಾಳಿಗೋಪುರ, ನಂದಾದೀಪ, ಸಾಕು ಮಗಳು, ನಾಂದಿ ಮುಂತಾದ ಸಾಮಾಜಿಕ ಚಿತ್ರಗಳಲ್ಲಿಯೂ, ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವರಾಯ ಮುಂತಾದ ಐತಿಹಾಸಿಕ ಚಿತ್ರಗಳು ರಾಜ್ ಅಭಿನಯದಲ್ಲಿ ತೆರೆಕಂಡವು.

೧೯೬೬ರಲ್ಲಿ ಬಿಡುಗಡೆಯಾದ ಸಂಗೀತ ಪ್ರಧಾನ ಸಂಧ್ಯಾರಾಗ ಚಿತ್ರದಲ್ಲಿ ಶಾಸ್ತ್ರೀಯ ಸಂಗೀತಗಾರನಾಗಿ ನಟಿಸಿದ ರಾಜ್ ಅವರ ಅಭಿನಯಕ್ಕೆ ಭಾರತದ ಹೆಸರಾಂತ ಶಾಸ್ತ್ರೀಯ ಗಾಯಕರಾದ ಡಾ.ಬಾಲಮುರಳಿ ಕೃಷ್ಣ ಹಾಗು ಪಂಡಿತ್ ಭೀಮಸೇನ ಜೋಷಿ ಅವರು ಹಾಡಿದ್ದಾರೆ. ಇದೇ ವರ್ಷ ತೆರೆಕಂಡ ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ರಾಜ್‍ಕುಮಾರ್ ಶ್ರೀ ರಾಘವೇಂದ್ರ ಸ್ವಾಮಿಗಳ ಪಾತ್ರದಲ್ಲಿ ನಟಿಸಿದ್ದು, ಈ ಚಿತ್ರದಲ್ಲಿನ ಅಭಿನಯ ತಮ್ಮ ಚಿತ್ರಬದುಕಿನಲ್ಲಿ ಮಿಕ್ಕೆಲ್ಲ ಚಿತ್ರಗಳಿಗಿಂತಲೂ ಹೆಚ್ಚು ತೃಪ್ತಿಕರ ಎಂದು ಹಲವಾರು ಬಾರಿ ಸಂದರ್ಶನಗಳಲ್ಲಿ ತಿಳಿಸಿದ್ದಾರೆ.

೧೯೬೮ರಲ್ಲಿ ಬಿಡುಗಡೆಯಾದ ಜೇಡರ ಬಲೆ ಎಂಬ ಚಿತ್ರದ ಮೂಲಕ ಜೇಮ್ಸ್ ಬಾಂಡ್ ಮಾದರಿಯ ಗೂಢಚಾರಿ ಪಾತ್ರವನ್ನಾಧರಿಸಿದ ಚಿತ್ರಸರಣಿಗೆ ನಾಂದಿ ಹಾಡಿದರು. ಈ ಸರಣಿಯಲ್ಲಿ 'ಪ್ರಕಾಶ್' ಎಂಬ ಏಜೆಂಟ್ ಹೆಸರಿನಲ್ಲಿ (ಏಜೆಂಟ್ ೯೯೯) ಅಭಿನಯಿಸಿದರು. ಈ ಸರಣಿಯಲ್ಲಿನ ಇತರ ಚಿತ್ರಗಳು ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ. ೯೯೯, ಗೋವಾದಲ್ಲಿ ಸಿ.ಐ.ಡಿ. ೯೯೯ ಹಾಗು ಆಪರೇಷನ್ ಡೈಮಂಡ್ ರ್ಯಾಕೆಟ್. ಇವಲ್ಲದೇ ಸಿ.ಐ.ಡಿ. ರಾಜಣ್ಣ ಚಿತ್ರದಲ್ಲಿ ಸಿ.ಐ.ಡಿ ಆಗಿ ರಾಜ್ ಅಭಿನಯಿಸಿದ್ದಾರೆ.

ರಾಜ್‍ಕುಮಾರ್ ಅವರ ನೂರನೇ ಚಿತ್ರವಾದ ಭಾಗ್ಯದ ಬಾಗಿಲು ೧೯೬೮ರಲ್ಲಿ ತೆರೆಕಂಡಿತು. ಇದೇ ಸಂದರ್ಭದಲ್ಲಿ ಇವರಿಗೆ ನಟಸಾರ್ವಭೌಮ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತಲ್ಲದೆ, ಅದೇ ಹೆಸರಿನ ಚಲನಚಿತ್ರವೂ(ನಟಸಾರ್ವಭೌಮ) ಕೂಡ ತಯಾರಾಯಿತು. ಈ ಚಿತ್ರವು ರಾಜ್‍ಕುಮಾರ್ ಅವರ ಹಿಂದಿನ ನೂರು ಚಿತ್ರಗಳ ತುಣುಕು ದೃಶ್ಯಗಳನ್ನು ಜೊತೆಗೂಡಿಸಿ ತಯಾರಿಸುವ ಯೋಜನೆಯೊಂದಿಗೆ ಪ್ರಾರಂಭವಾದರೂ, ಸ್ಥಳಾವಕಾಶದ ಕೊರತೆಯಿಂದ ಕೆಲವು ಚಿತ್ರಗಳ ತುಣುಕುಗಳನ್ನು ಕೈಬಿಡಲಾಗಿದೆ.

೧೯೭೧ರಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಮತ್ತು ಸಾಕ್ಷಾತ್ಕಾರ ಚಿತ್ರಗಳು ರಾಜ್ ಅವರ ಜನಪ್ರಿಯ ಚಿತ್ರಗಲಲ್ಲಿ ಮುಖ್ಯವಾದವು. ಈ ಚಿತ್ರಗಳಲ್ಲಿನ ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಗು ಒಲವೆ ಜೀವನ ಸಾಕ್ಷಾತ್ಕಾರ ಹಾಡುಗಳು ಜನಮನಗಳಲ್ಲಿ ವಿಶೇಷ ಸ್ಥಾನ ಪಡೆದ ಗೀತೆಗಳಾಗಿವೆ.

ರಾಜ್‍ಕುಮಾರ್ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಚಿತ್ರ ೧೯೭೧ರಲ್ಲಿ ತೆರೆಕಂಡ ಬಂಗಾರದ ಮನುಷ್ಯ. ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರದರ್ಶನಗೊಂಡು ಹೊಸ ದಾಖಲೆಯನ್ನು ನಿರ್ಮಿಸಿತು. ಈ ದಾಖಲೆ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಅಚ್ಚಳಿಯದೇ ನಿಂತಿದೆ. ಈ ಚಿತ್ರದಲ್ಲಿನ ರಾಜ್ ಅಭಿನಯದ ರಾಜೀವಪ್ಪ ಎಂಬ ಪಾತ್ರವು ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಖ್ಯಾತ ಪಾತ್ರಗಳಲ್ಲಿ ಒಂದಾಗಿ ಹೆಸರು ಪಡೆಯಿತು.

ರಾಜ್‍ಕುಮಾರ್ ಅವರ ನೂರೈವತ್ತನೇ ಚಿತ್ರ, ೧೯೭೩ರಲ್ಲಿ ತೆರೆಕಂಡ, ಗಂಧದ ಗುಡಿ. ರಾಜ್ ಅರಣ್ಯಾಧಿಕಾರಿಯ ಪಾತ್ರದಲ್ಲಿ ನಟಿಸಿದ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಮತ್ತೊಬ್ಬ ಖ್ಯಾತ ನಟರಾದ ವಿಷ್ಣುವರ್ಧನ್ ಅಭಿನಯಿಸಿದ್ದಾರೆ.

೧೯೭೪ರಲ್ಲಿ ತೆರೆಕಂಡ ಭಕ್ತ ಕುಂಬಾರ ಚಿತ್ರದಲ್ಲಿನ ರಾಜ್ ಅಭಿನಯ ಮನೋಜ್ಞ ಮತ್ತು ಅತ್ಯಂತ ಭಾವಪೂರ್ಣ ಎಂದು ವಿಮರ್ಶಕರ ಅಭಿಪ್ರಾಯ. ಇದೇ ವರ್ಷ ಬಿಡುಗಡೆಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ಮೂಲಕ ರಾಜ್ ಹಿನ್ನೆಲೆ ಗಾಯಕರಾಗಿ ತಮ್ಮ ಮುಂದಿನ ಎಲ್ಲಾ ಚಿತ್ರಗಳಲ್ಲೂ ಹಾಡಲು ಪ್ರಾರಂಭಿಸಿದರು.

೧೯೭೫ರಲ್ಲಿ ಬಿಡುಗಡೆಯಾದ ಮಯೂರ ಚಲನಚಿತ್ರವು ಕನ್ನಡದ ಪ್ರಥಮ ದೊರೆ ಕದಂಬರ ಮಯೂರವರ್ಮರನ್ನಾಧರಿಸಿದೆ. ಈ ಚಿತ್ರದಲ್ಲಿರುವ ನಾನಿರುವುದೆ ನಿಮಗಾಗಿ, ನಾಡಿರುವುದೆ ನಮಗಾಗಿ ಗೀತೆಯು ರಾಜ್ ಗಾಯನದಲ್ಲಿನ ಅತ್ಯಂತ ಜನಪ್ರಿಯ ಗೀತೆಗಳಲ್ಲೊಂದು. ೧೯೭೬ರಲ್ಲಿ ಮೈಸೂರು ವಿಶ್ವವಿದ್ಯಾಲವು ರಾಜ್‍ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿತು.

೧೯೭೭ರಲ್ಲಿ ಬಂದಂತಹ ಸನಾದಿ ಅಪ್ಪಣ್ಣ ಚಿತ್ರದಲ್ಲಿ, ಡಾ.ರಾಜ್ ಶಹನಾಯಿ ವಾದಕರಾಗಿ ಅಭಿನಯಿಸಿದರು. ಈ ಚಿತ್ರಕ್ಕೆ ಅವಶ್ಯಕವಾಗಿದ್ದ ಶಹನಾಯಿ ವಾದನವನ್ನು ನುಡಿಸಿದವರು ಭಾರತದ ಪ್ರಖ್ಯಾತ ಶಹನಾಯಿ ವಾದಕರಾದ ಉಸ್ತಾದ್ ಬಿಸ್ಮಿಲ್ಲಾ ಖಾನ್. ಜಿ.ಕೆ.ವೆಂಕಟೇಶ್ ಸಂಗೀತದಲ್ಲಿ ಎಸ್.ಜಾನಕಿಯವರು ಹಾಡಿರುವ ಕರೆದರೂ ಕೇಳದೆ ಎಂಬ ಹಾಡಿನಲ್ಲಿ ಬರುವ ಬಿಸ್ಮಿಲ್ಲಾ ಖಾನರ ಶಹನಾಯಿ ವಾದನಕ್ಕೆ ಡಾ.ರಾಜ್ ಅಭಿನಯಿಸಿದ್ದಾರೆ.

೧೯೮೦ರ ದಶಕದಲ್ಲಿ ಸದಭಿರುಚಿಯ ಸಾಮಾಜಿಕ ಚಿತ್ರಗಳಾದ ಹಾಲುಜೇನು, ಚಲಿಸುವ ಮೋಡಗಳು, ಹೊಸ ಬೆಳಕು, ಶ್ರಾವಣ ಬಂತು, ಅನುರಾಗ ಅರಳಿತು, ಶ್ರುತಿ ಸೇರಿದಾಗ ಮುಂತಾದ ಯಶಸ್ವಿ ಚಿತ್ರಗಳು ತೆರೆಕಂಡವು. ಇದೇ ಅವಧಿಯಲ್ಲಿ ಡಾ.ರಾಜ್ ಅವರು ಅನಂತ್ ನಾಗ್ ಅವರೊಂದಿಗೆ ಕಾಮನಬಿಲ್ಲು ಚಿತ್ರದಲ್ಲಿಯೂ, ಶಂಕರ್ ನಾಗ್ ಅವರೊಂದಿಗೆ ಅಪೂರ್ವ ಸಂಗಮ ಚಿತ್ರದಲ್ಲಿಯೂ ಅಭಿನಯಿಸಿದರು. ಶಂಕರ್ ನಾಗ್ ನಿರ್ದೇಶನದ ಕೆಲವೇ ಚಿತ್ರಗಳಲ್ಲಿ ಒಂದಾದ ಒಂದು ಮುತ್ತಿನ ಕಥೆ ಚಿತ್ರದಲ್ಲಿ ಡಾ.ರಾಜ್ ನಟಿಸಿದ್ದಾರೆ. ತಮ್ಮ ಯೋಗಾಸನಗಳಿಗೆ ಹೆಸರಾಗಿದ್ದ ಡಾ.ರಾಜ್ ಅವರ ವಿವಿಧ ಯೋಗಾಸನಗಳ ಭಂಗಿಗಳು ಕಾಮನಬಿಲ್ಲು ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೂ ಮೂಡಿಬಂದಿದೆ.

೧೯೮೩ರಲ್ಲಿ ಬಂದಂತಹ ಕವಿರತ್ನ ಕಾಳಿದಾಸ, ಡಾ.ರಾಜ್ ಅವರ ಕಲಾ ನೈಪುಣ್ಯಕ್ಕೆ ಓರೆ ಹಚ್ಚಿದ ಚಿತ್ರ. ಈ ಚಿತ್ರದಲ್ಲಿ ಅವಿದ್ಯಾವಂತ ಕುರುಬನಾಗಿಯೂ, ಮಹಾಕವಿಯಾದ ಕಾಳಿದಾಸನಾಗಿಯೂ, ದುಷ್ಯಂತ ಮಹಾರಾಜನಾಗಿಯೂ ವಿವಿಧ ಪಾತ್ರಗಳಿಗೆ ರಾಜ್ ಜೀವತುಂಬಿದ್ದಾರೆ. ಈ ಚಿತ್ರವು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರಗಳಲ್ಲೊಂದಾಗಿಸುವಲ್ಲಿ ಡಾ.ರಾಜ್ ಅಮೋಘ ಅಭಿನಯದ ಕೊಡುಗೆ ಮುಖ್ಯವಾದುದೆಂದು ವಿಮರ್ಶಕರ ಅಭಿಪ್ರಾಯ.

ಡಾ.ರಾಜ್ ಅವರ ಇನ್ನೂರನೇ ಚಿತ್ರವು ೧೯೮೮ರಲ್ಲಿ ತೆರೆಕಂಡ ದೇವತಾ ಮನುಷ್ಯ. ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರೊಲ್ಲೊಬ್ಬರಾದ ಸುಧಾರಾಣಿಯವರು ಡಾ.ರಾಜ್ ಅವರ ಪುತ್ರಿಯಾಗಿ ನಟಿಸಿದ್ದಾರೆ.

ಕನ್ನಡದ ಮತ್ತೊಬ್ಬ ಜನಪ್ರಿಯ ನಾಯಕ ನಟರಾದ ಅಂಬರೀಶ್ ಅವರ ಸಹೋದರನಾಗಿ ಒಡಹುಟ್ಟಿದವರು ಚಿತ್ರದಲ್ಲಿ ಅಭಿನಯಿಸಿದ ಡಾ.ರಾಜ್, ಸಾಮಾಜಿಕ ಕಳಕಳಿಯ ಚಿತ್ರಗಳತ್ತ ಒಲವು ತೋರಿದ್ದರು. ಜೀವನ ಚೈತ್ರ ಚಿತ್ರದ ಮೂಲಕ ಸಾರಾಯಿ ಪಿಡುಗಿನ ವಿರುದ್ಧ, ಆಕಸ್ಮಿಕ ಚಿತ್ರದ ಮೂಲಕ ಹೆಣ್ಣಿನ ಶೋಷಣೆಯ ವಿರುದ್ಧ, ಶಬ್ದವೇಧಿ ಚಿತ್ರದ ಮೂಲಕ ಮಾದಕ ವ್ಯಸನಗಳ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ.ರಾಜ್ ಅಭಿನಯಿಸಿದರು.

ಡಾ.ರಾಜ್‍ಕುಮಾರ್ ನಾಯಕನಾಗಿ ನಟಿಸಿದ ಕೊನೆಯ ಚಿತ್ರ ವರ್ಷ ೨೦೦೦ರಲ್ಲಿ ತೆರೆಕಂಡ ಶಬ್ದವೇದಿ. ಭಕ್ತ ಅಂಬರೀಶ ಎಂಬ ಚಿತ್ರದಲ್ಲಿ ನಟಿಸಬೇಕೆಂಬ ಹಂಬಲವನ್ನು ರಾಜ್ ಹಲವಾರು ಬಾರಿ ವ್ಯಕ್ತಪಡಿಸಿದ್ದರಾದರೂ ಅನಾರೋಗ್ಯದ ಕಾರಣ ಅದು ಸಾಧ್ಯವಾಗಲಿಲ್ಲ. ಬೆಳ್ಳಿತೆರೆಯ ಮೇಲೆ ಡಾ.ರಾಜ್ ಅವರು ಕಡೆಯದಾಗಿ ಕಾಣಿಸಿಕೊಂಡ ಚಿತ್ರ ತಮ್ಮ ಪುತ್ರ ಶಿವರಾಜ್‍ಕುಮಾರ್ ನಾಯಕತ್ವದಲ್ಲಿನ ಜೋಗಿ. ಚಿತ್ರದ ಆರಂಭದ ದೃಶ್ಯದಲ್ಲಿ ನಾಯಕನ ಜೋಳಿಗೆಗೆ ಅಕ್ಕಿಯನ್ನು ಅರ್ಪಿಸಿ, ಆಶೀರ್ವದಿಸುತ್ತಾರೆ.

[ಬದಲಾಯಿಸಿ] ಗಾಯಕರಾಗಿ ಡಾ.ರಾಜ್

ಕೇವಲ ನಟನೆಯಲ್ಲದೆ, ಅತ್ಯುತ್ತಮ ಗಾಯಕರೂ ಆಗಿದ್ದ ರಾಜ್ ಕನ್ನಡ ಗಾನಲೋಕಕ್ಕೂ ತಮ್ಮ ಅಪಾರ ಸೇವೆ ಸಲ್ಲಿಸಿದ್ದಾರೆ. ೧೯೭೪ರಲ್ಲಿ ಬಿಡುಗಡೆಯಾದ ಸಂಪತ್ತಿಗೆ ಸವಾಲ್ ಚಿತ್ರದ ಯಾರೇ ಕೂಗಾಡಲಿ,ಊರೇ ಹೋರಾಡಲಿ (ಎಮ್ಮೆ ಹಾಡೆಂದೇ ಪ್ರಸಿಧ್ಧಿ) ಎಂಬ ಹಾಡಿನಿಂದ ಅವರು ಪೂರ್ಣ ಪ್ರಮಾಣದ ಗಾಯಕರಾಗಿ ಹೊರ ಹೊಮ್ಮಿದರು. ಇದಕ್ಕೂ ಮುಂಚೆ ೧೯೫೬ರಲ್ಲೇ ಓಹಿಲೇಶ್ವರ ಚಿತ್ರದಲ್ಲಿ "ಶರಣು ಶಂಭೋ" ಎಂಬು ಗೀತೆಯೊಂದನ್ನು ಹಾಗು ಮಹಿಷಾಸುರ ಮರ್ಧಿನಿ ಚಿತ್ರದಲ್ಲಿ ಎಸ್.ಜಾನಕಿಯವರೊಡನೆ "ತುಂಬಿತು ಮನವ ತಂದಿತು ಸುಖವ" ಎಂಬ ಯುಗಳ ಗೀತೆಯನ್ನು ಹಾಡಿದ್ದರು. ಈ ಮೂರು ಚಿತ್ರಗಳು ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನವನ್ನು ಹೊಂದಿದ್ದವು. ಜಿ.ಕೆ.ವೆಂಕಟೇಶ್ ಹಾಗು ಉಪೇಂದ್ರಕುಮಾರ್ ಸಂಗೀತದಲ್ಲಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.
೧೯೬೨ರಲ್ಲಿ, ದೇವಸುಂದರಿ ಚಿತ್ರದಲ್ಲಿ ಹಾಸ್ಯರತ್ನ ನರಸಿಂಹರಾಜು ಅವರ ಪಾತ್ರಕ್ಕೆ ಯುಗಳ ಗೀತೆಯೊಂದನ್ನೂ ಹಾಡಿದ್ದಾರೆ. ಡಾ.ರಾಜ್ ಅವರು ಬೇರೊಬ್ಬರ ಅಭಿನಯಕ್ಕೆ ಹಿನ್ನೆಲೆಗಾಯನ ಮಾಡಿದ ಮೊದಲ ಚಿತ್ರಗೀತೆಯಿದು.
೧೯೬೪ರಲ್ಲಿ, ನವಕೋಟಿನಾರಾಯಣ (ಭಕ್ತ ಪುರಂದರದಾಸ) ಚಲನಚಿತ್ರದಲ್ಲಿ ಕೆಲವು ಕೀರ್ತನೆಗಳನ್ನು ಹಾಡಿದ್ದಾರೆ.
ಜೀವನ ಚೈತ್ರ ಚಿತ್ರದಲ್ಲಿನ ನಾದಮಯ ಈ ಲೋಕವೆಲ್ಲಾ ಹಾಡಿನ ಗಾಯನಕ್ಕೆ ರಾಷ್ಟ್ರಪ್ರಶಸ್ತಿಯನ್ನು ಪಡೆದರು.
೨೦೦೩ರಲ್ಲಿ ಬಿಡುಗಡೆಯಾದ ಅಭಿ ಚಿತ್ರದ "ವಿಧಿ ಬರಹ ಎಂಥ ಘೋರ" ಹಾಗು ಅದೇ ವರ್ಷದ ಚಿಗುರಿದ ಕನಸು ಚಿತ್ರದ "ಬಂಧುವೇ ಓ ಬಂಧುವೇ" ಇವರು ಹಾಡಿದ ಇತ್ತೀಚಿನ ಚಿತ್ರಗೀತೆಗಳಾಗಿರುತ್ತವೆ. ಚಿತ್ರಗೀತೆಗಳಷ್ಟೇ ಅಲ್ಲದೆ ಹಲವಾರು ಭಕ್ತಿಗೀತೆಗಳನ್ನು ಹಾಡಿರುವರು. ಕನ್ನಡವೇ ಸತ್ಯ, ಅನುರಾಗ, ಮಂಕುತಿಮ್ಮನ ಕಗ್ಗ - ರಾಜ್ ಕಂಠದಲ್ಲಿ ಮೂಡಿ ಬಂದ ಭಾವಗೀತೆ ಸಂಕಲನಗಳು.

[ಬದಲಾಯಿಸಿ] ಕನ್ನಡಪರ ಚಳುವಳಿಗಳಲ್ಲಿ ಡಾ.ರಾಜ್

ಗೋಕಾಕ್ ಚಳುವಳಿಯಲ್ಲಿ ಡಾ.ರಾಜ್
ಗೋಕಾಕ್ ಚಳುವಳಿಯಲ್ಲಿ ಡಾ.ರಾಜ್

ಗೋಕಾಕ್ ವರದಿಯು ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು, ಹಾಗು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕನ್ನಡ ಭಾಷೆಗೆ ಕೊಡುವುದರ ಬಗ್ಗೆ ಸಿದ್ಧವಾಗಿತ್ತು. ಆದರೆ, ಈ ವರದಿಯು ಜಾರಿಗೆ ಬಂದಿರಲಿಲ್ಲ. ೧೯೮೧ರಲ್ಲಿ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ್ ಮುಂತಾದ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು, ಹಲವು ಸಂಘಸಂಸ್ಥೆಗಳು ಗೋಕಾಕ್ ವರದಿಯನ್ನು ಜಾರಿಗೊಳಿಸುವಂತೆ ಚಳುವಳಿಯನ್ನು ಪ್ರಾರಂಭಮಾಡಿದರು. ಇದೇ ಚಳುವುಳಿಯು ಗೋಕಾಕ್ ಚಳುವಳಿ ಎಂದೇ ಹೆಸರಾಯಿತು.

ಚಳುವಳಿಯು ಪ್ರಾರಂಭಗೊಂಡು ಹಲವಾರು ದಿನಗಳು ಕಳೆದರೂ, ಜನಸಾಮಾನ್ಯರಿಂದ ಉತ್ಸಾಹದ ಪ್ರತಿಕ್ರಿಯೆ ಕಂಡು ಬರಲಿಲ್ಲ. ಈ ಸಮಯದಲ್ಲಿ, ಡಾ. ರಾಜ್ ಅವರನ್ನು ಚಳುವಳಿಗೆ ಆಹ್ವಾನಿಸಿ, ಚಳುವಳಿಯ ಬಲವರ್ಧನೆ ಮಾಡಬೇಕೆಂದು ಕೋರಲಾಯಿತು.

ಡಾ. ರಾಜ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗ, ಗೋಕಾಕ್ ಚಳುವಳಿಗೆ ಸಂಪೂರ್ಣ ಸಹಕಾರ ನೀಡಲು ಪ್ರಕಟಿಸಿ, ರಾಜ್ಯಾದ್ಯಂತ ಪ್ರವಾಸ ಕೈಗೊಂಡಿತು. ಹಲವಾರು ಸಭೆಗಳು, ಭಾಷಣಗಳು ಕರ್ನಾಟಕದ ಪ್ರಮುಖ ನಗರಗಳಲ್ಲಿ ಜರುಗಿದವು. ಕರ್ನಾಟಕದ ಜನತೆ ಚಳುವಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಪ್ರತಿಕ್ರಿಯಿಸಿದರು, ಭಾಗವಹಿಸಿದರು. ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು, ಕನ್ನಡ ಭಾಷೆಗೆ ಸಿಗಬೇಕಾದ ಹಕ್ಕುಗಳು,ಸೌಲಭ್ಯಗಳನ್ನು ಆಗಿನ ಕರ್ನಾಟಕ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು, ಡಾ.ರಾಜ್ ಅವರ ಭಾಷಣಗಳು ಹಾಗು ಚಳುವಳಿಯ ನೇತೃತ್ವ ಸಹಾಯಕಾರಿಯಾದವು.

ಗುಂಡೂರಾವ್ ನೇತೃತ್ವದ ಆಗಿನ ಕರ್ನಾಟಕ ಸರ್ಕಾರವು ಚಳುವಳಿಯ ತೀವ್ರತೆಗೆ ಸ್ಪಂದಿಸಿ, ಗೋಕಾಕ್ ವರದಿಯನ್ನು ಜಾರಿಗೊಳಿಸಿತು.

[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರಗಳು, ಬಿರುದುಗಳು

ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‍ಕುಮಾರ್
ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್‍ಕುಮಾರ್
  • ಪದ್ಮಭೂಷಣ (ಭಾರತ ಸರ್ಕಾರದಿಂದ)
  • ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (೧೯೯೫ರಲ್ಲಿ ಭಾರತ ಸರ್ಕಾರದಿಂದ)
  • ಕರ್ನಾಟಕ ರತ್ನ (ಕರ್ನಾಟಕ ಸರ್ಕಾರ)
  • ರಾಷ್ಟ್ರಪ್ರಶಸ್ತಿ (ಜೀವನ ಚೈತ್ರ ಚಿತ್ರದಲ್ಲಿನ 'ನಾದಮಯ ಈ ಲೋಕವೆಲ್ಲಾ' ಹಾಡಿನ ಗಾಯನಕ್ಕೆ)
  • ಅತ್ಯುತ್ತಮ ನಟ ಫಿಲ್ಮ್‍ಫೇರ್ ಪ್ರಶಸ್ತಿ (ಹತ್ತು ಬಾರಿ)
  • ಅತ್ಯುತ್ತಮ ನಟ ರಾಜ್ಯಪ್ರಶಸ್ತಿ (ಒಂಬತ್ತು ಬಾರಿ)
  • ನಟಸಾರ್ವಭೌಮ (೧೦೦ನೆಯ ಚಿತ್ರದ ಸಂದರ್ಭದಲ್ಲಿ)
  • ಗಾನಗಂಧರ್ವ (ಅಭಿಮಾನಿ ಸಂಘಗಳಿಂದ)
  • ವರನಟ (ಪತ್ರಕರ್ತರು, ಅಭಿಮಾನಿಗಳು)
  • ಗೌರವ ಡಾಕ್ಟರೇಟ್(ಮೈಸೂರು ವಿಶ್ವವಿದ್ಯಾಲಯ)
  • ಅಣ್ಣಾವ್ರು (ಅಭಿಮಾನಿಗಳಿಂದ)
  • ರಸಿಕರ ರಾಜ (ಅಭಿಮಾನಿಗಳಿಂದ)
  • ಕೆಂಟಕಿ ಕರ್ನಲ್ (ಅಮೆರಿಕದ ಕೆಂಟಕಿ ರಾಜ್ಯದ ಗವರ್ನರ್ ೧೯೮೫ರಲ್ಲಿ ಬೆಂಗಳೂರಲ್ಲಿ ನೀಡಿದರು)
  • ಕನ್ನಡದ ಕಣ್ಮಣಿ (ಅಭಿಮಾನಿಗಳಿಂದ)
  • ಮೇರು ನಟ (ಅಭಿಮಾನಿಗಳಿಂದ)
  • ನಾಡೋಜ ಪ್ರಶಸ್ತಿ (ಕರ್ನಾಟಕ ಸರ್ಕಾರ)
  • ಗುಬ್ಬಿ ವೀರಣ್ಣ ಪ್ರಶಸ್ತಿ (ಕರ್ನಾಟಕ ಸರ್ಕಾರ)
  • ಕಲಾ ಕೌಸ್ತುಭ (ವೃತ್ತಿ ರಂಗಭೂಮಿಗೆ ಸಲ್ಲಿಸಿದ ಸೇವೆಗೆ, ಕರ್ನಾಟಕ ಸರ್ಕಾರದಿಂದ)

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ, ಯಶವಂತಪುರ ಮೇಲ್ಸೇತುವೆಯಿಂದ ಪ್ರಸನ್ನ ಚಿತ್ರಮಂದಿರದವರೆಗೆ ರಾಜಾಜಿನಗರದ ಮೂಲಕ ಹಾದುಹೋಗುವ ಮುಖ್ಯರಸ್ತೆಗೆ ಡಾ. ರಾಜ್‍ಕುಮಾರ್ ರಸ್ತೆ ಎಂದು ಹೆಸರಿಸಲಾಗಿದೆ.

[ಬದಲಾಯಿಸಿ] ಪಿ.ಹೆಚ್.ಡಿ ವಸ್ತುವಾಗಿ ಡಾ.ರಾಜ್ ಸಾಂಸ್ಕೃತಿಕ ಕೊಡುಗೆಗಳು

ಬೆಂಗಳೂರಿನ ಬಸವನಗುಡಿಯಲ್ಲಿರುವ ವಿಜಯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾದ ಡಿ.ಗುರುಮೂರ್ತಿ ಹಾರೋಹಳ್ಳಿ ಅವರು "ಕನ್ನಡ ರಂಗಭೂಮಿ ಮತ್ತು ಸಿನೆಮಾಕ್ಕೆ ಡಾ.ರಾಜ್ ಕೊಡುಗೆ" ಕುರಿತ ಸಂಶೋಧನಾತ್ಮಕ ಪ್ರಬಂಧ ಮಂಡಿಸಿ, ಮೈಸೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಈ ಸಂಶೋಧನೆಯ ಸಮಯದಲ್ಲಿ, ಡಾ.ರಾಜ್ ಅವರನ್ನು ಹಲವಾರು ಬಾರಿ ಸಂದರ್ಶಿಸಿದ್ದಾರೆ. ೧೯೯೭ರಲ್ಲಿ ಪ್ರಾರಂಭಿಸಿದ ಸಂಶೋಧನೆಯನ್ನು ನಾಲ್ಕುವರ್ಷಗಳ ಕಾಲ ಡಾ.ಮಳಲಿ ವಸಂತಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆಸಿದ ಗುರುಮೂರ್ತಿ ೨೦೦೧ರಲ್ಲಿ ಪಿ.ಹೆಚ್.ಡಿ ಪದವಿ ಪಡೆದರು.

[ಬದಲಾಯಿಸಿ] ವೀರಪ್ಪನ್‍ನಿಂದ ಡಾ.ರಾಜ್ ಅಪಹರಣ

೩೦ ಜುಲೈ ೨೦೦೦ರಂದು, ಕುಖ್ಯಾತ ದಂತಚೋರ, ನರಹಂತಕ ವೀರಪ್ಪನ್‍ನಿಂದ ಡಾ.ರಾಜ್ ಅವರು ಗಾಜನೂರಿನಲ್ಲಿರುವ ತಮ್ಮ ತೋಟದ ಮನೆಯಿಂದ ಅಪಹರಣವಾದರು. ಡಾ.ರಾಜ್ ಅವರೊಂದಿಗೆ ಅವರ ಅಳಿಯ ಗೋವಿಂದರಾಜು ಮತ್ತು ನಾಗಪ್ಪ ಮಾರಡಗಿ ಅವರೂ ಕೂಡ ಅಪಹರಣಕ್ಕೊಳಗಾದರು. ಅಪಹರಣದ ನಂತರದ ದಿನಗಳಲ್ಲಿ, ಕ್ಯಾಸೆಟ್ಟುಗಳ ಮೂಲಕ, ಪತ್ರಗಳ ಮೂಲಕ ಕರ್ನಾಟಕ ಹಾಗು ತಮಿಳುನಾಡು ಸರ್ಕಾರಗಳನ್ನು ಸಂಪರ್ಕಿಸುತ್ತಿದ್ದ ವೀರಪ್ಪನ್ ಡಾ.ರಾಜ್ ಅವರನ್ನು ಒತ್ತೆಯಾಳಗಿಟ್ಟುಕೊಂಡು, ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದನು.

ನೂರೆಂಟು ದಿನಗಳ ಕಾಲ ಅಪಹೃತರಾಗಿ, ಅರ್ರಣ್ಯವಾಸ ಅನುಭವಿಸಿದ್ದ ಡಾ.ರಾಜ್, ೧೫ ನವೆಂಬರ್ ೨೦೦೦ರಂದು ಬಿಡುಗಡೆಗೊಂಡರು.

ಅಪಹರಣದ ಅವಧಿಯಲ್ಲಿ ಕರ್ನಾಟಕದ ಪೋಲಿಸ್ ಮಹಾನಿರ್ದೇಶಕರಾದ(ಡಿಜಿಪಿ) ಪಿ.ದಿನಕರ್ ಅವರು ಅಪಹರಣದ ಬಗ್ಗೆ "Veerappan's Prize Catch: Dr.Rajkumar" ಎಂಬ ಪುಸ್ತಕವನ್ನು ಬರೆದಿದ್ದಾರೆ. ಆ ಪುಸ್ತಕವನ್ನು ರವಿ ಬೆಳಗೆರೆಯವರು "ರಾಜ ರಹಸ್ಯ" ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

[ಬದಲಾಯಿಸಿ] ಬಂಗಾರದ ಮನುಷ್ಯ ಪುಸ್ತಕ

ಡಾ.ರಾಜಕುಮಾರ್ ಜೀವನ ಹಾಗೂ ಸಾಧನೆ ಕುರಿತು ಅ.ನಾ.ಪ್ರಹ್ಲಾದರಾವ್ ಬರೆದ ಬಂಗಾರದ ಮನುಷ್ಯ ಅತ್ಯಂತ ಜನಪ್ರಿಯ ಪುಸ್ತಕ. ೨೨೦ ಪುಟಗಳ ಈ ಪುಸ್ತಕ ಡಾ.ರಾಜಕುಮಾರ್ ಅವರಿಂದಲೇ ಈ ಪುಸ್ತಕ ಪ್ರಶಂಸೆಗೆ ಒಳಗಾಯಿತು.

[ಬದಲಾಯಿಸಿ] ನಿಧನ

ಮಾಧ್ಯಮಗಳಿಂದ "ಅಂತಿಮ ನಮನ, ಅಣ್ಣಾವ್ರೆ"
ಮಾಧ್ಯಮಗಳಿಂದ "ಅಂತಿಮ ನಮನ, ಅಣ್ಣಾವ್ರೆ"

ಅಂತಿಮ ದಿನಗಳಲ್ಲಿ ಮಂಡಿನೋವು ಹಾಗು ಎದೆನೋವಿನಿಂದ ಬಳಲಿದ ಡಾ.ರಾಜ್, ೧೨ ಏಪ್ರಿಲ್, ೨೦೦೬ ಬುಧವಾರದಂದು ಮಧ್ಯಾಹ್ನ ೧:೪೫ರ ಸುಮಾರಿಗೆ, ಬೆಂಗಳೂರಿನಲ್ಲಿ ತಮ್ಮ ಕೊನೆಯುಸಿರೆಳದರು.

ಕನ್ನಡ ಚಿತ್ರರಂಗದ ದಂತಕಥೆಯಾಗಿದ್ದ ಡಾ.ರಾಜ್ ಅವರ ಅಗಲಿಕೆಯಿಂದ, ಒಂದು ಸುವರ್ಣ ಯುಗದ ಅಂತ್ಯವಾದಂತಾಯಿತು. ಡಾ.ರಾಜ್ ಅವರ ಸ್ವ-ಇಚ್ಛೆಯಂತೆ, ಮರಣೋತ್ತರವಾಗಿ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಮೃತರ ಪಾರ್ಥಿವ ಶರೀರವನ್ನು ಅಭಿಮಾನಿಗಳ, ಬಂಧುಮಿತ್ರರ ದರ್ಶನಕ್ಕಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಅಪಾರ ಸಂಖ್ಯಯ ಜನಸ್ತೋಮ ಅಂತಿಮದರ್ಶನದಲ್ಲಿ ಪಾಲ್ಗೊಂಡಿತ್ತು.

೧೩ ಏಪ್ರಿಲ್ ೨೦೦೬ರಂದು, ಬೆಂಗಳೂರಿನ ನಂದಿನಿ ಲೇಔಟ್‍ನಲ್ಲಿರುವ ಕಂಠೀರವ ಸ್ಟುಡಿಯೊ ಆವರಣದಲ್ಲಿ ಡಾ.ರಾಜ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರವು ನಡೆಯಿತು. ಇವೆರಡು ದಿನ (ಏಪ್ರಿಲ್ ೧೨ ಮತ್ತು ೧೩), ಬೆಂಗಳೂರಿನಲ್ಲಿ ಪ್ರಕ್ಷುಬ್ದ ಪರಿಸ್ಥಿತಿ ಉಂಟಾಗಿತ್ತು.

[ಬದಲಾಯಿಸಿ] ಐತಿಹಾಸಿಕ ಚಿತ್ರಗಳು

[ಬದಲಾಯಿಸಿ] ಭಕ್ತಿ ಪ್ರದಾನ ಚಿತ್ರಗಳು

[ಬದಲಾಯಿಸಿ] ಭಕ್ತನ ಪಾತ್ರದಲ್ಲಿ

[ಬದಲಾಯಿಸಿ] ದೇವರ ಪಾತ್ರದಲ್ಲಿ

[ಬದಲಾಯಿಸಿ] ಪತ್ತೇದಾರ/ಗೂಢಚಾರಿ ಪಾತ್ರದಲ್ಲಿ

ಜೇಡರ ಬಲೆ, ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ ೯೯೯, ಗೋವಾದಲ್ಲಿ ಸಿ.ಐ.ಡಿ. ೯೯೯ ಮತ್ತು ಆಪರೇಷನ್ ಡೈಮಂಡ್ ರಾಕೆಟ್ ಚಿತ್ರಗಳು ಜೇಮ್ಸ್‌ಬಾಂಡ್ ಮಾದರಿಯಲ್ಲಿ ಬಂದಂತಹ ಸರಣಿ ಚಲನಚಿತ್ರಗಳು. ಈ ನಾಲ್ಕೂ ಚಿತ್ರಗಳಲ್ಲಿ 'ಪ್ರಕಾಶ್' ಎಂಬ ಹೆಸರಿನ ಸಿ.ಐ.ಡಿ ೯೯೯ ಪಾತ್ರದಲ್ಲಿ ಡಾ.ರಾಜ್ ಅಭಿನಯಿಸಿದ್ದಾರೆ.

[ಬದಲಾಯಿಸಿ] ಖಳ/ಪ್ರತಿನಾಯಕನ ಪಾತ್ರದಲ್ಲಿ

[ಬದಲಾಯಿಸಿ] ಡಾ. ರಾಜ್ ಅಭಿನಯದ ಚಲನಚಿತ್ರಗಳ ಸಂಪೂರ್ಣ ಪಟ್ಟಿ (ಫಿಲ್ಮೋಗ್ರಾಫಿ)

# ವರ್ಷ ಚಿತ್ರ
೧೯೫೪ ಬೇಡರ ಕಣ್ಣಪ್ಪ
೧೯೫೫ ಸೋದರಿ
೧೯೫೬ ಭಕ್ತ ವಿಜಯ
೧೯೫೬ ಹರಿಭಕ್ತ
೧೯೫೬ ಓಹಿಲೇಶ್ವರ
೧೯೫೭ ಸತಿ ನಳಾಯಿನಿ
೧೯೫೭ ರಾಯರ ಸೊಸೆ
೧೯೫೮ ಭೂಕೈಲಾಸ
೧೯೫೮ ಕೃಷ್ಣಗಾರುಡಿ
೧೦ ೧೯೫೮ ಅಣ್ಣ ತಂಗಿ
೧೧ ೧೯೫೯ ಜಗಜ್ಯೋತಿ ಬಸವೇಶ್ವರ
೧೨ ೧೯೫೯ ಧರ್ಮ ವಿಜಯ
೧೩ ೧೯೫೯ ಮಹಿಷಾಸುರ ಮರ್ಧಿನಿ
೧೪ ೧೯೫೯ ಅಬ್ಬಾ ಆ ಹುಡುಗಿ
೧೫ ೧೯೬೦ ರಣಧೀರ ಕಂಠೀರವ
೧೬ ೧೯೬೦ ರಾಣಿ ಹೊನ್ನಮ್ಮ
೧೭ ೧೯೬೦ ಆಶಾಸುಂದರಿ
೧೮ ೧೯೬೦ ದಶಾವತಾರ
೧೯ ೧೯೬೦ ಭಕ್ತ ಕನಕದಾಸ
೨೦ ೧೯೬೧ ಶ್ರೀಶೈಲ ಮಹಾತ್ಮೆ
೨೧ ೧೯೬೧ ಕಿತ್ತೂರು ಚೆನ್ನಮ್ಮ
೨೨ ೧೯೬೧ ಕಣ್ತೆರೆದು ನೋಡು
೨೩ ೧೯೬೧ ಕೈವಾರ ಮಹಾತ್ಮೆ
೨೪ ೧೯೬೧ ಭಕ್ತ ಚೇತ
೨೫ ೧೯೬೧ ನಾಗಾರ್ಜುನ
೨೬ ೧೯೬೨ ಗಾಳಿಗೋಪುರ
೨೭ ೧೯೬೨ ಭೂದಾನ
೨೮ ೧೯೬೨ ಸ್ವರ್ಣಗೌರಿ
೨೯ ೧೯೬೨ ದೇವಸುಂದರಿ
೩೦ ೧೯೬೨ ಕರುಣೆಯೇ ಕುಟುಂಬದ ಕಣ್ಣು
೩೧ ೧೯೬೨ ಮಹಾತ್ಮ ಕಬೀರ್
೩೨ ೧೯೬೨ ವಿಧಿವಿಲಾಸ
೩೩ ೧೯೬೨ ತೇಜಸ್ವಿನಿ
೩೪ ೧೯೬೩ ವಾಲ್ಮೀಕಿ
೩೫ ೧೯೬೩ ನಂದಾದೀಪ
೩೬ ೧೯೬೩ ಸಾಕು ಮಗಳು
೩೭ ೧೯೬೩ ಕನ್ಯಾರತ್ನ
೩೮ ೧೯೬೩ ಗೌರಿ
೩೯ ೧೯೬೩ ಜೀವನ ತರಂಗ
೪೦ ೧೯೬೩ ಮಲ್ಲಿ ಮದುವೆ
೪೧ ೧೯೬೩ ಕುಲವಧು
೪೨ ೧೯೬೩ ಕಲಿತರೂ ಹೆಣ್ಣೇ
೪೩ ೧೯೬೩ ವೀರಕೇಸರಿ
೪೪ ೧೯೬೩ ಮನ ಮೆಚ್ಚಿದ ಮಡದಿ
೪೫ ೧೯೬೩ ಸತಿ ಶಕ್ತಿ
೪೬ ೧೯೬೩ ಚಂದ್ರಕುಮಾರ
೪೭ ೧೯೬೩ ಸಂತ ತುಕಾರಾಮ
೪೮ ೧೯೬೩ ಶ್ರೀರಾಮಾಂಜನೇಯ ಯುದ್ಧ
೪೯ ೧೯೬೪ ನವಕೋಟಿ ನಾರಾಯಣ
೫೦ ೧೯೬೪ ಚಂದವಳ್ಳಿಯ ತೋಟ
೫೧ ೧೯೬೪ ಶಿವರಾತ್ರಿ ಮಹಾತ್ಮೆ
೫೨ ೧೯೬೪ ಅನ್ನಪೂರ್ಣ
೫೩ ೧೯೬೪ ತುಂಬಿದ ಕೊಡ
೫೪ ೧೯೬೪ ಶಿವಗಂಗೆ ಮಹಾತ್ಮೆ
೫೫ ೧೯೬೪ ಮುರಿಯದ ಮನೆ
೫೬ ೧೯೬೪ ಪ್ರತಿಜ್ಞೆ
೫೭ ೧೯೬೪ ನಾಂದಿ
೫೮ ೧೯೬೫ ನಾಗಪೂಜಾ
೫೯ ೧೯೬೫ ಚಂದ್ರಹಾಸ
೬೦ ೧೯೬೫ ಸರ್ವಜ್ಞ ಮೂರ್ತಿ
೬೧ ೧೯೬೫ ವಾತ್ಸಲ್ಯ
೬೨ ೧೯೬೫ ಸತ್ಯ ಹರಿಶ್ಚಂದ್ರ
೬೩ ೧೯೬೫ ಮಹಾಸತಿ ಅನಸೂಯ
೬೪ ೧೯೬೫ ಇದೇ ಮಹಾ ಸುದಿನ
೬೫ ೧೯೬೫ ಬೆಟ್ಟದ ಹುಲಿ
೬೬ ೧೯೬೫ ಸತಿ ಸಾವಿತ್ರಿ
೬೭ ೧೯೬೫ ಮದುವೆ ಮಾಡಿ ನೋಡು
೬೮ ೧೯೬೫ ಪತಿವ್ರತಾ
೬೯ ೧೯೬೬ ಮಂತ್ರಾಲಯ ಮಹಾತ್ಮೆ
೭೦ ೧೯೬೬ ಕಠಾರಿ ವೀರ
೭೧ ೧೯೬೬ ಬಾಲನಾಗಮ್ಮ
೭೨ ೧೯೬೬ ತೂಗುದೀಪ
೭೩ ೧೯೬೬ ಪ್ರೇಮಮಯಿ
೭೪ ೧೯೬೬ ಕಿಲಾಡಿರಂಗ
೭೫ ೧೯೬೬ ಮಧು ಮಾಲತಿ
೭೬ ೧೯೬೬ ಎಮ್ಮೆ ತಮ್ಮಣ್ಣ
೭೭ ೧೯೬೬ ಮೋಹಿನಿ ಭಸ್ಮಾಸುರ
೭೮ ೧೯೬೬ ಶ್ರೀ ಕನ್ನಿಕಾಪರಮೇಶ್ವರಿ ಕಥೆ
೭೯ ೧೯೬೬ ಸಂಧ್ಯಾರಾಗ
೮೦ ೧೯೬೭ ಪಾರ್ವತಿ ಕಲ್ಯಾಣ
೮೧ ೧೯೬೭ ಸತಿಸುಕನ್ಯಾ
೮೨ ೧೯೬೭ ಗಂಗೆ ಗೌರಿ
೮೩ ೧೯೬೭ ರಾಜಶೇಖರ
೮೪ ೧೯೬೭ ಲಗ್ನಪತ್ರಿಕೆ
೮೫ ೧೯೬೭ ರಾಜ ದುರ್ಗದ ರಹಸ್ಯ
೮೬ ೧೯೬೭ ದೇವರ ಗೆದ್ದ ಮಾನವ
೮೭ ೧೯೬೭ ಬೀದಿ ಬಸವಣ್ಣ
೮೮ ೧೯೬೭ ಮನಸ್ಸಿದ್ದರೆ ಮಾರ್ಗ
೮೯ ೧೯೬೭ ಬಂಗಾರದ ಹೂವು
೯೦ ೧೯೬೭ ಚಕ್ರತೀರ್ಥ
೯೧ ೧೯೬೭ ಇಮ್ಮಡಿ ಪುಲಿಕೇಶಿ
೯೨ ೧೯೬೮ ಜೇಡರ ಬಲೆ
೯೩ ೧೯೬೮ ಗಾಂಧಿನಗರ
೯೪ ೧೯೬೮ ಮಹಾಸತಿ ಅರುಂಧತಿ
೯೫ ೧೯೬೮ ಮನಸ್ಸಾಕ್ಷಿ
೯೬ ೧೯೬೮ ಸರ್ವಮಂಗಳ
೯೭ ೧೯೬೮ ಭಾಗ್ಯ ದೇವತೆ
೯೮ ೧೯೬೮ ಬೆಂಗಳೂರು ಮೇಲ್
೯೯ ೧೯೬೮ ಹಣ್ಣೆಲೆ ಚಿಗುರಿದಾಗ
೧೦೦ ೧೯೬೮ ಭಾಗ್ಯದ ಬಾಗಿಲು
೧೦೧ ೧೯೬೮ ನಟಸಾರ್ವಭೌಮ
೧೦೨ ೧೯೬೮ ರೌಡಿ ರಂಗಣ್ಣ
೧೦೩ ೧೯೬೮ ಧೂಮಕೇತು (ಚಲನಚಿತ್ರ)
೧೦೪ ೧೯೬೮ ಅಮ್ಮ
೧೦೫ ೧೯೬೮ ಸಿಂಹಸ್ವಪ್ನ
೧೦೬ ೧೯೬೮ ಗೋವಾದಲ್ಲಿ ಸಿ.ಐ.ಡಿ ೯೯೯
೧೦೭ ೧೯೬೮ ಮಣ್ಣಿನ ಮಗ
೧೦೮ ೧೯೬೯ ಮಾರ್ಗದರ್ಶಿ
೧೦೯ ೧೯೬೯ ಗಂಡೊಂದು ಹೆಣ್ಣಾರು
೧೧೦ ೧೯೬೯ ಮಲ್ಲಮ್ಮನ ಪವಾಡ
೧೧೧ ೧೯೬೯ ಚೂರಿ ಚಿಕ್ಕಣ್ಣ
೧೧೨ ೧೯೬೯ ಪುನರ್ಜನ್ಮ
೧೧೩ ೧೯೬೯ ಭಲೇ ರಾಜ
೧೧೪ ೧೯೬೯ ಉಯ್ಯಾಲೆ
೧೧೫ ೧೯೬೯ ಚಿಕ್ಕಮ್ಮ
೧೧೬ ೧೯೬೯ ಮೇಯರ್ ಮುತ್ತಣ್ಣ
೧೧೭ ೧೯೬೯ ಆಪರೇಷನ್ ಜಾಕ್‍ಪಾಟ್‍ನಲ್ಲಿ ಸಿ.ಐ.ಡಿ ೯೯೯
೧೧೮ ೧೯೭೦ ಶ್ರೀ ಕೃಷ್ಣದೇವರಾಯ
೧೧೯ ೧೯೭೦ ಕರುಳಿನ ಕರೆ
೧೨೦ ೧೯೭೦ ಹಸಿರು ತೋರಣ
೧೨೧ ೧೯೭೦ ಭೂಪತಿ ರಂಗ
೧೨೨ ೧೯೭೦ ಮಿಸ್ಟರ್ ರಾಜ್‍ಕುಮರ್
೧೨೩ ೧೯೭೦ ಭಲೇ ಜೋಡಿ
೧೨೪ ೧೯೭೦ ಸಿ.ಐ.ಡಿ. ರಾಜಣ್ಣ
೧೨೫ ೧೯೭೦ ನನ್ನ ತಮ್ಮ
೧೨೬ ೧೯೭೦ ಬಾಳು ಬೆಳಗಿತು
೧೨೭ ೧೯೭೦ ದೇವರ ಮಕ್ಕಳು
೧೨೮ ೧೯೭೦ ಪರೋಪಕಾರಿ
೧೨೯ ೧೯೭೧ ಕಸ್ತೂರಿ ನಿವಾಸ
೧೩೦ ೧೯೭೧ ಬಾಳ ಬಂಧನ
೧೩೧ ೧೯೭೧ ಕುಲಗೌರವ
೧೩೨ ೧೯೭೧ ನಮ್ಮ ಸಂಸಾರ
೧೩೩ ೧೯೭೧ ಕಾಸಿದ್ರೆ ಕೈಲಾಸ
೧೩೪ ೧೯೭೧ ತಾಯಿ ದೇವರು
೧೩೫ ೧೯೭೧ ಪ್ರತಿಧ್ವನಿ
೧೩೬ ೧೯೭೧ ಸಾಕ್ಷಾತ್ಕಾರ
೧೩೭ ೧೯೭೧ ನ್ಯಾಯವೇ ದೇವರು
೧೩೮ ೧೯೭೧ ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ
೧೩೯ ೧೯೭೨ ಜನ್ಮ ರಹಸ್ಯ
೧೪೦ ೧೯೭೨ ಸಿಪಾಯಿ ರಾಮು
೧೪೧ ೧೯೭೨ ಬಂಗಾರದ ಮನುಷ್ಯ
೧೪೨ ೧೯೭೨ ಹೃದಯ ಸಂಗಮ
೧೪೩ ೧೯೭೨ ಕ್ರಾಂತಿವೀರ
೧೪೪ ೧೯೭೨ ಭಲೇ ಹುಚ್ಚ
೧೪೫ ೧೯೭೨ ನಂದಗೋಕುಲ
೧೪೬ ೧೯೭೨ ಜಗ ಮೆಚ್ಚಿದ ಮಗ
೧೪೭ ೧೯೭೩ ದೇವರು ಕೊಟ್ಟ ತಂಗಿ
೧೪೮ ೧೯೭೩ ಬಿಡುಗಡೆ
೧೪೯ ೧೯೭೩ ಸ್ವಯಂವರ
೧೫೦ ೧೯೭೩ ಗಂಧದ ಗುಡಿ
೧೫೧ ೧೯೭೩ ದೂರದ ಬೆಟ್ಟ
೧೫೨ ೧೯೭೩ ಮೂರುವರೆ ವಜ್ರಗಳು
೧೫೩ ೧೯೭೪ ಬಂಗಾರದ ಪಂಜರ
೧೫೪ ೧೯೭೪ ಎರಡು ಕನಸು
೧೫೫ ೧೯೭೪ ಸಂಪತ್ತಿಗೆ ಸವಾಲ್
೧೫೬ ೧೯೭೪ ಭಕ್ತ ಕುಂಬಾರ
೧೫೭ ೧೯೭೪ ಶ್ರೀ ಶ್ರೀನಿವಾಸ ಕಲ್ಯಾಣ
೧೫೮ ೧೯೭೪ ದಾರಿ ತಪ್ಪಿದ ಮಗ
೧೫೯ ೧೯೭೫ ಮಯೂರ
೧೬೦ ೧೯೭೫ ತ್ರಿಮೂರ್ತಿ
೧೬೧ ೧೯೭೬ ಪ್ರೇಮದ ಕಾಣಿಕೆ
೧೬೨ ೧೯೭೬ ಬಹದ್ದೂರ್ ಗಂಡು
೧೬೩ ೧೯೭೬ ರಾಜ ನನ್ನ ರಾಜ
೧೬೪ ೧೯೭೬ ನಾ ನಿನ್ನ ಮರೆಯಲಾರೆ
೧೬೫ ೧೯೭೬ ಬಡವರ ಬಂಧು
೧೬೬ ೧೯೭೭ ಬಬ್ರುವಾಹನ
೧೬೭ ೧೯೭೭ ಭಾಗ್ಯವಂತರು
೧೬೮ ೧೯೭೭ ಗಿರಿಕನ್ಯೆ
೧೬೯ ೧೯೭೭ ಸನಾದಿ ಅಪ್ಪಣ್ಣ
೧೭೦ ೧೯೭೭ ಒಲವು ಗೆಲುವು
೧೭೧ ೧೯೭೮ ಶಂಕರ್ ಗುರು
೧೭೨ ೧೯೭೮ ಆಪರೇಷನ್ ಡೈಮಂಡ್ ರ್ಯಾಕೆಟ್
೧೭೩ ೧೯೭೮ ತಾಯಿಗೆ ತಕ್ಕ ಮಗ
೧೭೪ ೧೯೭೯ ಹುಲಿಯ ಹಾಲಿನ ಮೇವು
೧೭೫ ೧೯೭೯ ನಾನೊಬ್ಬ ಕಳ್ಳ
೧೭೬ ೧೯೮೦ ರವಿಚಂದ್ರ
೧೭೭ ೧೯೮೦ ವಸಂತಗೀತ
೧೭೮ ೧೯೮೧ ಹಾವಿನ ಹೆಡೆ
೧೭೯ ೧೯೮೧ ನೀ ನನ್ನ ಗೆಲ್ಲಲಾರೆ
೧೮೦ ೧೯೮೧ ಕೆರಳಿದ ಸಿಂಹ
೧೮೧ ೧೯೮೨ ಹೊಸಬೆಳಕು
೧೮೨ ೧೯೮೨ ಹಾಲು ಜೇನು
೧೮೩ ೧೯೮೨ ಚಲಿಸುವ ಮೋಡಗಳು
೧೮೪ ೧೯೮೩ ಕವಿರತ್ನ ಕಾಳಿದಾಸ
೧೮೫ ೧೯೮೩ ಕಾಮನಬಿಲ್ಲು
೧೮೬ ೧೯೮೩ ಭಕ್ತ ಪ್ರಹ್ಲಾದ
೧೮೭ ೧೯೮೩ ಎರಡು ನಕ್ಷತ್ರಗಳು
೧೮೮ ೧೯೮೪ ಸಮಯದ ಗೊಂಬೆ
೧೮೯ ೧೯೮೪ ಶ್ರಾವಣ ಬಂತು
೧೯೦ ೧೯೮೪ ಯಾರಿವನು
೧೯೧ ೧೯೮೪ ಅಪೂರ್ವ ಸಂಗಮ
೧೯೨ ೧೯೮೫ ಅದೇ ಕಣ್ಣು
೧೯೩ ೧೯೮೫ ಜ್ವಾಲಾಮುಖಿ
೧೯೪ ೧೯೮೫ ಧ್ರುವತಾರೆ
೧೯೫ ೧೯೮೬ ಭಾಗ್ಯದ ಲಕ್ಷ್ಮಿ ಬಾರಮ್ಮ
೧೯೬ ೧೯೮೬ ಅನುರಾಗ ಅರಳಿತು
೧೯೭ ೧೯೮೬ ಗುರಿ
೧೯೮ ೧೯೮೭ ಒಂದು ಮುತ್ತಿನ ಕಥೆ
೧೯೯ ೧೯೮೭ ಶ್ರುತಿ ಸೇರಿದಾಗ
೨೦೦ ೧೯೮೮ ದೇವತಾ ಮನುಷ್ಯ
೨೦೨ ೧೯೮೯ ಪರಶುರಾಮ್
೨೦೩ ೧೯೯೨ ಜೀವನ ಚೈತ್ರ
೨೦೪ ೧೯೯೩ ಆಕಸ್ಮಿಕ
೨೦೫ ೧೯೯೪ ಒಡಹುಟ್ಟಿದವರು
೨೦೬ ೨೦೦೦ ಶಬ್ದವೇದಿ

[ಬದಲಾಯಿಸಿ] ಡಾ.ರಾಜ್ ಅತಿಥಿನಟನಾಗಿ ಕಾಣಿಸಿಕೊಂಡ ಚಿತ್ರಗಳು

[ಬದಲಾಯಿಸಿ] ಇತರೆ ವಿಕಿಮೀಡಿಯ ಯೋಜನೆಗಳಲ್ಲಿ ಡಾ.ರಾಜ್‌ಕುಮಾರ್

[ಬದಲಾಯಿಸಿ] ಹೊರಗಿನ ಸಂಪರ್ಕಗಳು


[ಬದಲಾಯಿಸಿ] ಕನ್ನಡ ಚಲನಚಿತ್ರ ನಾಯಕರು

ಸುಬ್ಬಯ್ಯ ನಾಯ್ಡು | ಉದಯಕುಮಾರ್ | ಕಲ್ಯಾಣಕುಮಾರ್ | ಡಾ. ರಾಜ್‌ಕುಮಾರ್ | ಗಂಗಾಧರ್ | ಡಾ. ವಿಷ್ಣುವರ್ಧನ್ | ರಾಜೇಶ್ | ಅಶೋಕ್ | ಅಂಬರೀಶ್ | ಶ್ರೀನಾಥ್ | ಪ್ರಭಾಕರ್ | ಅನಂತ ನಾಗ್ | ಶಂಕರ್ ನಾಗ್ | ಲೋಕೇಶ್ | ಮಾನು | ಕಾಶೀನಾಥ್ | ಮುರಳಿ(ಪ್ರೇಮಪರ್ವ) | ಚರಣ್ ರಾಜ್ | ವಿನೋದ್ ರಾಜ್ | ಶ್ರೀಧರ್ | ರಾಮಕೃಷ್ಣ | ಅರ್ಜುನ್ ಸರ್ಜಾ |ದೇವರಾಜ್ | ಸಾಯಿಕುಮಾರ್ | ರಾಮ್‍ಕುಮಾರ್ | ಥ್ರಿಲ್ಲರ್ ಮಂಜು | ಎಸ್.ನಾರಾಯಣ್ | ಜಗ್ಗೇಶ್ | ಉಪೇಂದ್ರ | ರವಿಚಂದ್ರನ್ | ಸುನಿಲ್ |ರಮೇಶ್ | ಸುದೀಪ್ | ಶಿವರಾಜ್‍ಕುಮಾರ್ | ಪುನೀತ್ ರಾಜ್‍ಕುಮಾರ್ | ರಾಘವೇಂದ್ರ ರಾಜ್ ಕುಮಾರ್ | ಮುರಳಿ | ವಿಜಯ ರಾಘವೇಂದ್ರ | ದರ್ಶನ್ ತೂಗುದೀಪ್ | ಸುನಿಲ್ ರಾವ್ | ಧ್ಯಾನ್| ಪ್ರೇಂ |ರಜನೀಕಾಂತ್

[ಬದಲಾಯಿಸಿ] ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು

ಜಿ.ಕೃಷ್ಣಸ್ವಾಮಿ ಅಯ್ಯಂಗಾರ್ | ಸುಬ್ಬಯ್ಯ ನಾಯ್ಡು | ಆರ್.ನಾಗೇಂದ್ರರಾಯ | ಹೊನ್ನಪ್ಪ ಭಾಗವತರ್ | ಪಿ. ಕಾಳಿಂಗರಾವ್ | ಚೆಂಬಯ್ ವೈದ್ಯನಾಥ ಭಾಗವತರ್ | ಪಿ.ಬಿ.ಶ್ರೀನಿವಾಸ್ | ಘಂಟಸಾಲ | ಜಿ.ಕೆ.ವೆಂಕಟೇಶ್ | ಡಾ. ರಾಜ್‌ಕುಮಾರ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಕೆ.ಜೆ.ಯೇಸುದಾಸ್ | ರಾಜೇಶ್ ಕೃಷ್ಣನ್ | ಶಿವರಾಜ್‍ಕುಮಾರ್ | ಉಪೇಂದ್ರ | ಹರಿಹರನ್ | ಹೇಮಂತ್ | ಶಂಕರ್ ಮಹಾದೇವನ್ | ಪ್ರೇಂ | ಚೇತನ್ ಸಾಸ್ಕ | ಅನೂಪ್ | ಫಯಾಜ್ ಖಾನ್ | ಕಾಶೀನಾಥ್ | ಪುನೀತ್ ರಾಜ್‍ಕುಮಾರ್ | ರಾಘವೇಂದ್ರ ರಾಜ್‍ಕುಮಾರ್ | ಭೀಮಸೇನ್ ಜೋಷಿ | ಬಾಲಮುರಳಿ ಕೃಷ್ಣ | ಜಗ್ಗೇಶ್ | ಗುರುಕಿರಣ್ | ರಾಮ್ ಪ್ರಸಾದ್ |

Static Wikipedia 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Sub-domains

CDRoms - Magnatune - Librivox - Liber Liber - Encyclopaedia Britannica - Project Gutenberg - Wikipedia 2008 - Wikipedia 2007 - Wikipedia 2006 -

Other Domains

https://www.classicistranieri.it - https://www.ebooksgratis.com - https://www.gutenbergaustralia.com - https://www.englishwikipedia.com - https://www.wikipediazim.com - https://www.wikisourcezim.com - https://www.projectgutenberg.net - https://www.projectgutenberg.es - https://www.radioascolto.com - https://www.debitoformtivo.it - https://www.wikipediaforschools.org - https://www.projectgutenbergzim.com