ಸಿ. ರಾಜಗೋಪಾಲಚಾರಿ
Wikipedia ಇಂದ
ಸಿ. ರಾಜಗೋಪಾಲಚಾರಿ (ಡಿಸೆಂಬರ ೧೮೭೮ - ಡಿಸೆಂಬರ ೨೫, ೧೯೭೨) ಅವರನ್ನು ಭಾರತದ ಜನತೆ ಪ್ರೀತಿಯಿಂದ ರಾಜಾಜಿ ಎಂದು ಕರೆದರು. ಸ್ವಾತಂತ್ರ ಚಳುವಳಿಯ ಪ್ರಮುಖರಲ್ಲಿ ಪ್ರಮುಖರಾದ ಇವರು ವೃತ್ತಿಯಿಂದ ವಕೀಲರಾಗಿದ್ದರು ಅಲ್ಲದೆ ಗಾಂಧೀಜಿಯವರ ಆಪ್ತಮಿತ್ರರಾಗಿದ್ದರು.
ಭಾರತದ ಎರಡನೆಯ ಗವರ್ನರ್ ಜನರಲ್ ಆಗಿ ಕಾರ್ಯನಿರ್ವಹಿಸಿದ ಇವರು ಸ್ಟೇಟ್ಸ್ ಮ್ಯಾನ್ ಮತ್ತು ಹಿಂದೂ - ದಿನಪತ್ರಿಕೆಗಳಿಗೆ ಲೇಖಕರಾಗಿದ್ದರು.
ಪರಿವಿಡಿ |
[ಬದಲಾಯಿಸಿ] ಕಾಂಗ್ರೆಸ್ಸಿನಲ್ಲಿ
ಜವಹರಲಾಲ್ ನೆಹರೂ, ಸರ್ದಾರ ವಲ್ಲಭಭಾಯ್ ಪಟೇಲ್, ರಾಜೇಂದ್ರ ಪ್ರಸಾದ್ ಹಾಗೂ ಮೌಲಾನಾ ಅಬುಲ್ ಕಲಮ್ ಆಜಾದ್ ರೊಂದಿಗೆ ಸ್ವಾತಂತ್ರ್ಯ ಪೂರ್ವ ಭಾರತದ ಕಾಂಗ್ರೆಸ್ಸಿನ ಅತ್ಯುಚ್ಚ ನಾಯಕಮಣಿಗಳ ಪಂಕ್ತಿಯಲ್ಲಿ ರಾಜಾಜಿಯವರ ಹೆಸರೂ ಕೇಳಿಬರುತ್ತಿತ್ತು. ಸೇಲಂ ನ ಈ ಪ್ರಚಂಡ ವಕೀಲರನ್ನು ಒಂದು ಕಾಲದಲ್ಲಿ ಮಹಾತ್ಮಾ ಗಾಂಧಿಯವರ ಉತ್ತರಾಧಿಕಾರಿ ಎಂದೂ ಪರಿಗಣಿಸಲಾಗುತ್ತಿತ್ತು. ರಾಜಾಜಿ ಮಹಾತ್ಮ ಗಾ೦ಧಿಯವರ ಬೀಗರೂ ಹೌದು - ರಾಜಾಜಿಯವರ ಮಗಳನ್ನು ಗಾಂಧಿಯವರ ಮಗನಿಗೆ ಕೊಟ್ಟಿತ್ತು. ಖ್ಯಾತ ಪತ್ರಕರ್ತ ರಾಜಮೋಹನ ಗಾಂಧಿ ಇವರಿಬ್ಬರ ಮೊಮ್ಮಗ. ಗಾಂಧಿಯವರ ಮರಣದವರೆಗೂ ಅವರ ನೆರಳಿನಲ್ಲೇ ಇದ್ದ ರಾಜಾಜಿ, ನೆಹರೂ ಮತ್ತು ಪಟೇಲರನ್ನು ಗಾಂಧಿಯವರ “ ತಲೆ, ಹೃದಯ ಮತ್ತು ಕೈಗಳು” ಎಂದೇ ಭಾವಿಸಲಾಗಿತ್ತು. ಇವರು ಮೂವರ ಪರಸ್ಪರ ಸಂಬಂಧ ಸಿಹಿ-ಕಹಿಯದಾಗಿದ್ದರೂ, ಗಾಂಧಿಯವ ವ್ಯಕ್ತಿತ್ವ ಹಾಗೂ ಎದುರಿಗಿದ್ದ ಒಂದೇ ಗುರಿ ಇವರನ್ನು ಒಟ್ಟುಗೂಡಿಸಿತ್ತು. ಆದರೂ ಇವರಿಗೆ ಪರಸ್ಪರ ಬಗ್ಯೆ ಅಪಾರ ಗೌರವವಿತ್ತು. ನೆಹರೂ ತಮ್ಮ ಆತ್ಮಕಥೆಯಲ್ಲಿ ರಾಜಾಜಿಯವರ “ ಪ್ರಖರ ಬುಧ್ಧಿಮತ್ತೆ, ನಿಸ್ಸ್ವಾರ್ಥ ಮನೋಭಾವ, ಹಾಗೂ ಅವರ ಪ್ರಚಂಡ ವಿಮರ್ಶಾ ಶಕ್ತಿ ಇವೆಲ್ಲವೂ ನಮ್ಮ ಗುರಿ ಸಾಧಿಸುವೆಡೆಯಲ್ಲಿ ದೊಡ್ಡ ಆಸ್ತಿಯಾಗಿತ್ತು” ಎಂದು ಬರೆಯುತ್ತಾರೆ.
1940ರ ದಶಕದಲ್ಲಿಯೇ ಭಾರತ ವಿಭಜಿತವಾಗುವ ಸಂಭವವನ್ನು ಮುಂಗಂಡ ಕಾಂಗ್ರೆಸ್ ನಾಯಕರುಗಳಲ್ಲಿ ರಾಜಾಜಿ ಒಬ್ಬರಾಗಿದ್ದರು. ಅಷ್ಟೇ ಅಲ್ಲ, ಹಾಗೆ ಅಸ್ತಿತ್ವಕ್ಕೆ ತರಲ್ಪಟ್ಟ ಪಾಕಿಸ್ತಾನವು ಇಪ್ಪತ್ತೈದು ವರ್ಷಗಳಲ್ಲಿಯೇ ಮತ್ತೊಮ್ಮೆ ಹೋಳಾಗುತ್ತದೆ ಎಂದೂ ಭವಿಷ್ಯ ನುಡಿದಿದ್ದರು ! ರಾಜಾಜಿ ತಮ್ಮ ರಾಜಕೀಯ ನೀತಿಗಳ ಉಗ್ರ ಸಮರ್ಥಕರಾಗಿದ್ದು, ಅವುಗಳ ಸಮರ್ಥನೆಯಲ್ಲಿ , ತಮ್ಮ ನಿಕಟವರ್ತಿಗಳೊಂದಿಗೂ ಸಾರ್ವಜನಿಕವಾಗಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಹಿಂಜರೆಯುತ್ತಿರಲಿಲ್ಲ.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷ್ ಸೆರೆವಾಸದ ರುಚಿ ಉಂಡ ರಾಜಾಜಿ ನಂತರ 1946ರಲ್ಲಿ ರಾಜ್ಯಪಾಲರ ಮಂಡಳಿಯ ಸದಸ್ಯರಾದರು. ಸ್ವಾತಂತ್ರ್ಯ ಪಡೆದ ನಂತರ, 1948ರಲ್ಲಿ ಮೌಂಟ್ ಬ್ಯಾಟನ್ನ ರ ಜಾಗದಲ್ಲಿ ಗವರ್ನರ್ ಜನರಲ್ ಎಂದು ನೇಮಕವಾಗಿ ( ಆ ಹುದ್ದೆಯನ್ನಲಂಕರಿಸಿದ ಏಕೈಕ ಭಾರತೀಯ) 1950, ಜನವರಿ 26ರಂದು ಭಾರತ ಗಣರಾಜ್ಯವಾಗುವವರೆಗೂ ಅದೇ ಹುದ್ದೆಯಲ್ಲಿ ಮುಂದುವರೆದರು. ಗವರ್ನರ್ ಜನರಲ್ ಹುದ್ದೆಯ ಜಾಗದಲ್ಲಿ ರಾಷ್ಟ್ರಪತಿಗಳ ಹಉದ್ದೆ ಬಂದು ರಾಜೇಂದ್ರ ಪ್ರಸಾದರು ಮೊದಲನೇ ರಾಷ್ಟ್ರಪತಿಗಳಾಗಿ ನೇಮಕವಾದರು.
ನೆಹರೂ ಮಂತ್ರಿಮಂಡಳದಲ್ಲಿ ಖಾತಾರಹಿತ ಮಂತ್ರಿಯಾಗಿ ನೇಮಕಗೊಂಡ ರಾಜಾಜಿ, ಪಟೇಲರ ನಿಧನದ ನಂತರ, ಗೃಹ ಮಂತ್ರಿಗಳಾದರು. 1952ರಿಂದ 1954ರವರೆಗೆ ಅವರು ಆಗಿನ ಮದ್ರಾಸ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಸರ್ಕಾರಿ ಪದವಿಗಳಿಂದ ಹೊರಬಂದ ಅವರು , ಭಾರತದ ಅತ್ಯುಚ್ಚ ಗೌರವ “ಭಾರತ ರತ್ನ” ವನ್ನು ಪಡೆದ ಮೊದಲ ಕೆಲವರಲ್ಲಿ ಒಬ್ಬರಾದರು.
[ಬದಲಾಯಿಸಿ] ಸ್ವತಂತ್ರ ಪಕ್ಷ ಸ್ಥಾಪನೆ
ಕಾಂಗ್ರೆಸ್ ಸಕ್ರಿಯ ರಾಜಕೀಯದಿಂದ ನಿವೃತ್ತರಾದ ಮೇಲೆ, ರಾಜಾಜಿ, ನೆಹರೂ ಹಾಗೂ ಕಾಂಗ್ರೆಸ್ಸಿನ ಕಟು ಟೀಕಾಕಾರರಾದರು. 1950ರ ದಶಕದಲ್ಲಿ ಸ್ವತಂತ್ರ ಪಕ್ಷ ಸ್ಥಾಪಕರಲ್ಲಿ ಒಬ್ಬರಾದ ಅವರು, ನೆಹರೂರ ಸಮಾಜವಾದೀ ಧೋರಣೆಯು ಜನಪ್ರಯವಾಗಿದ್ದರೂ, ಲೈಸೆನ್ಸ್ ಪರ್ಮಿಟ್ ರಾಜ್ಯವನ್ನೂ ಹಾಗೂ ಅದರಿಂದ ಉಂಟಾಗುವ ಭ್ರಷ್ಟಾಚಾರ ಹಾಗೂ ದೇಶದ ಪ್ರಗತಿಯ ಧಕ್ಕೆಯನ್ನೂ ವಿರೋಧಿಸಿದರು. ತಮ್ಮ ಪತ್ರಿಕೆ ಸ್ವರಾಜ್ಯದಲ್ಲಿ ಅವರು ಹೀಗೆ ಬರೆಯುತ್ತಾರೆ: " ಕೈಗಾರಿಕಾ ರಂಗದಲ್ಲಿ ಪೈಪೋಟಿಯನ್ನು ಪ್ರೋತ್ಸಾಹಿಸುವುದೂ, ಹೆಚ್ಚಿನ ಉತ್ಪತ್ತಿಗೆ ಕುಮ್ಮಕ್ಕು ಕೊಡುವುದೂ ಸರ್ಕಾರಿ ಹಾಗೂ ಖಾಸಗೀ ಹಿತಾಸಕ್ತಿ ಗಳೆರಡಕ್ಕೂ ಒಳ್ಳೆಯದು. ಸರ್ಕಾರಿ ಅಧಿಕಾರಿಗಳಿಗೂ, ಮಂತ್ರಿಗಳಿಗೂ ಪರವಾನಗಿಗಳಿಗಾಗಿ ಡೊಗ್ಗು ಸಲಾಮು ಹೊಡೆಯುವ ಅಗತ್ಯವಿರದ, ಪ್ರತಿಭೆ ಹಾಗೂ ಪರಿಶ್ರಮದಿಂದ ಕೆಲಸ ಮಾಡುವ, ಹಾಗೂ ಈ ಪ್ರಯತ್ನಗಳ ಫಲಾಫಲಗಳ ನಿಷ್ಕರ್ಷೆ ಭಾರತ ಹಾಗೂ ಭಾರತದ ಹೊರಗಿನ ಮುಕ್ತ ಮಾರುಕಟ್ಟೆಯಲ್ಲಿ ಆಗುವಂಥಾ ವಾತಾವರಣದ ಭಾರತ ನನಗೆ ಬೇಕಾಗಿದೆ.... ಸರಕಾರಿ ಕಾರುಭಾರಿನ ಅದಕ್ಷತೆಗಳು ಹೋಗಿ ಖಾಸಗೀ ಒಡೆತನದ ಪೈಪೋಟಿಯ ಆರ್ಥಿಕ ಪಧ್ಧತಿ ನನಗೆ ಬೇಕು. ... ಭ್ರಷ್ಟ ಲೈಸೆನ್ಸ್ ಪರ್ಮಿಟ್ ರಾಜ್ಯ ನಿರ್ಮೂಲವಾಗಬೇಕು.... ಸರಕಾರೀ ಕಾನೂನುಗಳು, ನೀತಿಗಳನ್ನು ಜಾರಿಗೆ ತರುವ ಹೊಣೆಹೊತ್ತ ಅಧಿಕಾರಿಗಳು ಆಡಳಿತ ಪಕ್ಷದ ನಾಯಕರ ಒತ್ತಡಗಳಿಂದ ಹೊರಬಂದು, ತಮ್ಮ ಮೊದಲಿನ ನಿರ್ಭೀತ ನಡವಳಿಕೆಗಳಿಗೆ ಮರಳಬೇಕಾಗಿದೆ.... ಎಲ್ಲಾ ನಾಗರೀಕರಿಗೂ ಸಮಾನ ಅವಕಾಶಗಳು ಸಿಗಬೇಕಾಗಿದೆ. ಲೈಸೆನ್ಸ್ ಪರ್ಮಿಟ್ ರಾಜ್ಯ ಖಾಸಗೀ ಏಕಸ್ವಾಮ್ಯಗಳನ್ನು ಸೃಷ್ಟಿಸಕೂಡದು.... ದೊಡ್ಡ ಕೈಗಾರಿಕೆಗಳ ಹಣಸಂಪತ್ತು ರಾಜಕೀಯಕ್ಕೆ ಪ್ರವೇಶ ಮಾಡಕೂಡದು.... ಭಾರತದಲ್ಲಿ ಜನರ ನಡವಳಿಕೆಗಳು ಧರ್ಮದಿಂದ ಪ್ರಭಾವಿತವಾಗಬೇಕೇ ವಿನಹ ದುರಾಸೆಯಿಂದ ಅಲ್ಲ”
ರಾಜಾಜಿ ಈ ಮಾತನ್ನು ಹೇಳಿದ ಅನೇಕ ದಶಕಗಳ ನಂತರ, 1950ರ ದಶಕದಲ್ಲಿ ಹಾಕಲಾಗಿದ್ದ ಆಡಳಿತಾತ್ಮಕ ಕಟ್ಟುಪಾಡುಗಳನ್ನು ಹಂತಹಂತವಾಗಿ ಸಡಿಲಗೊಳಿಸಲಾಗುತ್ತಿದೆ. ಭಾರತದ ಆರ್ಥಿಕ ಪರಿಸ್ಥಿತಿಯು ದಾಪುಗಾಲಿನಿಂದ ಸುಧಾರಣೆಯಾಗುತ್ತಿದ್ದು, ಬೆಳವಣಿಗೆಯ ಗತಿ ಪ್ರಪಂಚದಲ್ಲಿಯೇ ಅತಿ ಹೆಚ್ಚಿನ ಗತಿಗಳಲ್ಲೊಂದಾಗಿದೆ. ಈ ಎಲ್ಲ ವಿದ್ಯಮಾನಗಳ ದೆಸೆಯಿಂದ , ಅನೇಕರು ರಾಜಾಜಿ ಮತ್ತು ಸ್ವತಂತ್ರ ಪಕ್ಷದ ಆಗಿನ ನಿಲುವುಗಳನ್ನು ಪುನಃ ಪರಿಶೀಲನೆ ಮಾಡುತ್ತಿದ್ದಾರೆ.
[ಬದಲಾಯಿಸಿ] ಧರ್ಮ, ಸಾಹಿತ್ಯ ಮತ್ತು ಕಾವ್ಯ
ರಾಜಾಜಿ ತನ್ನ ಸ್ವಂತ ಲೇಖನಗಳೊಂದಿಗೇ , ಅನೇಕ ಮುಖ್ಯ ಭಾರತೀಯ ಹಾಗೂ ಹಿಂದೂ ಧಾರ್ಮಿಕ ಕೃತಿಗಳ ಆಂಗ್ಲ ಭಾಷೆಯ ಭಾಷಾಂತರವನ್ನೂ ಮಾಡಿದ್ದಾರೆ. ರಾಮಾಯಣ, ಮಹಾಭಾರತ, ಭಗವದ್ಗೀತೆ, ಉಪನಿಷತ್ತುಗಳು ಹಾಗೂ ಶಂಕರಾಚಾರ್ಯರ ಭಜ ಗೋವಿಂದಂ ಇವುಗಳ ಭಾಷಾಂತರಗಳು ಇಂದಿಗೂ ಬಳಕೆಯಲ್ಲಿವೆ. ಅವರು ರಾಮಾಯಣವನ್ನು ತಮಿಳಿಗೂ ತರ್ಜುಮೆ ಮಾಡಿದರು. ಕರ್ನಾಟಕ ಸಂಗೀತದ ದೊಡ್ಡ ಪ್ರತಿಭೆ, ಎಮ್ ಎಸ್ ಸುಬ್ಬುಲಕ್ಷ್ಮಿ ರಾಜಾಜಿ ರವರ ಕೆಲವು ಕವಿತೆಗಳನ್ನು ಸಂಗೀತಕ್ಕೆ ಅಳವಡಿಸಿ ಅನೇಕ ಮುಖ್ಯ ಕಾರ್ಯಕ್ರಮಗಳಲ್ಲಿ, ಅವುಗಳಲ್ಲಿ ಒಂದು ಸಂಯುಕ್ತ ರಾಷ್ಡ್ರ ಸಂಘದಲ್ಲಿ , ಹಾಡಿದ್ದಾರೆ. ಕುರೈ ಒನ್ರುಮ್ ಇಲ್ಲೈ (ಭಗವಂತಾ, ನನಗಿನ್ನೇನೂ ಅಪೇಕ್ಷೆ ಉಳಿದಿಲ್ಲ....) ಎಂಬ ಅರೆ-ಶಾಸ್ತ್ರೀಯ ಮಟ್ಟಿನಲ್ಲಿ ರಾಜಾಜಿ ಬರೆದ ಹಾಡು ಬಹಳ ಜನಪ್ರಿಯವಾಗಿದೆ. ಇದರ ಒಂದು ಹೃದಯಸ್ಪರ್ಶಿ ಆವೃತ್ತಿಯನ್ನು ಎಮ್ ಎಸ್ ಸುಬ್ಬುಲಕ್ಷ್ಮಿ ಹಾಡಿದ್ದಾರೆ. ರಾಜಾಜಿ ಬರೆದ "Here under this Uniting Roof" ಸ್ತುತಿಯನ್ನು 1966ರಲ್ಲಿ ಎಮ್ ಎಸ್ ಸುಬ್ಬುಲಕ್ಷ್ಮಿಸಂಯುಕ್ತ ರಾಷ್ಡ್ರ ಸಂಘದಲ್ಲಿ ಹಾಡಿದ್ದರು.
ರಾಜಾಜಿಯವರನ್ನು ಬಹಳಷ್ಟು ಜನ ಧಾರ್ಮಿಕ ಹಾಗೂ ಆಧ್ಯಾತ್ಮಿಕ ರಂಗಗಳಲ್ಲಿ ಆಳವಾದ, ಸ್ವಂತಿಕೆಯ ಚಿಂತಕರೆಂದು ಪರಿಗಣಿಸುತ್ತಾರೆ. ರಾಜಾಜಿಯವರ ವಿದ್ಯಾರ್ಥಿ ಜೀವನದಲ್ಲಿ ನಡೆಯಿತೆನ್ನಲಾದ ಒಂದು ಘಟನೆ ಜನಪ್ರಿಯವಾಗಿದೆ. ಒಮ್ಮೆ ಸ್ವಾಮಿ ವಿವೇಕಾನಂದರು ಅವರ ವಿದ್ಯಾರ್ಥಿ ನಿಲಯಕ್ಕೆ ಬಂದಿದ್ದರಂತೆ. ಅಲ್ಲಿ ಗೋಡೆಯ ಮೇಲಿನ ವಿಷ್ಣುವಿನ ಚಿತ್ರ ನೋಡಿ , ವಿದ್ಯಾರ್ಥಿಗಳಿಗೆ ವಿಷ್ಣುವಿನ ಎಲ್ಲಾ ಚಿತ್ರಗಳಲ್ಲೂ ಮೈ ಬಣ್ಣ ನೀಲಿ ಯಾಕಿರುತ್ತದೆ ಎಂದು ಕೇಳಿದರಂತೆ. ವಿಷ್ಣು ನೀಲಿ ಆಕಾಶದಂತೆ, ನೀಲ ಸಮುದ್ರದಂತೆ ಅನಂತ. ಆದ್ದರಿಂದಲೇ ಅವನ ಮೈ ಬಣ್ಣ ನೀಲಿ ಎಂದು ರಾಜಾಜಿ ಉತ್ತರ ಕೊಟ್ಟರಂತೆ. ವಿವೇಕಾನಂದರು ಈ ಉತ್ತರ ಕೇಳಿ ಬಹಳ ಸಂತೋಷ ಪಟ್ಟರಂತೆ. ಸುಮಾರು ಎಂಟು ದಶಕಗಳನ್ನು ಸಾರ್ವಜನಿಕ ಜೀವನದಲ್ಲಿ ಸವೆಸಿದ ರಾಜಾಜಿಯವರ ಕೊಡುಗೆಯನ್ನು ಅರಿಯಲು ಗಾಂಧೀಜಿ ಅವರನ್ನು “ನನ್ನ ಅಂತಃ ಪ್ರಜ್ಞೆಯ ರಕ್ಷಕ " ಎಂದು ಬಣ್ಣಿಸಿದ ರೀತಿ ಸಾಕು.
ತೊಂಭತ್ತು ದಾಟಿದ್ದ ರಾಜಾಜಿ , ಲಘು ಅಸ್ವಸ್ಥತೆಯ ನಂತರ, ಡಿಸೆಂಬರ್ 25, 1972ರಂದು ತೀರಿಕೊಂಡರು.
ಸ್ವಾತಂತ್ರ್ಯ ಹೋರಾಟಗಾರರು
ವಿನಾಯಕ ದಾಮೋದರ ಸಾವರ್ಕರ್ | ಜವಾಹರಲಾಲ್ ನೆಹರು | ಮಹಾತ್ಮ ಗಾಂಧಿ | ಸರ್ದಾರ್ ವಲ್ಲಭಭಾಯ್ ಪಟೇಲ್ | ಲೋಕಮಾನ್ಯ ಬಾಲ ಗಂಗಾಧರ ತಿಲಕ | ಸುಭಾಷ್ ಚಂದ್ರ ಬೋಸ್ | ಟಿಪ್ಪು ಸುಲ್ತಾನ್ | ಲಾಲ್ ಬಹಾದ್ದೂರ್ ಶಾಸ್ತ್ರಿ | ಮದನ ಮೋಹನ ಮಾಳವೀಯ | ಸರ್ದಾರ್ ಭಗತ್ ಸಿಂಗ್ | ಸಿ. ರಾಜಗೋಪಾಲಚಾರಿ | ಭಿಕಾಜಿ ಕಾಮಾ (ಮೇಡಂ ಕಾಮಾ) | ಚಂದ್ರ ಶೇಖರ್ ಆಝಾದ್ | ರಾಮ್ ಪ್ರಸಾದ್ ಬಿಸ್ಮಿಲ್ | ಸುಬ್ರಹ್ಮಣ್ಯ ಭಾರತಿ | ಖುದೀರಾಂ ಬೋಸ್ | ತಾತ್ಯ ಟೊಪೆ | ಅಶ್ಫಾಕುಲ್ಲಾ ಖಾನ್ | ಝಾನ್ಸೀ ರಾಣಿ ಲಕ್ಷ್ಮೀ ಬಾಯೀ | ಸರೋಜಿನಿ ನಾಯ್ಡು | ಜಯಪ್ರಕಾಶ ನಾರಾಯಣ | ಸುಖದೇವ | ದೇಶಬಂಧು ಚಿತ್ತರಂಜನ ದಾಸ್ | ಲಾಲಾ ಲಜಪತ ರಾಯ್ | ಮಹದೇವ ಭಾಯಿ ದೇಸಾಯಿ | ಸುಖದೇವ | ಮಂಗಳ ಪಾಂಡೆ | ಮೌಲನಾ ಹಸರತ್ ಮೊಹಾನಿ | ಪಂಡಿತ ಮೋತಿಲಾಲ ನೆಹರೂ | ರವೀಂದ್ರ ನಾಥ ಟ್ಯಾಗೋರ್ | ಸುಂದರ ಲಾಲ್ ಅವಸ್ಥಿ | ದಾದಾ ಭಾಯಿ ನವರೋಜಿ | ಬಿಪಿನ್ ಚಂದ್ರ ಪಾಲ್ | ಈಶ್ವರ ಚಂದ್ರ ವಿದ್ಯಾಸಾಗರ | ವಿನೋಬಾ ಭಾವೆ | ಅಲ್ಲೂರಿ ಸೀತಾರಾಮ ರಾಜು | ಬಿ.ಆರ್.ಅಂಬೇಡ್ಕರ್ | ಸೇನಾಪತಿ ಬಾಪಟ್ | ನಾನಾ ಸಾಹಿಬ್ | ಕಸ್ತೂರ್ ಬಾ ಗಾಂಧಿ | ಗೋಪಾಲ ಕೃಷ್ಣ ಗೋಖಲೆ | ಕೆ.ಬಿ. ಹೆಡಗೆವಾರ್ | ಇಂಡಿಯನ್ ನ್ಯಾಷನಲ್ ಆರ್ಮಿ | ಬಾಬು ಜಗಜೀವನ ರಾಮ್ | ಲಕ್ಷ್ಮಿ ಸೆಹಗಲ್ | ಹೆಚ್. ನರಸಿಂಹಯ್ಯ | ಗೋವಿಂದ ವಲ್ಲಭ ಪಂತ್ | ಪೆರಿಯಾರ್ ರಾಮಸ್ವಾಮಿ | ಹಜರತ್ ಮಹಲ್ | ಹಿಂದೂಸ್ತಾನಿ ಲಾಲ್ ಸೇನಾ | ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ | ನೀಲಕಂಠ ಗೌಡ | ಪ್ರಭುರಾಜ ಪಾಟೀಲ | ಸ್ವಾಮಿ ರಾಮಾನಂದ ತೀರ್ಥ| ಕಿತ್ತೂರು ಚೆನ್ನಮ್ಮ | ಸಂಗೊಳ್ಳಿ ರಾಯಣ್ಣ