ರಾಮಕೃಷ್ಣ ಪರಮಹಂಸ
From Wikipedia
ಶ್ರೀ ರಾಮಕೃಷ್ಣ ಪರಮಹಂಸ (ಫೆಬ್ರವರಿ ೧೮, ೧೮೩೬ - ಆಗಸ್ಟ್ ೧೬, ೧೮೮೬) ಭಾರತದ ಪ್ರಸಿದ್ಧ ಧಾರ್ಮಿಕ ನೇತೃಗಳಲ್ಲಿ ಒಬ್ಬರು. ಕಾಳಿಯ ಆರಾಧಕರಾಗಿದ್ದ ಪರಮಹಂಸರು ಅದ್ವೈತ ವೇದಾಂತ ಸಿದ್ಧಾಂತವನ್ನು ಬೋಧಿಸಿದರಲ್ಲದೆ, ಎಲ್ಲ ಧರ್ಮಗಳೂ ಒಂದೇ ಗುರಿಯತ್ತ ನಮ್ಮನ್ನು ಒಯ್ಯುತ್ತವೆ ಎಂದು ನಂಬಿದ್ದರು. ೧೯ ನೆಯ ಶತಮಾನದ ಹಿಂದೂ ಧರ್ಮದ ಪುನರುಜ್ಜೀವನಕ್ಕೆ ದಾರಿ ಮಾಡಿಕೊಟ್ಟ ವ್ಯಕ್ತಿಗಳಲ್ಲಿ ಪರಮಹಂಸರೂ ಒಬ್ಬರು.
ಪರಮಹಂಸರ ಜೀವನ ಮತ್ತು ಬೋಧನೆಗಳು ಭಾರತೀಯ ಸಂಸ್ಕೃತಿ ಮತ್ತು ನಂಬಿಕೆಗಳ ಮೇಲೆ ಆಳವಾದ ಪ್ರಭಾವವನ್ನು ಬೀರಿವೆ. ಸ್ವಾಮಿ ವಿವೇಕಾನಂದರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಇವರ ಗೌರವಾರ್ಥವಾಗಿಯೇ ಇರುವುದು.
ಪರಮಹಂಸರು ಅನುಭವಿಸಿದರೆಂದು ಹೇಳಲಾದ ನಿರ್ವಿಕಲ್ಪ ಸಮಾಧಿಯಿಂದ ಅವರು "ಅವಿದ್ಯಾಮಾಯೆ" ಮತ್ತು "ವಿದ್ಯಾಮಾಯೆ" ಎಂಬ ಎರಡು ಬಗೆಯ ಮಾಯೆಗಳನ್ನು ಅರಿತುಕೊಂಡರೆಂದು ಹೇಳಲಾಗುತ್ತದೆ. "ಅವಿದ್ಯಾಮಾಯೆ" ಎಂಬುದು ಸೃಷ್ಟಿಯ ಕಾಳ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಕ್ರೌರ್ಯ, ಲೋಭ, ಇತ್ಯಾದಿ). ವಿದ್ಯಾಮಾಯೆ ಎನ್ನುವುದು ಸೃಷ್ಟಿಯ ಉಚ್ಚತರ ಶಕ್ತಿಗಳನ್ನು ಪ್ರತಿನಿಧಿಸುತ್ತದೆ (ಪ್ರೇಮ, ಅಧ್ಯಾತ್ಮಿಕ ದೃಷ್ಟಿ, ಇತ್ಯಾದಿ). ಪರಮಹಂಸರ ದೃಷ್ಟಿಯಲ್ಲಿ ಭಕ್ತರು ವಿದ್ಯಾಮಾಯೆಯಿಂದ ಅವಿದ್ಯಾಮಾಯೆಯನ್ನು ಗೆದ್ದು ನಂತರ ಸಂಪೂರ್ಣವಾಗಿ ಮಾಯಾತೀತರಾಗುವತ್ತ ಹೆಜ್ಜೆ ಹಾಕಬಹುದು.
ನಿರ್ವಿಕಲ್ಪ ಸಮಾಧಿಯಿಂದ ಹುಟ್ಟಿದ ರಾಮಕೃಷ್ಣರ ಇನ್ನೊಂದು ನಂಬಿಕೆಯೆಂದರೆ ಜನರು ನಂಬುವ ಎಲ್ಲ ದೇವರುಗಳೂ ಒಬ್ಬ ಸರ್ವಾಂತರ್ಯಾಮಿಯಾದ ದೇವನನ್ನು ನೋಡುವ ವಿವಿಧ ಬಗೆಗಳಷ್ಟೆ. ಋಗ್ವೇದದ ವಾಕ್ಯವಾದ "ಏಕಮ್ ಸದ್ವಿಪ್ರಾಃ ಬಹುಧಾ ವದಂತಿ" (ಒಂದೇ ಸದ್ವಸ್ತುವನ್ನು ಜನರು ವಿವಿಧ ಹೆಸರುಗಳಿಂದ ಕರೆಯುತ್ತಾರೆ) ಎಂಬ ವಿಚಾರವೇ ಇದು. ಹಾಗಾಗಿ ರಾಮಕೃಷ್ಣರ ದೃಷ್ಟಿಯಲ್ಲಿ ಎಲ್ಲ ಧರ್ಮಗಳೂ ಒಂದೇ - ತಮ್ಮ ಜೀವನದ ಕೆಲ ವರ್ಷಗಳ ಕಾಲ ಇತರ ಧರ್ಮಗಳನ್ನೂ ಅಭ್ಯಾಸ ಮಾಡಿದರು (ಮುಖ್ಯವಾಗಿ ಇಸ್ಲಾಮ್ ಧರ್ಮ, ಕ್ರೈಸ್ತ ಧರ್ಮ, ಹಾಗೂ ವಿವಿಧ ಯೋಗ ಮತ್ತು ತಂತ್ರ ಮಾರ್ಗಗಳು).
ರಾಮಕೃಷ್ಣರ ನಾಲ್ಕು ಮುಖ್ಯ ತತ್ವಗಳೆಂದರೆ:
- ಎಲ್ಲ ಅಸ್ತಿತ್ವದ ಏಕತೆ
- ಮಾನವರಲ್ಲಿಯೂ ಇರುವ ದೈವತ್ವ
- ದೇವರ ಏಕತೆ
- ಎಲ್ಲ ಧರ್ಮಗಳ ಸಾಮರಸ್ಯ
ರಾಮಕೃಷ್ಣರ ಜೀವನ ಮತ್ತು ಬೋಧನೆಗಳನ್ನು ಅವರ ಶಿಷ್ಯರಲ್ಲಿ ಒಬ್ಬರಾದ ಮಹೇಂದ್ರನಾಥ್ ಗುಪ್ತಾ ರವರು ದಾಖಲಿಸಿದರು.
[ಬದಲಾಯಿಸಿ] ಇವನ್ನೂ ನೋಡಿ
[ಬದಲಾಯಿಸಿ] ಬಾಹ್ಯ ಸಂಪರ್ಕಗಳು
- ಶ್ರೀರಾಮಕೃಷ್ಣ ಮಠ, ಹಲಸೂರು - ಬೆಂಗಳೂರು
- ಶ್ರೀರಾಮಕೃಷ್ಣ ವಿದ್ಯಾಶಾಲೆ, ಮೈಸೂರು
- ವೇದಾಂತ ಕಾಲೇಜು, ಮೈಸೂರು
- ಶ್ರೀರಾಮಕೃಷ್ಣ
- ರಾಮಕೃಷ್ಣ ಮಿಷನ್
[ಬದಲಾಯಿಸಿ] ಪುಸ್ತಕಗಳು
- ಶ್ರೀರಾಮಕೃಷ್ಣ ವಚನವೇದ - ಮೂಲ: ಮಹೇಂದ್ರನಾಥ ಗುಪ್ತ (ಕಥಾಮೃತ)
- ಶ್ರೀರಾಮಕೃಷ್ಣ ಲೀಲಾಪ್ರಸಂಗ - ಸ್ವಾಮಿ ಶಾರದಾನಂದ
- ಯುಗಾವತಾರ ಶ್ರೀರಾಮಕೃಷ್ಣ (೧-೪) - ಸ್ವಾಮಿ ಪುರುಷೋತ್ತಮಾನಂದ
- ಗುರುದೇವ ಶ್ರೀರಾಮಕೃಷ್ಣ - ಕುವೆಂಪು
- ಶ್ರೀರಾಮಕೃಷ್ಣ ಪರಮಹಂಸರು - ಸ್ವಾಮಿ ಸೋಮನಾಥಾನಂದ