ಮುಂಬೈ
From Wikipedia
ಮುಂಬೈ |
|
ವರ್ಗೀಕರಣ | ಮೆಟ್ರೊಪಾಲಿಟನ್ ನಗರ |
ದೇಶ | ಭಾರತ |
ರಾಜ್ಯ | ಮಹಾರಾಷ್ಟ್ರ |
ಅಕ್ಷಾಂಶ ರೇಖಾಂಶ |
೧೮.೯೬° ಉತ್ತರ ೭೨.೮೨° ಪೂರ್ವ |
ಜನಸಂಖ್ಯೆ(೨೦೦೪) ಜನಸಂಖ್ಯಾ ಸಾಂದ್ರತೆ |
೧,೨೬,೨೨,೫೦೦ ೨೮,೮೩೪/ಚ. ಕಿಮೀ |
ವಿಸ್ತೀರ್ಣ | ೪೩೭.೭೭ ಚ. ಕಿಮೀ |
ತೀರ ಪ್ರದೇಶ | ೧೪೦ ಕಿಮೀ |
ಸಮುದ್ರ ಮಟ್ಟದಿಂದ ಎತ್ತರ | ಸರಾಸರಿ ೮ ಮೀ |
ಮುಂಬಯಿ ನಗರ ಮಹಾರಾಷ್ಟ್ರದ ರಾಜಧಾನಿ. ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನ (2006ರ ಅಂದಾಜು) ವಾಸಿಸುವ ಇದು ಭಾರತದಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯಿರುವ ನಗರವಾಗಿದೆ. ಮುಂಬಯಿಯ ಉಪನಗರಗಳೂ ಸೇರಿದರೆ , ಒಟ್ಟು ಜನಸಂಖ್ಯೆ ಎರಡು ಕೋಟಿ ಮೀರಿ, ಪ್ರಪಂಚದಲ್ಲಿಯೇ ಐದನೆಯ ಅತಿ ದೊಡ್ಡ ನಗರವೆನಿಸುತ್ತದೆ. ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಮುಂಬಯಿ, ಸ್ವಾಭಾವಿಕ ಬಂದರೂ ಆಗಿದ್ದು , ಭಾರತದ ಸಮುದ್ರಮಾರ್ಗದ ಐವತ್ತು ಶೇಕಡಾ ಪ್ರವಾಸಿಗಳು ಹಾಗೂ ಸರಕು ಇಲ್ಲಿಂದಲೇ ಸಾಗಿಸಲ್ಪಡುತ್ತದೆ.
ಮುಂಬಯಿಯನ್ನು ಭಾರತದ ಆರ್ಥಿಕ ಹಾಗೂ ಮನರಂಜನಾಲೋಕದ ರಾಜಧಾನಿ ಎಂದೂ ಪರಿಗಣಿಸಲಾಗಿದೆ. ಸಂಜಯಗಾಂಧಿ ರಾಷ್ಟ್ರೀಯ ಉದ್ಯಾನವನ ನಗರದ ಸರಹದ್ದಿನಲ್ಲಿಯೇ ಇರುವುದು ಬಹುತೇಕ ಮತ್ತಾವುದೇ ನಗರಗಳಲ್ಲಿ ಕಂಡುಬರದ ವೈಶಿಷ್ಟ್ಯ.
ಪರಿವಿಡಿ |
[ಬದಲಾಯಿಸಿ] ಹೆಸರಿನ ಮೂಲ
ಮುಂಬಯಿ ಹೆಸರಿನ ಮೂಲ ಮುಂಬಾದೇವಿ ಎಂಬ ದೇವಿಯ ಹೆಸರು. ಮುಂಬಾದೇವಿ ದೇವಾಲಯ ಇಂದಿಗೂ ಮುಂಬಯಿಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ಪೋರ್ಚುಗೀಸರು ಈ ಪ್ರದೇಶವನ್ನು ಬೋಮ್ ಬಹಿಯಾ ಎಂದೂ, ಬ್ರಿಟಿಷರು ಬಾಂಬೆ ಎಂದೂ ನಾಮಕರಣ ಮಾಡಿದ್ದರು. ಬಾಂಬೆ ಎಂದೇ ಪ್ರತೀತಿಯಲ್ಲಿದ್ದ ಈ ನಗರವನ್ನು ವಿಧ್ಯುಕ್ತವಾಗಿ ಮುಂಬಯಿ ಎಂದು 1995ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಕನ್ನಡದಲ್ಲಿ ಮುಂಬಯಿ ,ಬೊಂಬಾಯಿ ಹಾಗೂ ಬಾಂಬೆ ಎಂದು ಕರೆಯುವುದು ರೂಢಿಯಲ್ಲಿದೆ.
[ಬದಲಾಯಿಸಿ] ಇತಿಹಾಸ
ಇಂದಿನ ಮುಂಬಯಿ ಹಿಂದೆ ಏಳು ದ್ವೀಪಗಳ ಸಮೂಹವಾಗಿತ್ತು. ಶಿಲಾಯುಗದ ಕಾಲದಿಂದಲೂ ಈ ದ್ವೀಪಗಳಲ್ಲಿ ಜನವಸತಿಯಿದ್ದ ಪುರಾವೆಗಳಿವೆ. ಇವುಗಳಲ್ಲಿ ಅತ್ಯಂತ ಪುರಾತನ ದಾಖಲೆ ಕ್ರಿ.ಪೂ. 250ರಷ್ಟು ಹಿಂದಿನದಾಗಿದ್ದು, ಗ್ರೀಕ್ ಮೂಲದ ಈ ದಾಖಲೆಯಲ್ಲಿ ಮುಂಬಯಿಯನ್ನು Heptanesia (ಅರ್ಥಾತ್ ಸಪ್ತದ್ವೀಪಸಮೂಹ)ಎಂಬ ಹೆಸರಿನಿಂದ ಉಲ್ಲೇಖಿಸಲಾಗಿದೆ. ಕ್ರಿ.ಪೂ 3ರಲ್ಲಿ ಈ ದ್ವೀಪಗಳು ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ಭಾಗವಾಗಿದ್ದವು. . ಈ ಪ್ರದೇಶವು ಮುಂದೆ ಕ್ರಿ.ಶ. 1343ರವರೆಗೂ ಶಿಲಾಹಾರರ ಸಾಮ್ರಾಜ್ಯದ ಅಂಗವಾಗಿ, ತದನಂತರ ಗುಜರಾತ್ ಸಾಮ್ರಾಜ್ಯದ ಅಧೀನವಾಯಿತು. ಎಲಿಫೆಂಟಾ ಗುಹೆಗಳು ಹಾಗೂ ವಾಳಕೇಶ್ವರ ದೇವಾಲಯಗಳು ಇದೇ ಕಾಲದಲ್ಲಿ ನಿರ್ಮಿಸಲ್ಪಟ್ಟವು. 1534ರಲ್ಲಿ ಬಹಾದ್ದೂರ ಷಾನಿಂದ ಮುಂಬಯಿಯನ್ನು ಪೋರ್ಚುಗೀಸರು ವಶಪಡಿಸಿಕೊಂಡು, ಅದಕ್ಕೆ ಮಾಮ್ ಬಹಿಯಾ ಎಂದು ಹೆಸರಿಟ್ಟರು. 1661ರ ಇಂಗ್ಲೆಂಡಿನ ರಾಜ ಎರಡನೆಯ ಚಾರ್ಲ್ಸ್ ಹಾಗೂ ಪೋರ್ಚುಗೀಸ್ ರಾಜಕನ್ಯೆ ಕ್ಯಾಥರೀನ್ ದ ಬ್ರಗಾಂಝ ಇವರ ವಿವಾಹದ ಸಂದರ್ಭದಲ್ಲಿ , ಮುಂಬಯಿ ಪ್ರದೇಶವನ್ನು ಪೋರ್ಚುಗೀಸರಿಂದ ಬಳುವಳಿಯಾಗಿ ಪಡೆದ ಬ್ರಿಟಿಷ್ ರಾಜಮನೆತನವು, ಮುಂದೆ ಈಸ್ಟ್ ಇಂಡಿಯಾ ಕಂಪನಿಗೆ ಬಾಡಿಗೆಯ ಮೇಲೆ ಮುಂಬಯಿಯನ್ನು ನೀಡಿತು. ತಮ್ಮ ವ್ಯಾಪಾರಕ್ಕಾಗಿ ಬಂದರು ನಿರ್ಮಿಸಲು ಮುಂಬಯಿ ಭೂ ಖಂಡವು ಪ್ರಶಸ್ತವಾದದ್ದು ಎಂದು ಈಸ್ಟ್ ಇಂಡಿಯಾ ಕಂಪನಿ ಭಾವಿಸಿತು. 1661ರಲ್ಲಿ 10,000ದಷ್ಟಿದ್ದ ಮುಂಬಯಿಯ ಜನಸಂಖ್ಯೆ 1687ರಲ್ಲಿ 60,000ಕ್ಕೇರಿತ್ತು. 1687ರಲ್ಲಿ ಈಸ್ಟ್ ಇಂಡಿಯಾ ಕಂಪನಿ ತನ್ನ ಕಾರ್ಯಾಲಯವನ್ನು ಸೂರತ್ತಿನಿಂದ ಮುಂಬಯಿಗೆ ಬದಲಾಯಿಸಿತು.ಕಾಲಾಂತರದಲ್ಲಿ ಇದು ಮುಂಬಯಿ ಪ್ರಾಂತದ (Bombay Province) ರಾಜಧಾನಿಯಾಯಿತು.
ಹಾರ್ನ್^ಬೀ ವೆಲ್ಲಾರ್ಡ್ (Hornby Vellard)ಎಂಬ ಯೋಜನೆಯಲ್ಲಿ 1817ರಿಂದ 1845ರ ವರೆಗೂ ಮುಂಬಯಿಯ ಏಳು ದ್ವೀಪಗಳನ್ನು ಜೋಡಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಯಿತು. ಇದರ ಪರಿಣಾಮವಾಗಿ ಮುಂಬಯಿಯ ವಿಸ್ತೀರ್ಣ 438 ಚದರ ಕಿ.ಮೀ ಗಳಿಗೇರಿತು. ಏಶಿಯಾದಲ್ಲಿಯೇ ಮೊಟ್ಟಮೊದಲ ರೈಲು ಮಾರ್ಗವನ್ನು ಮುಂಬಯಿಯಲ್ಲಿ 1853ರಲ್ಲಿ ನಿರ್ಮಿಸಲಾಯಿತು. ಅಮೆರಿಕಾದಲ್ಲಿ ಅಂತರ್ಯುದ್ಧ (Civil War)ದ ಕಾಲದಲ್ಲಿ , ಜಗತ್ತಿನ ಪ್ರಮುಖ ಅರಳೆಪೇಟೆಗಳಲ್ಲಿ ಒಂದು ಎಂಬ ಹೆಸರು ಪಡೆದುಕೊಂಡ ಮುಂಬಯಿ, ಭರದಿಂದ ಬೆಳೆಯತೊಡಗಿತು. ಸುಯೆಝ್ ಕಾಲುವೆಯ ನಿರ್ಮಾಣವಾದ ಮೇಲೆ ಮುಂಬಯಿ ಅರಬ್ಬೀ ಸಮುದ್ರದ ಪ್ರಮುಖ ಬಂದರಾಯಿತು.
ಮುಂಬಯಿ ಮುಂದಿನ 30 ವರ್ಷಗಳಲ್ಲಿ ದಾಪುಗಾಲಿನಿಂದ ಪ್ರಗತಿ ಹೊಂದಿತು. 1906ರ ಸುಮಾರಿಗೆ ಮುಂಬಯಿಯ ಜನಸಂಖ್ಯೆ 10 ಲಕ್ಷ ದಾಟಿ, ಕೋಲ್ಕತ್ತಾಬಿಟ್ಟರೆ ಭಾರತದ ಅತಿ ದೊಡ್ಡ ನಗರವಾಗಿ ಹೆಸರಾಯಿತು. ಮುಂಬಯಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿಯೂ ಪ್ರಮುಖ ಸ್ಥಾನ ಹೊಂದಿತ್ತು. 1942ರಲ್ಲಿ ಮಹಾತ್ಮ ಗಾಂಧಿ ಸುಪ್ರಸಿದ್ಧ 'ಭಾರತ ಬಿಟ್ಟು ತೊಲಗಿ' (ಚಲೇಜಾವ್) ಚಳುವಳಿಗೆ ನಾಂದಿ ಹಾಡಿದ್ದು ಮುಂಬಯಿಯಲ್ಲಿಯೇ. ಸ್ವಾತಂತ್ರ್ಯಾನಂತರ ಮುಂಬಯಿ ಪ್ರಾಂತೀಯ ರಾಜಧಾನಿಯಾಯಿತು. 1950ರಲ್ಲಿ ಮುಂಬಯಿ ಸಾಲ್ಸೆಟ್ ದ್ವೀಪದವರೆಗೂ ಹಬ್ಬಿತ್ತು.
1955ರ ಸುಮಾರಿಗೆ ಮುಂಬಯಿ ಪ್ರಾಂತವನ್ನು ಮಹಾರಾಷ್ಟ್ರ ಹಾಗೂ ಗುಜರಾತ್ ಎಂದು ವಿಭಜಿಸಬೇಕು ಎಂಬ ಕೂಗು ಹೆಚ್ಚಾಗತೊಡಗಿತು. ಮುಂಬಯಿ ಕೇಂದ್ರಾಡಳಿತ ಪ್ರದೇಶವಾಗಿ ಮುಂದುವರೆಯಬೇಕು ಎಂದೂ ಕೆಲವರ ಅಭಿಮತವಾಗಿತ್ತು. ಸಂಯುಕ್ತ ಮಹಾರಾಷ್ಟ್ರ ಚಳುವಳಿ ಇದನ್ನು ವಿರೋಧಿಸಿ , ಮುಂಬಯಿಯನ್ನು ಮಹಾರಾಷ್ಟ್ರದ ರಾಜಧಾನಿಯಾಗಿ ಉಳಿಸಿಕೊಳ್ಳುವುದರಲ್ಲಿ ಯಶಸ್ವಿಯಾಯಿತು.
ಎಪ್ಪತ್ತರ ದಶಕದಲ್ಲಿ ಮುಂಬಯಿಯಲ್ಲಿ ಕಟ್ಟಡ ನಿರ್ಮಾಣ ಉದ್ಯಮ ಭರದಿಂದ ಪ್ರಗತಿಯಾಗಿ , ದೊಡ್ಡಪ್ರಮಾಣದಲ್ಲಿ ಪರಪ್ರಾಂತೀಯರ ವಲಸೆ ಮುಂಬಯಿಯತ್ತ ಹರಿದುಬಂದಿತು. ಇದೇ ಕಾಲದಲ್ಲಿ ಮುಂಬಯಿ ಕೋಲ್ಕತ್ತಾವನ್ನು ಹಿಂದೆ ಹಾಕಿ ಭಾರತದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಹೆಚ್ಚುತ್ತಿದ್ದ ಪರಪ್ರಾಂತೀಯರ ಸಂಖ್ಯೆಯಿಂದ ಸ್ಥಳಿಯರಲ್ಲಿ ಅಸಮಾಧಾನ ಹೊಗೆಯಾಡತೊಡಗಿತು. ಇದರ ಪರಿಣಾಮವಾಗಿ, ಸ್ಥಳೀಯ ನಾಗರೀಕರ ಹಿತರಕ್ಷಣೆಯ ಧ್ಯೇಯಹೊತ್ತ ಶಿವಸೇನಾ ಎಂಬ ರಾಜಕೀಯ ಸಂಘಟನೆಯ ಉದಯವಾಯಿತು. ಬಾಳಾಸಾಹೇಬ ಠಾಕರೆಯವರ ನೇತೃತ್ವದ ಈ ಸಂಘಟನೆಗೆ ಸ್ಥಳೀಯರ ಪ್ರಚಂಡ ಬೆಂಬಲ ದೊರಕಿ, ಅದು ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ರೂಪುಗೊಳ್ಳಲು ಸಹಾಯಕವಾಯಿತು.
[ಬದಲಾಯಿಸಿ] ಭೂಗೋಳ
ಭಾರತದ ಪಶ್ಚಿಮ ತೀರದ , ಕೊಂಕಣ ಪ್ರದೇಶದಲ್ಲಿರುವ ಉಲ್ಹಾಸ ನದಿಯ ಮುಖಜ ಪ್ರದೇಶವಾಗಿರುವ ಶಾಸ್ತಿ ದ್ವೀಪದ (ಸ್ಥಳೀಯ ಬಳಕೆಯಲ್ಲಿ ಸಾಲ್ಸೆಟ್) ಒಂದು ಭಾಗ ಮುಂಬಯಿ ನಗರ. ಇಲ್ಲಿಯ ಬಹುತೇಕ ಭಾಗ ಸಮುದ್ರ ಮಟ್ಟದಲ್ಲಿದ್ದು, ಸರಾಸರಿ ಎತ್ತರ (ಸಮುದ್ರ ಮಟ್ಟದಿಂದ) 10ರಿಂದ 15 ಮೀಟರಿನಷ್ಟಿದೆ. ಮುಂಬಯಿಯ ಉತ್ತರ ಭಾಗವು ಗುಡ್ಡಗಾಡಾಗಿದ್ದು , 450 ಮೀಟರು ಅತಿ ಎತ್ತರದ ಭಾಗವಾಗಿದೆ. ಮುಂಬಯಿಯ ವಿಸ್ತೀರ್ಣ 468 ಚದರ ಕಿ.ಮೀ. ನಗರದ ಸರಹದ್ದಿನಲ್ಲಿಯೇ ತುಳಸಿ, ವಿಹಾರ ಮತ್ತು ಪೊವಾಯಿ ಎಂಬ ಮೂರು ಕೆರೆಗಳಿವೆ. ಇದರಲ್ಲಿ ಮೊದಲ ಎರಡು ಬೋರಿವಲಿ ರಾಷ್ಟ್ರೀಯ ಉದ್ಯಾನವನದ ಒಳಗಿದ್ದು , ಮುಂಬಯಿಯ ಕುಡಿಯುವ ನೀರನ್ನು ಭಾಗಶಃ ಪೂರೈಸುತ್ತವೆ. ಇದೇ ಉದ್ಯಾನದಿಂದಲೇ ಉಗಮವಾಗುವ ಮೂರೂ ಸಣ್ಣ ನದಿಗಳೂ ಮುಂಬಯಿ ನಗರದಲ್ಲಿ ಹರಿಯುತ್ತವೆ.
ನಗರದ ಕಿನಾರೆಯಲ್ಲಿ ಅನೇಕ ಕೊಲ್ಲಿಗಳು (bays and creeks) ಕಂಡುಬರುತ್ತವೆ. ಸಾಲ್ಸೆಟ್ ದ್ವೀಪದ ಪೂರ್ವಭಾಗದಲ್ಲಿ ವಿಪುಲವಾದ ಜೀವವೈವಿಧ್ಯವಿರುವ mangrove swamps ಗಳಿವೆ. ಪಶ್ಚಿಮಭಾಗದಲ್ಲಿ ಜುಹು ಮತ್ತು ಚೌಪಾಟಿ ಎಂಬ ಎರಡು ಬೀಚುಗಳಿವೆ.
ಸಮುದ್ರಸಾಮೀಪ್ಯದ ಕಾರಣ ಇಲ್ಲಿ ಮಣ್ಣಿನ ಮೇಲ್ಪದರ ಮರಳುಮಿಶ್ರಿತವಾಗಿದೆ. ಉಪನಗರಗಳಲ್ಲಿ alluvial and loamy ಮಣ್ಣಿನ ಪದರ ಬಹುತೇಕವಾಗಿ ಕಾಣಬರುತ್ತದೆ. ಸಮೀಪದಲ್ಲಿರುವ ಮೂರು ಭೂಬಿರುಕುಗಳ (faults) ಕಾರಣ ಮುಂಬಯಿ ನಗರ ಸಕ್ರಿಯ ಭೂಕಂಪ ವಲಯದಲ್ಲಿದೆ. ಭೂಕಂಪ ಸಾಧ್ಯತೆಯಲ್ಲಿ ಮುಂಬಯಿಯನ್ನು ಮೂರನೆಯ ವಲಯವೆಂದು ನಮೂದಿಸಲಾಗಿದೆ, ಅಂದರೆ, ರಿಚ್ಟರ್ ಮಾಪಕದಲ್ಲಿ 6.5 ರ ಪರಿಮಾಣದ ಭೂಕಂಪವಾಗುವ ಸಾಧ್ಯತೆಗಳಿವೆ.
ಮುಂಬಯಿ ಮಹಾನಗರವನ್ನು ನಗರ ಮತ್ತು ಉಪನಗರ ಎಂದು ಎರಡು ಪ್ರದೇಶಗಳಾಗಿ ವಿಂಗಡಿಸಲಾಗಿದ್ದು, ಇವೆರಡೂ ಮಹಾರಾಷ್ಟ್ರದ ಪ್ರತ್ಯೇಕ ಜಿಲ್ಲೆಗಳೂ ಆಗಿವೆ. ಇದರಲ್ಲಿ ನಗರ ಪ್ರದೇಶವನ್ನು ದ್ವೀಪ ನಗರ ( Island City) ಎಂದೂ ಕರೆಯಲಾಗುತ್ತದೆ.
[ಬದಲಾಯಿಸಿ] ಹವಾಮಾನ
ಉಷ್ಣವಲಯದಲ್ಲಿ ಹಾಗೂ ಸಮುದ್ರದದಂಡೆಯಲ್ಲಿರುವ ಮುಂಬಯಿಯಲ್ಲಿ ಎರಡು ಋತುಗಳು ಮುಖ್ಯವಾಗಿವೆ.
ಆರ್ದ್ರ ಹವಾಮಾನ ಮಾರ್ಚಿಯಿಂದ ಆಕ್ಟೋಬರ್ ವರೆಗಿದ್ದು , ಈ ಕಾಲದಲ್ಲಿ ವಾತಾವರಣದಲ್ಲಿ ನೀರಿನಂಶ ಹೆಚ್ಚಿರುತ್ತದೆ. ದಿನದ ತಾಪಂಆನ 30 ಡಿಗ್ರಿ ಸೆಂಡಿಗ್ರೇಡ್ ವರೆಗಿರುತ್ತದೆ. ಜೂನಿನಿಂದ ಸೆಪ್ಟೆಂಬರಿನವರೆಗೂ ಅನುಭವಕ್ಕೆ ಬರುವ ಮಳೆಗಾಲದಲ್ಲಿ ಜಡಿಮಳೆ ಸಾಮಾನ್ಯ. ಸರಾರಿ ವಾರ್ಷಿಕ ಮಳೆ 2200 ಮಿ.ಮೀ. 1954ರಲ್ಲಿ ಬಿದ್ದ 3452 ಮಿ.ಮೀ ಮಳೆ ವಾರ್ಷಿಕ ದಾಖಲೆಯಾದರೆ, ಜುಲೈ 26, 2005 ರಂದು ಬಿದ್ದ 944 ಮಿ.ಮೀ ಮಳೆ ಒಂದೇ ದಿನದಲ್ಲಿ ಬಿದ್ದ ಅತಿ ಹೆಚ್ಚು ಮಳೆ.
ನವೆಂಬರಿನಿಂದ ಫೆಬ್ರುವರಿಯವರೆಗೆ ಒಣ ಹವೆಯಿರುತ್ತದೆ. ವಾತಾವರಣವೂ ತಕ್ಕಮಟ್ಟಿಗೆ ತಂಪಾಗಿರುತ್ತದೆ. ಉತ್ತರದಿಂದ ಬೀಸುವ ತಂಗಾಳಿಯೇ ಈ ಬದಲಾವೆಣೆಗೆ ಕಾರಣ. ವಾರ್ಷಿಕ ತಾಪಮಾನ ಗರಿಷ್ಠ 38 ಡಿಗ್ರಿ ಇದ್ದರೆ, ಕನಿಷ್ಠ 11 ಡಿಗ್ರಿಯವರೆಗಿರುತ್ತದೆ. 43 ಡಿಗ್ರಿ ಮತ್ತು 7.4 ಡಿಗ್ರಿ , ಕ್ರಮವಾಗಿ, ಅತಿ ಹೆಚ್ಚು ಮತ್ತು ಅತಿ ಕಡಿಮೆ ತಾಮಾನದ ದಾಖಲೆಗಳು.
[ಬದಲಾಯಿಸಿ] ಅರ್ಥ ವ್ಯವಸ್ಥೆ
ಮುಂಬಯಿಯನ್ನು ಭಾರತದ ಆರ್ಥಿಕ ರಾಜಧಾನಿ ಎನ್ನಲಾಗುತ್ತದೆ. ಭಾರತದ 10% ಔದ್ಯೋಗಿಕ ಕಾರ್ಮಿಕರು ಮುಂಬಯಿಯಲ್ಲಿದ್ದಾರೆ. ಭಾರತದ ಆದಾಯ ತೆರಿಗೆಯ 40%, ಕೇಂದ್ರ ಅಬಕಾರಿಯ (Central excise) 20%, ಕಸ್ಟಮ್ಸ್ ಸುಂಕದ 60% , ರಫ್ತು ವ್ಯಾಪಾರದ 40% , ಅಷ್ಟೇ ಅಲ್ಲ 40 ಬಿಲಿಯನ್ ರೂಪಾಯಿಯ ವ್ಯಾವಸಾಯಿಕ ತೆರಿಗೆ (Professional Tax) ಮುಂಬಯಿಯಿಂದ ಬರುತ್ತದೆ. ಭಾರತದ ಪ್ರಮುಖ ಆರ್ಥಿಕ ಸಂಸ್ಥೆಗಳು ಮುಂಬಯಿಯಲ್ಲಿದ್ದು, ಮುಂಬಯಿ ಶೇರು ಬಜಾರು, ಭಾರತೀಯ ರಿಸರ್ವ್ ಬ್ಯಾಂಕ್ , ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ ಇವೇ ಅಲ್ಲದೇ ಟಾಟಾ, ಗೋದ್ರೇಜ್ ಮತ್ತು ರಿಲಯನ್ಸ್ ನಂಥಹಾ ಮಹಾ ಉದ್ಯೋಗಸಮೂಹಗಳ ಮುಖ್ಯ ಕಛೇರಿಗಳು ಮುಂಬಯಿಯಲ್ಲಿವೆ. ಅನೇಕ ವಿದೇಶೀ ಬ್ಯಾಂಕುಗಳೂ ತಮ್ಮ ಶಾಖೆಗಳನ್ನು ಮುಂಬಯಿಯಲ್ಲಿ ತೆರೆದಿವೆ.
ಸುಮಾರು 1980ರವರೆಗೂ ಮುಂಬಯಿಯ ಬಟ್ಟೆ ಗಿರಣಿಗಳು ಆರ್ಥಿಕ ವ್ಯವಸ್ಥೆಯ ಆಧಾರಸ್ಥಂಭಗಳಾಗಿದ್ದವು. ಆದರೆ ಈಗ ತಂತ್ರಜ್ಙಾನ, ಆಭರಣಗಳ ಪಾಲೀಶ್ ಮಾಡುವಿಕೆ, ಆರೋಗ್ಯ, ಮಾಹಿತಿ ತಂತ್ರಜ್ಙಾನ ಮೊದಲಾದ ಉದ್ಯಮಗಳು ಮಹತ್ವದ ಕೊಡುಗೆ ನೀಡುತ್ತಿವೆ.ಮುಂಬಯಿ ರಾಜಧಾನಿಯೂ ಆಗಿರುವ ಕಾರಣ, ರಾಜ್ಯ ಹಾಗೂ ಕೇಂದ್ರ ಸರಕಾರೀ ನೌಕರರು ಸಹಾ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹಾಗೆಯೇ ಕೈಗಾಡಿಯ ಕಿರುವ್ಯಾಪಾರಿಗಳು, ಟ್ಯಾಕ್ಸಿ ಚಾಲಕರು, ಮೆಕ್ಯಾನಿಕ್ ಇತ್ಯಾದಿ ಉದ್ಯೋಗದಲ್ಲಿ ತೊಡಗಿಕೊಂಡಿರುವ ಕುಶಲ ಹಾಗೂ ಅ-ಕುಶಲ ಕಾರ್ಮಿಕರೂ ವಿಪುಲವಾಗಿದ್ದಾರೆ. ಮುಂಬಯಿ ಬಂದರೂ ಅನೇಕರಿಗೆ ಉದ್ಯೋಗಾವಕಾಶವನ್ನು ನೀಡಿದೆ.
ಮುಂಬಯಿಯ ಮನರಂಜನಾ ಉದ್ಯಮವಂತೂ ಅನೇಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದೆ. ಭಾರತದ ಪ್ರಮುಖ ಕಿರುತೆರೆ, ಉಪಗ್ರಹ ವಾಹಿನಿಗಳು, ಪುಸ್ತಕ ಪ್ರಕಾಶನ ಸಂಸ್ಥೆಗಳ ಕೇಂದ್ರ ಮುಂಬಯಿ. 'ಬಾಲಿವುಡ್ ' ಎಂದೇ ಹೆಸರಾಗಿರುವ ಹಿಂದೀ ಚಲನಚಿತ್ರೋದ್ಯಮದ ಕೆಂದ್ರವೂ ಮುಂಬಯಿಯೇ.ಮುಂಬಯಿಯ ಆರ್ಥಿಕ ಪ್ರಗತಿಗೆ ಗುಜರಾತಿ, ಮಾರವಾಡಿ ಮತ್ತು ಪಾರಸೀ ಜನಾಂಗದ ಗಣನೀಯ ಕೊಡುಗೆಯಿದೆ.
[ಬದಲಾಯಿಸಿ] ಸರಕಾರ
[ಬದಲಾಯಿಸಿ] ಮಹಾನಗರಪಾಲಿಕೆ
ಬೃಹನ್ಮುಂಬಯಿ ಮಹಾನಗರಪಾಲಿಕೆ ಈ ನಗರದ ಮೂಲಭೂತ ಅವಶ್ಯಕತೆಗಳಾದ ನೀರು ಸರಬರಾಜು, ಸಂಚಾರ ವ್ಯವಸ್ಥೆ ಇತ್ಯಾದಿಗಳನ್ನು ನಿರ್ವಹಿಸುತ್ತದೆ. ಕಮೀಷನರ್ ಇದರ ಆಡಳಿತಾತ್ಮಕ ಮುಖ್ಯಾಧಿಕಾರಿಯಾಗಿದ್ದು, ಐ.ಏ.ಎಸ್ ಹುದ್ದೆಯ ಈ ಅಧಿಕಾರಿಯನ್ನು ಮಹಾರಾಷ್ಟ್ರ ಸರಕಾರ ನೇಮಿಸುತ್ತದೆ. ಆಡಳಿತಾನುಕೂಲಕ್ಕಾಗಿ ನಗರವನ್ನು 14 ಉಪವಿಭಾಗಗಳಾಗಿ ವೀಭಾಗಿಸಿದ್ದು , ಪ್ರತಿಯೊಂದು ಉಪವಿಭಾಗವನ್ನೂ ಒಬ್ಬೊಬ್ಬ ಉಪ-ಕಮೀಷನರ್ ನೋಡಿಕೊಳ್ಳುತ್ತಾರೆ.
ಮಹಾಪಾಲಿಕೆಯಲ್ಲಿ ಜನರಿಂದ ಚುನಾಯಿತರಾದ 227 ನಗರಸೇವಕರು (ಕಾರ್ಪೋರೇಟರುಗಳು), 5 ನಾಮಕರಣ ಮಾಡಲ್ಪಟ್ಟ ನಗರಸೇವಕರು ಹಾಗೂ ಒಬ್ಬ ಮಹಾಪೌರ (ಮೇಯರ್ ) ಇರುತ್ತಾರೆ. ರಾಜ್ಯದ ಸಾಧಾರಣ ಎರ್ಲಲಾ ರಾಜಕೀಯ ಪಕ್ಷಗಳ ಉಮೇದುವಾರರನ್ನೂ ಈ ನಗರಪಾಲಿಕೆಯ ಚುನಾವಣೆಗಳಲ್ಲಿ ಕಾಣಬಹುದು.
ಮುಂಬಯಿ ಪೋಲೀಸ್ ರಾಜ್ಯದ ಗೃಹ ಖಾತೆಯ ಅಧೀನದಲ್ಲಿ ಕೆಲಸಮಾಡುತ್ತದೆ. ಐ.ಪಿ.ಎಸ್ ದರ್ಜೆಯ ,ಕಮೀಷನರ್ ಮುಂಬಯಿ ಪೋಲೀಸ್ ಪಡೆಯ ಮುಖ್ಯಾಧಿಕಾರಿ. ಮುಂಬಯಿ ನಗರವನ್ನು ಏಳು ಪೋಲೀಸ್ ವಲಯಗಳಾಗಿಯೂ, ಹದಿನೇಳು ವಾಹನ ಸಾರಿಗೆ (traffic) ಪೋಲೀಸ್ ವಲಯಗಳಾಗಿಯೂ ವಿಭಜಿಸಲಾಗಿದ್ದು, ಪ್ರತಿಯೊಂದು ವಲಯಕ್ಕೂ ಒಬ್ಬ ಡೆಪ್ಯುಟಿ ಕಮೀಷನರ್ ನೇತೃತ್ವವಿದೆ. ವಾಹನ ಸಾರಿಗೆ ಪೋಲೀಸ್ ಮುಂಬಯಿ ಪೋಲಿಸಿಗೆ ಸೇರಿದೆ ಅರೆ-ಸ್ವಾಯತ್ತ ಪಡೆಯಾಗಿದೆ.
ಮುಂಬಯಿಯಲ್ಲಿರುವ ಉಚ್ಚ ನ್ಯಾಯಾಲಯದ ವ್ಯಾಪ್ತಿ , ಕೇವಲ ಮಹಾರಾಷ್ಟ್ರ ರಾಜ್ಯಕ್ಕಷ್ಟೇ ಅಲ್ಲದೇ ಗೋವಾ ರಾಜ್ಯ , ಕೇಂದ್ರಾಡಳಿತ ಪ್ರದೇಶಗಳಾದ ದಮನ್,ದಿಯು , ದಾದ್ರ ಮತ್ತು ನಗರಹವೇಲಿ ಗಳಿಗೂ ಹಬ್ಬಿದೆ. ಇದಲ್ಲದೆ , ಸಿವಿಲ್ ಪ್ರಕರಣಗಳಿಗಾಗಿ ಸಣ್ಣ ವ್ಯಾಜ್ಯಗಳ ನ್ಯಾಯಾಲಯ (Small Causes Court) ಮತ್ತು ಕ್ರಿಮಿನಲ್ ಪ್ರಕರಣಗಳಿಗಾಗಿ ಸೆಷನ್ಸ್ ನ್ಯಾಯಾಲಯಗಳೂ ಇವೆ.
6 ಜನ ಸಂಸತ್ತಿನಲ್ಲಿಯೂ, 34 ಜನ ವಿಧಾನ ಮಂಡಲದಲ್ಲಿಯೂ ಮುಂಬಯಿಯನ್ನು ಪ್ರತಿನಿಧಿಸುತ್ತಾರೆ.
[ಬದಲಾಯಿಸಿ] ಸಂಚಾರ ವ್ಯವಸ್ಥೆ
ಮುಂಬಯಿಯ ನಾಗರೀಕರು ದೈನಂದಿನ ಸಂಚಾರೀ ಅಗತ್ಯಗಳಿಗೆ ಸರಕಾರೀ ಸಾರಿಗೆಯ ಮೇಲೆ ಬಹಳಷ್ಟು ಅವಲಂಬಿತರಾಗಿದ್ದಾರೆ. ರಸ್ತೆಗಳ ದುಸ್ಥಿತಿಯಿಂದ ಮತ್ತು ಪಾರ್ಕಿಂಗ್ ಮಾಡಲು ಸ್ಥಳದ ಅಭಾವದಿಂದ ಖಾಸಗೀ ವಾಹನಗಳು ಅಷ್ಟಾಗಿ ಜನಪ್ರಿಯವಾಗಿಲ್ಲ. ಆದರೂ ಈಚೀಚೆಗೆ, ಲೋಕಲ್ ರೈಲಿನಲ್ಲಿಯ ಸಹಿಸಲಸಾಧ್ಯ ಜನದಟ್ಟಣೆಯಿಂದ ಬೇಸತ್ತ ಜನ ಸ್ವಂತ ವಾಹನದ ಮೊರೆ ಹೋಗುವ ಪ್ರವೃತ್ತಿಯೂ ಕಾಣಬರುತ್ತಿದೆ. ಲೋಕಲ್ ರೈಲುಗಳು ಮುಂಬಯಿ ಜನಜೀವನದ ಜೀವನಾಡಿ ಎಂದು ಹೇಳಲು ಅಡ್ಡಿಯಿಲ್ಲ. ಪಶ್ಚಿಮ ಮತ್ತು ಮಧ್ಯ ರೈಲ್ವೆಗಳ ಕೇಂದ್ರ ಕಛೇರಿಗಳು ಮುಂಬಯಿಯಲ್ಲವೆ.
ಮುಂಬಯಿ ಲೋಕಲ್ ರೈಲು ಮೂರು ಮುಖ್ಯ ಮಾರ್ಗಗಳಲ್ಲಿ ಸಂಚರಿಸುತ್ತದೆ. ಮುಂಬಯಿಯ ಪಶ್ಚಿಮ ರೈಲ್ವೆಯ ಸಂಚಾರವಿದ್ದರೆ, ಮುಂಬಯಿಯ ಮಧ್ಯಭಾಗ ಮತ್ತು ಈಶಾನ್ಯ ಭಾಗ ಮಧ್ಯರೈಲ್ವೆ ನಿಭಾಯಿಸುತ್ತದೆ. ಆಗ್ನೇಯ ಭಾಗದ ಪ್ರದೇಶಗಳಿಗೆ ಹಾರ್ಬರ್ ಲೈನ್ ಇದೆ. ಇದು ಮಧ್ಯರೈಲ್ವೆಯ ಒಂದು ಭಾಗ. ಇವೆರಡೂ ರೈಲುಗಳ124 ಕಿ. ಮೀ. ಉದ್ದದ ಹಾಗೂ ಹಾರ್ಬರ್ ಲೈನಿನ ಮತ್ತೊಂದು 54 ಕಿ.,ಮೀ ಉದ್ದದ ರೈಲು ಹಳಿಗಳ ಜಾಲ ಮುಂಬಯಿಯಲ್ಲಿ ಹರಡಿಕೊಂಡಿವೆ. ಮುಂಬಯಿಯಿಂದ ಭಾರತದ ಎಲ್ಲಾ ದಿಕ್ಕುಗಳಿಗೂ ಚೆನ್ನಾಗಿ ರೈಲು ಸಂಪರ್ಕವಿದೆ.
ಮುಂಬಯಿಯ ರಸ್ತೆ ಸಾರಿಗೆಯಲ್ಲಿ ಬೆಸ್ಟ್ ( BEST - Bombay Electric Supply and Transport) ಮಹತ್ವದ ಸ್ಥಾನದಲ್ಲಿದೆ. ಈ, ಮುಂಬಯಿ ನಗರಪಾಲಿಕೆಯ ಅಧೀನದ, ಸ್ವಾಯತ್ತ ಸಂಸ್ಥೆ ನೋಡಿಕೊಳ್ಳುವ ಸಾರ್ವಜನಿಕ ಸಾರಿಗೆ ವ್ಯವಸ್ಥೆ , ಕೇವಲ ಮುಂಬಯಿ ನಗರವಷ್ಟೇ ಅಲ್ಲದೇ, ಉಪನಗರಗಳು, ನವಿ ಮುಂಬಯಿ ಮತ್ತು ಠಾಣೆ ಯನ್ನೂ ಒಳಗೊಳ್ಳುತ್ತದೆ. ಬಸ್ಸುಗಳನ್ನು ಸಾಧಾರಣವಾಗಿ ಸಮೀಪದ ಅಥವಾ ಮಧ್ಯಮ ದೂರದ ಪ್ರಯಾಣಕ್ಕೆ ಉಪಯೋಗಿಸಿದರೆ, ಹೆಚ್ಚು ದೂರದ ಓಡಾಟಕ್ಕೆ ಲೋಕಲ್ ರೈಲು ಬಸ್ಸಿಗಿಂತ ಅಗ್ಗವಾಗುತ್ತದೆ. ಸಾಧಾರಣ ಬಸ್ಸುಗಳೊಂದಿಗೆ, ಮಹಡಿಬಸ್ ಹಾಗೂ ವಾತಾನುಕೂಲಿತ ಬಸ್ಸುಗಳನ್ನೂ BEST ಓಡಿಸುತ್ತದೆ. ಖಾಸಗೀ ಸಂಚಾರಕ್ಕಾಗಿ ಹಳದಿ,ಕಪ್ಪು ಬಣ್ಣದ ಟ್ಯಾಕ್ಸಿಗಳು ನಗರಗಳಲ್ಲಿ ಲಭ್ಯವಿದೆ. ಆಟೋರಿಕ್ಷಾಗಳಿಗೆ ನಗರಪ್ರದೇಶದಲ್ಲಿ ಪ್ರವೇಶವಿಲ್ಲವಾದರೂ, ಉಪನಗರಗಳಲ್ಲಿ ಇವು, ಜನಸಾಮಾನ್ಯರ ಮುಖ್ಯ ಖಾಸಗೀ ಸಂಚಾರ ಮಾಧ್ಯಮಗಳಾಗಿವೆ.
ಮುಂಬಯಿಯ ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ( ಹಳೆಯ ಹೆಸರು ಸಹಾರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ) ಭಾರತದ ಅತ್ಯಂತ ಕಿಕ್ಕಿರಿದ ವಿಮಾನ ನಿಲ್ದಾಣವಾಗಿದೆ. ಸಾಂತಾಕ್ರೂಝ್ ನಲ್ಲಿ ಭಾರತದೊಳಗಿನ ಸಂಚಾರಕ್ಕಾಗಿ ವಿಮಾಣ ನಿಲ್ದಾಣವಿದೆ.
ಮುಂಬಯಿ ತನ್ನ ವೈಶಿಷ್ಟ್ಯಪೂರ್ಣ ಭೌಗೋಳಿಕ ಸ್ವರೂಪದಿಂದ , ಜಗತ್ತಿನಲ್ಲಿಯೇ ಅತ್ಯುತ್ತಮ ಸ್ವಾಭಾವಿಕ ಬಂದರುಗಳಲ್ಲಿ ಒಂದಾಗಿದೆ. ಭಾರತದ ಸರಕು ಹಾಗೂ ಪ್ರಯಾಣಿಕರ ಸಾಗಣೆಯಲ್ಲಿ ಮುಂಬಯಿ ಬಂದರು 50% ಪಾಲು ಪಡೆದಿದೆ. ಭಾರತೀಯ ನೌಕಾಪಡೆಯ ಮಹತ್ವದ ನೆಲೆಯೂ ಮುಂಬಯಿಯಲ್ಲಿದೆ.
[ಬದಲಾಯಿಸಿ] ನಾಗರೀಕ ಸೌಲಭ್ಯಗಳು
ಮುಂಬಯಿ ನಗರದ ಕುಡಿಯುವ ನೀರಿನ ಸರಬರಾಜು ಮುಖ್ಯವಾಗಿ ತುಳಸಿ ಮತ್ತು ವಿಹಾರ್ ಕೆರೆಗಳಿಂದ , ಹಾಗೂ ಇನ್ನೂ ಉತ್ತರದ ಕೆಲವು ಕೆರೆಗಳಿಂದ ಆಗುತ್ತದೆ. ಭಾಂಡುಪ್ ನಲ್ಲಿರುವ ಏಶಿಯಾದಲ್ಲಿಯೇ ಅತಿ ದೊಡ್ಡದಾದ ಶೂದ್ಧೀಕರಣ ಕೇಂದ್ರದಲ್ಲಿ ಈ ನೀರನ್ನು ಶುದ್ಧೀಕರಿಸಲಾಗುತ್ತದೆ. ರಸ್ತೆಗಳ ಮೇಲುಸ್ತುವಾರಿ ಮತ್ತು ನಗರದ ಕಸವನ್ನು ಸಾಗಿಸುವುದು ಕೂಡಾ ನಗರಪಾಲಿಕೆಯ ಜವಾಬ್ದಾರಿಗಳಲ್ಲಿ ಸೇರುತ್ತದೆ. ಮುಂಬಯಿಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ಸುಮಾರು 7,800 ಮೆಟ್ರಿಕ್ ಕಸವನ್ನು ನಗರದ ವಾಯವ್ಯ ಭಾಗದಲ್ಲಿರುವ ಗೋರೈ ಎಂಬಲ್ಲಿಗೆ ಸಾಗಿಸಿ ಅಲ್ಲಿ ಸುರಿಯಲಾಗುತ್ತದೆ. ಇದರಂತೆ, ಈಶಾನ್ಯದಲ್ಲಿ ಮುಲುಂದ್, ಪೂರ್ವದಲ್ಲಿ ದೇವನಾರ್ ಎಂಬ ಪ್ರದೇಶಗಳಲ್ಲಿಯೂ ಕಸ ಸುರಿಯುವ ಪ್ರದೇಶಗಳಿವೆ. ವರಳಿ ಮತ್ತು ಬಾಂದ್ರಾ ಗಳಲ್ಲಿ ಕೊಳಚೆ ನೀರನ್ನು ಪರಿಷ್ಕರಿಸುವ ಕೇಂದ್ರಗಳಿವೆ. BEST ಸಂಸ್ಥೆಯು ನಗರದ ವಿದ್ಯುತ್ ಸರಬರಾಜನ್ನೂ ನೋಡಿಕೊಳ್ಲುತ್ತದೆ. ಉಪನಗರಗಳ ವಿದ್ಯುತ್ ವಿತರಣೆ ರಿಲಯನ್ಸ್ ಎನರ್ಜಿ ಮತ್ತು ಮಹಾವಿತರಣ (ಮಹಾರಾಷ್ಟ್ರ ವಿದ್ಯುತ್ ವಿತರಣಾ ಮಂಡಳಿ) ಗಳ ನಿಯಂತ್ರಣದಲ್ಲಿವೆ. ಮಹಾನಗರದ ವಿದ್ಯುತ್ ಬೇಡಿಕೆಯನ್ನು ಖಾಸಗೀ ಒಡೆತನದ ಟಾಟಾ ಸಮೂಹದ ಟಾಟಾ ಪವರ್ ಕಂಪನಿಯು ಪೂರೈಸುತ್ತದೆ. ಉಪನಗರಗಳಲ್ಲಿ ಆಗೊಮ್ಮೆ ಈಗೊಮ್ಮೆ ವಿದ್ಯುತ್ ಕಡಿತವಾದರೂ , ನಗರ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಗೆ ಧಕ್ಕೆ ಉಂಟಾಗುವುದು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ.
[ಬದಲಾಯಿಸಿ] ಜನಜೀವನ
ಮುಂಬಯಿಯ ಜನಸಂಖ್ಯೆ ಒಂದು ಕೋಟಿ ಮೂವತ್ತು ಲಕ್ಷವಿದ್ದು ಪ್ರತಿ ಚದರ ಕಿ.ಮೀಗೆ 29000 ಜನರ ಸಾಂದ್ರತೆಯಿದೆ. ಪ್ರತಿ ಸಾವಿರ ಪುರುಷರಿಗೆ 811 ಸ್ತ್ರೀ ಜನಸಂಖ್ಯೆಯಿದೆ. ಉದ್ಯೋಗವನ್ನರಸಿಕೊಂಡು ಪರಸ್ಥಳಗಳಿಂದ ಬರುವವರಲ್ಲಿ ಪುರುಷರೇ ಹೆಚ್ಚಿನ ಪ್ರಮಾಣದಲ್ಲಿರುವುದೇ ಇದಕ್ಕೆ ಕಾರಣ. 83% ಜನ ಸಾಕ್ಷರರಾಗಿದ್ದಾರೆ. ಇಲ್ಲಿಯ ಜನಸಂಖ್ಯೆಯಲ್ಲಿ 68% ಹಿಂದೂಗಳೂ, 17% ಮುಸಲ್ಮಾನರೂ, ತಲಾ 4% ಕ್ರಿಶ್ಚಿಯನ್ನ್ ಹಾಗೂ ಬೌದ್ಧರೂ ಇದ್ದಾರೆ. ಇನ್ನಿತರ ಧಾರ್ಮಿಕರೆಂದರೆ, ಪಾರ್ಸಿಗಳು, ಜೈನರು , ಯಹೂದ್ಯರು, ಮತ್ತು ಸೀಖರು. ಮಹಾರಾಷ್ಟ್ರದ ನಾಡಭಾಷೆ ಮರಾಠಿ ಮುಂಬಯಿಯ ಮುಖ್ಯಭಾಷೆಯಾಗಿದ್ದರೂ, ಹಿಂದಿ, ಗುಜರಾತಿ, ಇಂಗ್ಲೀಷ್, ಕೊಂಕಣಿ ಈ ಭಾಷಿಕರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಭಾರತದ ಬಹುತೇಕ ಎಲ್ಲಾ ಭಾಷೆಗಳ ಜನರೂ ಮುಂಬಯಿಯಲ್ಲಿ ಕಾಣಸಿಗುತ್ತಾರೆ.
ಮುಂಬಯಿಯ ಜನಸಂಖ್ಯೆಗೆ ಹೋಲಿಸಿದರೆ, ಅಪರಾಧಗಳ ಸಂಖ್ಯೆ ತಕ್ಕಮಟ್ಟಿಗಿದೆ. ಇಲ್ಲಿಯ ಮುಖ್ಯ ಸೆರೆಮನೆ ಅರ್ಥರ್ ರೋಡ್ ಜೈಲು.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಯ ನಗರಗಳಂತೆ, ಮುಂಬಯಿಯಲ್ಲಿ ಕೂಡಾ ಅತಿನಗರೀಕರಣದ ಪರಿಣಾಮವಾದ ಎಲ್ಲೆಲ್ಲಿಯೂ ಕಂಡುಬರುವ ಬಡತನ, ನೈರ್ಮಲ್ಯದ ಕೊರತೆ, ನಿರುದ್ಯೋಗ, ಮೂಲಭೂತ ಸೌಲಭ್ಯಗಳ ಅಭಾವ, ಕೊಳೆಗೇರಿಗಳ ಅನಿರ್ಬಂಧಿತ ಹೆಚ್ಚಳ ಇತ್ಯಾದಿಗಳು ಕಂಡುಬರುತ್ತವೆ. ಮುಂಬಯಿಯ ಮೂರು ಕಡೆ ನೀರಿದ್ದು ನಗರದ ಬೆಳವಣಿಗೆ ಗೆ ಜಾಗ ಕೇವಲ ಒಂದೇ ದಿಕ್ಕಿನಲ್ಲಿ ಸಾಧ್ಯವಾದ ಕಾರಣ, ನಿವೇಶನದ ಬೆಲೆ ಗಗನಕ್ಕೇರಿದ್ದು, ಸಾಮಾನ್ಯ ನಾಗರೀಕರು ನಗರದ ಹೊರವಲಯದ ಉಪನಗರಗಳಲ್ಲಿ ನೆಲೆಸುತ್ತಿದ್ದಾರೆ. ಕೆಲಸದ ಜಾಗಕ್ಕೂ ಮನೆಗೂ ಇದರಿಂದ ಬಹಳಷ್ಟು ದೂರವಾಗುವುದರಿಂದ , ದೈನಂದಿನ ಜೀವನದಲ್ಲಿ ಗಣನೀಯ ವೇಳೆಯನ್ನು ಸಂಚಾರದಲ್ಲಿಯೇ ಕಳೆಯುವುದು ಮುಂಬಯಿ ಜೀವನದಲ್ಲಿ ಅನೇಕರಿಗೆ ಅನಿವಾರ್ಯವಾಗಿದೆ. ಇದು ಸಂಚಾರ ವ್ಯವಸ್ಥೆಯ ಮೇಲೂ ಅಸಾಧ್ಯ ಒತ್ತಡವನ್ನು ತರುತ್ತಿದೆ. ಮುಂಬಯಿಯ ಜನಸಂಖ್ಯೆಯ ಸುಮಾರು 46-48% ಜನ ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆಂದು ಒಂದು ಅಂದಾಜಿದೆ.
[ಬದಲಾಯಿಸಿ] ಮುಂಬಯಿಯಲ್ಲಿ ಕನ್ನಡಿಗರು
ಮುಂಬಯಿಯಲ್ಲಿ ಇತರೆ ದಕ್ಷಿಣ ಭಾರತೀಯರಂತೆ, ಕನ್ನಡಿಗರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಭಾಷಾವಾರು ಪ್ರಾಂತಗಳ ರಚನೆಗೆ ಮುನ್ನ , ಕರ್ನಾಟಕದ ಉತ್ತರ ಭಾಗದ ಕೆಲ ಪ್ರದೇಶಗಳು, ಅಂದಿನ ಮುಂಬಯಿ ಪ್ರಾಂತದ ಅಂಗವಾಗಿದ್ದರಿಂದ , ಈ ಪ್ರದೇಶಗಳ ಕನ್ನಡಿಗರು ಉದ್ಯೋಗಾವಕಾಶಗಳಿಗಾಗಿ ಮುಂಬಯಿಗೆ ಸಾಕಷ್ಟು ಸಂಖ್ಯೆಯಲ್ಲಿ ವಲಸೆ ಹೋಗಿ, ಕೆಲ ತಲೆಮಾರುಗಳಿಂದ ಮುಂಬಯಿಯ ನಾಗರೀಕರಾಗಿದ್ದಾರೆ. ಕ್ರಮೇಣ ಇತರ ಭಾಗಗಳ ಕನ್ನಡಿಗರೂ ಮುಂಬಯಿಯಲ್ಲಿ ನೆಲೆಯೂರಿದ್ದಾರೆ. "ಉಡುಪಿ ಹೋಟಲು" ಎಂದೇ ಪ್ರಖ್ಯಾತವಾಗಿರುವ ಮುಂಬಯಿಯ ಮಧ್ಯಮವರ್ಗೀಯ ಹೋಟೆಲು ಉದ್ಯಮದಲ್ಲಿ ಕರಾವಳಿ ಜಿಲ್ಲೆಗಳ ಕನ್ನಡಿಗರ ಪ್ರಾಬಲ್ಯವಿದೆ. ಒಂದು ಅಂದಾಜಿನ ಪ್ರಕಾರ ಮುಂಬಯಿಯಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಕನ್ನಡಿಗರಿದ್ದಾರೆ.
ಅನೇಕ ಕನ್ನಡಿಗರು ಈ ನಗರದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಸಿನಿಮಾ (ಖ್ಯಾತ ನಿರ್ದೇಶಕ ಗುರುದತ್, ನಟ/ನಟಿಯರಾದ ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿ,ಐಶ್ವರ್ಯಾ ರೈ,ಛಾಯಾಗ್ರಾಹಕ ಮೂರ್ತಿ ಇತ್ಯಾದಿ), ಸಾಹಿತ್ಯ (ಅಮರ ಚಿತ್ರ ಕಥೆಯನ್ನು ಪ್ರಾರಂಭಿಸಿದ ಪೈ, ಕನ್ನಡ ಸಾಹಿತ್ಯದಲ್ಲಿ ಹೆಸರಾದ ವ್ಯಾಸರಾಯ ಬಲ್ಲಾಳ, ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ ಇತ್ಯಾದಿ), ನಾಟಕ (ಗಿರೀಶ್ ಕಾರ್ನಾಡರು , ಅನಂತ ನಾಗ್,ಶಂಕರ ನಾಗ್ ಕೆಲಕಾಲ ಮುಂಬಯಿಯಲ್ಲಿದ್ದುದುಂಟು ),ಪತ್ರಿಕೋದ್ಯಮ (ಎಂ.ವಿ.ಕಾಮತ್, ಫ್ರೀ ಪ್ರೆಸ್ ಜರ್ನಲ್ ನ ಸದಾನಂದ್)ಇತ್ಯಾದಿಗಳು ಇವರಲ್ಲಿ ಕೆಲವೇ ಕೆಲವರು.
ಮುಂಬಯಿಯಲ್ಲಿ ಕನ್ನಡಿಗರ ನೂರಕ್ಕೂ ಹೆಚ್ಚು ಸಂಘ ಸಂಸ್ಥೆಗಳಿವೆ. ಇವೆಲ್ಲವೂ ತಮ್ಮದೇ ಆದ ದೊಡ್ಡ / ಸಣ್ಣ ಹರವಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕನ್ನಡತನವನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿವೆ.
[ಬದಲಾಯಿಸಿ] ಮುಂಬಯಿ ನಗರವಾಸಿ ಮತ್ತು ಸಂಸ್ಕೃತಿ
ಮುಂಬಯಿ ನಗರವಾಸಿಗಳನ್ನು ಮುಂಬಯಿಕರ್ ಎಂದು ಸಂಬೋಧಿಸುವುದುಂಟು. ಮುಂಬಯಿಯ ನಾಗರೀಕರು , ದೈನಂದಿನ ಜೀವನದಲ್ಲಿ ಲೋಕಲ್ ರೈಲಿನ ಪ್ರಯಾಣ ಅವಿಭಾಜ್ಯ ಅಂಗವಾಗಿರುವುದರಿಂದ, ಸ್ವಂತ ಮನೆ ಕೊಳ್ಳುವಾಗ , ಆದಷ್ಟೂ ಲೋಕಲ್ ಸ್ಟೇಷನ್ನುಗಳ ಹತ್ತಿರವೇ ಹುಡುಕುತ್ತಾರೆ. ದೈನಂದಿನ ಜೀವನದಲ್ಲಿ , ಓಡಾಟದಲ್ಲಿ, ಗಡಿಯಾರದ ಮುಳ್ಳಿನಂತೆ ಮಗ್ನರಾಗಿರುವ ಮುಂಬಯಿಕರರಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಕಡಿಮೆ. ಆದರೂ ಧಾರ್ಮಿಕ / ಸಾಮಾಜಿಕ ಚಟುವಟಿಕೆಗಳಾದ ಗಣೇಶ ಚತುರ್ಥಿಯೇ ಮೊದಲಾದ ಹಬ್ಬ ಹರಿದಿನಗಳನ್ನು ವಿಜೃಂಭಣೆ ಯಿಂದ, ಸಡಗರದಿಂದ, ಸಾಮೂಹಿಕವಾಗಿ ಆಚರಿಸುತ್ತಾರೆ.
ಮುಂಬಯಿಯ ಖಾದ್ಯಸಂಸ್ಕೃತಿಯ ಸಂಕೇತವೆಂದರೆ ವಡಾಪಾವ್ ಎನ್ನಬಹುದು. ಪಾಣೀಪುರಿ, ಪಾವ್ ಭಾಜಿ, ಭೇಳ್ ಪುರಿ, ದಕ್ಣಿಣ ಭಾರತೀಯ, ಪಂಜಾಬೀ, ಚೈನೀಸ್ ತಿನಿಸುಗಳೂ ಮುಂಬಯಿ ಯಲ್ಲಿ ಬಹಳ ಜನಪ್ರಿಯವಾಗಿವೆ.
UNESCO ಮುಂಬಯಿಗೆ ಮೂರು ಹೆರಿಟೇಜ್ ಪ್ರಶಸ್ತಿಗಳನ್ನು ಕೊಡಮಾಡಿದೆ.
ಭಾರತೀಯ ಚಿತ್ರರಂಗದ ಜನ್ಮಸ್ಥಾನವೇ ಮುಂಬಯಿ ಎನ್ನಬಹುದು. ದಾದಾಸಾಹೇಬ್ ಫಾಳಕೆ ಭಾರತದ ಮೊಟ್ಟಮೊದಲ ಚಲನಚಿತ್ರ ತಯಾರಿಸಿದ್ದು ಮುಂಬಯಿಯಲ್ಲಿ. ವಿಪುಲವಾಗಿದ್ದ ಚಿತ್ರಮಂದಿರಗಳು ಕಳೆದ ದಶಕಗಳಲ್ಲಿ , ಕಿರುತೆರೆಯ ದಾಳಿಯಿಂದ, ತಮ್ಮ ವರ್ಚಸ್ಸು ಕಳೆದುಕೊಂಡಿದ್ದರೂ,ಮಲ್ಟಿಪ್ಲೆಕ್ಸ್ ಗಳ ರೂಪದಲ್ಲಿ ಮತ್ತೆ ಪ್ರವರ್ಧಮಾನಕ್ಕೆ ಬರುತ್ತಿವೆ. ರಸಿಕರಿಗಾಗಿ ನಾಟ್ಯಮಂದಿರಗಳು, ಚಿತ್ರ-ಶಿಲ್ಪ-ಕರಕುಶಲ ವಸ್ತುಗಳ ಪ್ರದರ್ಶನಕ್ಕಾಗಿ ಸರಕಾರೀ ಹಾಗೂ ಖಾಸಗೀ ರಂಗದ ಆರ್ಟ್ ಗ್ಯಾಲರಿಗಳು ಇಲ್ಲಿವೆ. ಇವುಗಳಲ್ಲಿ ಕೆಲವು ಪ್ರಸಿದ್ಧ ತಾಣಗಳೆಂದರೆ ಜಹಾಂಗೀರ್ ಆರ್ಟ್ ಗ್ಯಾಲರಿ, ಏಶಿಯಾಟಿಕ್ ಸೊಸೈಟಿಯ ವಾಚನಾಲಯ ಮತ್ತು ಛತ್ರಪತಿ ಶಿವಾಜಿ ವಸ್ತು ಸಂಗ್ರಹಾಲಯ(ಹಳೆಯ ಹೆಸರು ಪ್ರಿನ್ಸ್ ಆಫ್ ವೇಲ್ಸ್ ಮ್ಯೂಸಿಯಮ್).
ಬರ್ಲಿನ್, ಲಂಡನ್ , ಲಾಸ್ ಏಂಜಲೀಸ್, ಸೆಯಿಂಟ್ ಪೀಟರ್ಸ್ ಬರ್ಗ್,ಸ್ಟುಟ್ ಗರ್ಟ್,ಯೋಕೋಹಾಮ ಈ ನಗರಗಳನ್ನು ಮುಂಬಯಿಯ ಭಗಿನಿ ನಗರಗಳೆಂದು (sister cities) ಪರಿಗಣಿಸಲಾಗಿದೆ.
[ಬದಲಾಯಿಸಿ] ಪ್ರಸಾರ ಮಾಧ್ಯಮಗಳು
ಅನೇಕ ಪ್ರಕಾಶನ ಸಂಸ್ಥೆಗಳು, ವೃತ್ತ ಪತ್ರಿಕೆಗಳು, ಕಿರುತೆರೆ ವಾಹಿನಿಗಳು ಮುಂಬಯಿಯಿಂದ ಕಾರ್ಯನಿರ್ವಹಿಸುತ್ತಿವೆ.ಇಂಗ್ಲೀಷ್ ಪತ್ರಿಕೆಗಳಲ್ಲಿ ಮುಖ್ಯವಾದವುಗಳೆಂದರೆ,ಟೈಮ್ಸ್ ಆಫ್ ಇಂಡಿಯಾ, ಇಂಡಿಯನ್ ಎಕ್ಸ್ ಪ್ರೆಸ್, ಡಿ.ಎನ್.ಏ, ಹಿಂದೂಸ್ತಾನ್ ಟೈಮ್ಸ್ , ಮಿಡ್ ಡೇ ಇತ್ಯಾದಿ. ಮಹಾರಾಷ್ಟ್ರ ಟೈಮ್ಸ್ , ಸಕಾಳ, ಲೋಕಸತ್ತಾ , ಸಾಮನಾ ಮತ್ತು ನವಾಕಾಳ ಮುಖ್ಯ ಮರಾಠಿ ಪತ್ರಿಕೆಗಳು. ಇವಲ್ಲದೆ ಗುಜರಾತಿ, ಕನ್ನಡ, ತಮಿಳು ಮುಂತಾದ ಇತರೇ ಭಾಷೆಗಳ ಪತ್ರಿಕೆಗಳೂ ಮುಂಬಯಿಯಿಂದ ಹೊರಡುತ್ತವೆ. ಕರ್ನಾಟಕ ಮಲ್ಲ ಎಂಬ ಕನ್ನಡ ಪತ್ರಿಕೆ ಮುಂಬಯಿಂದ ಪ್ರಕಟವಾಗುತ್ತಿದೆ. ಭಾರತದ ಅತಿ ಹಳೆಯ ದಿನಪತ್ರಿಕೆ ಎಂದು ಹೆಸರಾಗಿರುವ ಬಾಂಬೇ ಸಮಾಚಾರ್ ಎಂಬ ಪತ್ರಿಕೆ ಗುಜರಾತಿ ಮತ್ತು ಇಂಗ್ಲೀಷಿನಲ್ಲಿ ಮುಂಬಯಿಯಿಂದ 1822ರಿಂದಲೂ ಪ್ರಕಟವಾಗುತ್ತಿದೆ.
ಅನೇಕ ಕಿರುತೆರೆ ವಾಹಿನಿಗಳ ಕೇಂದ್ರ ಮತ್ತು ಪ್ರಾದೇಶಿಕ ಕಚೇರಿಗಳು ಮುಂಬಯಿಯಲ್ಲಿವೆ. ದೂರದರ್ಶನದ ಎರಡು ಕಿರುತೆರೆ ವಾಹಿನಿಗಳೊಂದಿಗೆ, ಮೂರು ಮುಖ್ಯ ಕೇಬಲ್ ಟಿವಿ ಜಾಲಗಳು ಮುಂಬಯಿಯ ಬಹುತೇಕ ಮನೆಗಳನ್ನು ತಲುಪಿವೆ.ಉಪಗ್ರಹ ಟಿವಿ (DTH) ಈಗಿನ್ನೂ (2006ರಲ್ಲಿ) ಪ್ರವೇಶಮಾಡುತ್ತಿದ್ದು ಬರುವ ದಿನಗಳಲ್ಲಿ ಹೆಚ್ಚು ಹೆಚ್ಚು ಜನಪ್ರಿಯವಾಗುವ ಸಂಭವವಿದೆ. 2006ರ ಕೊನೆಯಿಂದ ನಗರದ ಅನೇಕ ಕಡೆಗಳಲ್ಲಿ Conditional Access System (CAS) ಮೂಲಕವೇ ಟಿವಿ ವಾಹಿನಿಗಳ ಪ್ರಸಾರವನ್ನು ಕಡ್ಡಾಯ ಮಾಡಲಾಗಿದೆ. ಕೇಬಲ್ ಟಿವಿ ಜಾಲಗಳ ಮೇಲೆ DTH ಮತ್ತು CASಗಳ ಪರಿಣಾಮ ಏನೆಂದು ಈಗಲೇ ಊಹಿಸುವುದು ಅಸಾಧ್ಯವಾದರೂ, ಈ ಉದ್ಯಮ ಇನ್ನು ಕೆಲವರ್ಷಗಳಲ್ಲಿ ಮಹತ್ತರ ಬದಲಾವಣೆಯನ್ನು ಹೊಂದುವುದರಲ್ಲಿ ಏನೂ ಸಂಶಯವಿಲ್ಲ.
ಮುಂಬಯಿಯಲ್ಲಿ ಒಂಭತ್ತು ರೇಡಿಯೋ ಸ್ಟೇಷನುಗಳಿದ್ದು , ಇದರಲ್ಲಿ ಆರು FM ತರಂಗಗಳಲ್ಲಿ ಪ್ರಸಾರಮಾಡಿದರೆ, ಬಾಕಿ ಮೂರು ಆಕಾಶವಾಣಿಯ AM ತರಂಗಗಳಲ್ಲಿ ಪ್ರಸಾರವಾಗುತ್ತಿದೆ. FM ಕೇಂದ್ರಗಳು ಕಳೆದ ಕೆಲ ವರ್ಷಗಳಲ್ಲಿ ಪ್ರಾರಂಭವಾಗಿದ್ದು ಈಗಾಗಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿವೆ.
[ಬದಲಾಯಿಸಿ] ಶಿಕ್ಷಣ
ಮುಂಬಯಿ ಮಹಾನಗರಪಾಲಿಕೆ “ಮುನಿಸಿಪಲ್ ಶಾಲೆ”ಗಳನ್ನು ನಡೆಸುತ್ತದೆಯಾದರೂ, ಉತ್ತಮ ಶೈಕ್ಷಣಿಕ ಮಟ್ಟ ಮತ್ತು ಇಂಗ್ಲೀಷ್ ಮಾಧ್ಯಮದ ಕಲಿಕೆಯಿಂದ, ಜನಸಾಮಾನ್ಯರು ಅನೇಕ ಖಾಸಗೀ ಸಂಘ ಸಂಸ್ಥೆಗಳು ನಡೆಸುವ ಶಾಲಾಕಾಲೇಜುಗಳಿಗೆ ಪ್ರಾಧಾನ್ಯ ಕೊಡುತ್ತಾರೆ. ಇವುಗಳಲ್ಲಿ ಸರಕಾರೀ ಅನುದಾನ ಪಡೆಯುವ ಹಾಗೂ ಪಡೆಯದ ಶಾಲೆಗಳು ಸೇರಿವೆ. ಶಾಲೆಗಳು ಬಹುತೇಕ ರಾಜ್ಯ ಸರಕಾರದ ಎಸ್ ಎಸ್ ಸಿ ಬೋರ್ಡಿನ ಪಠ್ಯವನ್ನು ಅನುಸರಿಸುತ್ತವೆಯಾದರೂ, ಅಖಿಲ ಭಾರತ ಪಠ್ಯಕ್ರಮಗಳಾದ ಸಿ ಬಿ ಎಸ್ ಇ ಮತ್ತು ಐ ಸಿ ಎಸ್ ಇ ಪದ್ಧತಿಯನ್ನು ಅನುಸರಿಸುವ ಶಾಲೆಗಳೂ ಸಾಕಷ್ಟಿವೆ. ಸಿ ಬಿ ಎಸ್ ಇ ಮತ್ತು ಐ ಸಿ ಎಸ್ ಇ ಶಾಲೆಗಳಲ್ಲಿ ನೋಂದಣಿಗೆ ಹೆಚ್ಚು ಬೇಡಿಕೆಯಿದೆ. ಸರಕಾರೀ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಾವವಿದ್ದರೂ, ಖಾಸಗೀ ಶಾಲೆಗಳ ದುಬಾರಿ ಶುಲ್ಕದ ದೆಸೆಯಿಂದ ಬಡಜನತೆಗೆ ಸರಕಾರೀ ಶಾಲೆಗಳೇ ಅನಿವಾರ್ಯವಾಗಿವೆ. ಈಚೀಚೆಗೆ ಅಂತರರಾಷ್ಟ್ರೀಯ ಪಠ್ಯಕ್ರಮಗಳಾದ ಐ ಬಿ (International Baccalaureate) ಯನ್ನು ಅನುಸರಿಸುವ ಶಾಲೆಗಳೂ ಪ್ರಾರಂಭವಾಗಿದ್ದರೂ , ಇವುಗಳ ಅತಿ ದುಬಾರೀ ಶುಲ್ಕ, ಸಾಧಾರಣ ಮಧ್ಯಮವರ್ಗೀಯರಿಗೂ ಕೈಗೆಟುಕದಾಗಿದೆ. ಇಲ್ಲಿಯ ಶಿಕ್ಷಣ ಪದ್ಧತಿ 10+2+3 ಯನ್ನು ಅನುಸರಿಸುತ್ತದೆ. ಅರ್ಥಾತ್ , ಹತ್ತು ವರ್ಷದ ಶಾಲೆಯ ನಂತರ ಎರಡು ವರ್ಷದ ಪದವಿಪೂರ್ವ ಶಿಕ್ಷಣವಿದೆ. ಇದಾದಮೇಲೆ ಮೂರು ವರ್ಷದ ಕಲಾ, ವಿಜ್ಞಾನ ಅಥವಾ ವಾಣಿಜ್ಯ ಪದವಿ ಶಿಕ್ಷಣ. ಇಂಜಿನಿಯರಿಂಗ್ ಪದವಿ ನಾಲ್ಕು ವರ್ಷದ್ದಾದರೆ, ವೈದ್ಯಕೀಯ ಶಿಕ್ಷಣ ಸುಮಾರು ಐದು-ಐದೂವರೆ ವರ್ಷ ಅವಧಿಯದಾಗಿದೆ. ಮುಂಬಯಿಯ ಬಹುತೇಕ ಕಾಲೇಜುಗಳ ಪಠ್ಯಕ್ರಮ, ಪರೀಕ್ಷೆ ಇತ್ಯಾದಿ ಮುಂಬಯಿ ವಿಶ್ವವಿದ್ಯಾನಿಲಯದ ಅಧೀನದಲ್ಲಿವೆ. ಪ್ರತಿವರ್ಷ ಹೊರಬರುವ ಪದವೀಧರ ಸಂಖ್ಯೆಯನ್ನು ಪರಿಗಣನೆಯಲ್ಲಿ , ಮುಂಬಯಿ ವಿಶ್ವವಿದ್ಯಾಲಯ ಪ್ರಪಂಚದಲ್ಲಿಯೇ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದು. ಇದಲ್ಲದೇ ಪ್ರಖ್ಯಾತ ಐ ಐ ಟಿ ( ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸಹಾ ಇಲ್ಲಿದೆ. ಎಸ್ ಎನ್ ಡಿ ಟಿ ಮಹಿಳಾ ವಿಶ್ವವಿದ್ಯಾಲಯ ಮತ್ತು ನರ್ಸೀ ಮೋನ್ಜೀ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ ಮುಂಬಯಿಯ ಇತರ ವಿಶ್ವವಿದ್ಯಾಲಯಗಳು.
[ಬದಲಾಯಿಸಿ] ಕ್ರೀಡೆ
ಮುಂಬಯಿ ಅತಿ ಜನಪ್ರಿಯ ಆಟ ಎಂದರೆ ಕ್ರಿಕೆಟ್. ನಗರದಲ್ಲಿರುವ ಅನೇಕ ಮೈದಾನಗಳಲ್ಲಿಯೇ ಏಕೆ, ಗಲ್ಲಿ ಕ್ರಿಕೆಟ್ ಎಂದೇ ಹೆಸರಾಗಿರುವ , ಸಣ್ಣ ಪುಟ್ಟ ಓಣಿಗಳಲ್ಲಿಯೂ ಸಮಯ ಸಿಕ್ಕಾಗಲೆಲ್ಲ ಕ್ರಿಕೆಟ್ ಆಡುವುದನ್ನು ಕಾಣಬಹುದು. ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮುಖ್ಯ ಕಚೇರಿ ಮುಂಬಯಿಯಲ್ಲಿದೆ. ಮುಂಬಯಿಯ ಬ್ರಬೋರ್ನ್ ಮತ್ತು ವಾಂಖೇಡೆ ಕ್ರೀಡಾಂಗಣಗಳು ಅಂತರರಾಷ್ಟ್ರೀಯ ಮಟ್ಟದವುಗಳಾಗಿವೆ.
ಭಾರತದ ಕ್ರಿಕೆಟ್ಟಿನ ತವರು ಮನೆ ಎಂದೇ ಕರೆಯಬಹುದಾದ ಮುಂಬಯಿ, ಅನೇಕ ಪ್ರತಿಭಾವಂತ ಕ್ರಿಕೆಟರುಗಳನ್ನು ಭಾರತ ತಂಡಕ್ಕೆ ನೀಡಿದೆ. ಇಂದಿನ ಸಚಿನ್ ತೆಂಡೂಲ್ಕರ್, ಅಜಿತ್ ಅಗರಕರ್ ಹಿಂದಿನ ಅಜಿತ್ ವಾಡೇಕರ್ , ಸುನೀಲ್ ಗವಾಸ್ಕರ್, ಫಾರೂಖ್ ಇಂಜಿನಿಯರ್ , ವಿನೋದ್ ಕಾಂಬ್ಳಿ,ವಿಜಯ್ ಮಾಂಜ್ರೇಕರ್ ಇವರುಗಳು ಮುಂಬಯಿ ಖ್ಯಾತ ಕ್ರಿಕೆಟಿಗರಲ್ಲಿ ಕೆಲವೇ ಕೆಲವರು. ರಣಜೀ ಟ್ರೋಫಿಯನ್ನು ಕಳೆದ ಎಪ್ಪತ್ತೆರಡು ವರ್ಷಗಳಲ್ಲಿ ಮೂವತ್ತಾರು ಬಾರಿ (2005-06ರವರೆಗೆ) ಗೆದ್ದಿರುವ ಮುಂಬಯಿಯ ದಾಖಲೆಯನ್ನು ಮುರಿಯುವುದು ಸುಲಭ ಸಾಧ್ಯವಲ್ಲ. ಎಪ್ಪತ್ತರ ದಶಕದಲ್ಲಿ ಭಾರತದ ಕ್ರಿಕೆಟ್ ತಂಡದಲ್ಲಿ ಏಳು-ಎಂಟು ಆಟಗಾರರು ಮುಂಬಯಿಯವರೇ ಆಗಿರುತ್ತಿದ್ದುದುಂಟು. ಆದರೆ , ಈಚೀಚೆಗೆ, ಭಾರತದ ಇತರ ಪ್ರದೇಶಗಳು, ಕರ್ನಾಟಕವೂ ಸೇರಿದಂತೆ , ಕ್ರಿಕೆಟಿನಲ್ಲಿ ಮುಂಬಯಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಿದ್ದು ಮುಂಬಯಿ ತನ್ನ ಮೊದಲಿನ ಅತಿವಿಶಿಷ್ಟ ಸ್ಥಾನವನ್ನು ಕಳೆದುಕೊಂಡಿದೆ.
ಫುಟ್ ಬಾಲ್ ಸಹಾ ಮುಂಬಯಿಯ ಅತಿ ಜನಪ್ರಿಯ ಕ್ರೀಡೆ. ಮುಖ್ಯವಾಗಿ ಮಳೆಗಾಲದಲ್ಲಿ ಕಾಣಬರುವ ಈ ಕ್ರೀಡೆ, ಲೀಗ್ ಪಂದ್ಯಾವಳಿಗಳಿಂದ ಇನ್ನೂ ಜೀವಂತವಾಗಿದೆ. ಹಾಕಿ ಆಟವು ಮೊದಲಿನ ಘನತೆಯನ್ನು ಕಳೆದುಕೊಂಡಿದ್ದರೂ, ಮುಂಬಯಿಯ ಅನೇಕ ಹಾಕೀ ಆಟಗಾರರು ಭಾರತವನ್ನು ಪ್ರತಿನಿಧಿಸಿದ್ದಾರೆ.
ಮುಂಬಯಿಯ ಇತರ ಕ್ರೀಡೆಗಳೆಂದರೆ ಟೆನ್ನಿಸ್, ಸ್ಕ್ವಾಶ್, ಬಿಲಿಯರ್ಡ್ಸ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮತ್ತು ಗಾಲ್ಫ್. ರಗ್ಬೀ ಆಟ ಕಾಣಸಿಗುವ ಭಾರತದ ಕೆಲವೇ ಕೆಲವು ನಗರಗಳಲ್ಲಿ ಮುಂಬಯಿಯೂ ಒಂದು.ವಾಲಿಬಾಲ್ ಮತ್ತು ಬ್ಯಾಸ್ಕೆಟ್ ಬಾಲ್ ಕೂಡಾ ಶಾಲಾಕಾಲೇಜುಗಳಲ್ಲಿ ಜನಪ್ರಿಯವಾಗಿವೆ. ಕುದುರೆ ರೇಸಿನ ಪ್ರಿಯರಿಗಾಗಿ ಮಹಾಲಕ್ಷ್ಮಿ ರೇಸ್ ಕೋರ್ಸ್ ಇದೆ. ಪ್ರತಿ ಫೆಬ್ರುವರಿಯಲ್ಲಿ ನಡೆಯುವ ಡರ್ಬಿ , ಭಾರತದ ಪ್ರತಿಷ್ಠಿತ ರೇಸುಗಳಲ್ಲಿ ಒಂದು.